ಪರಾಜಿತ ನಂದನ್ ನಿಲೇಕಣಿ ಹೊರಟರೆಲ್ಲಿಗೆ?
ಬೆಂಗಳೂರು, ಮೇ 20: ಪ್ರತಿಷ್ಠಿತ ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಬಿಜೆಪಿಯ ಬಲಾಢ್ಯ ಅಭ್ಯರ್ಥಿ ಅನಂತಕುಮಾರ್ ಅವರೆದುರು ಪರಾಜಿತರಾದ ಕಾಂಗ್ರೆಸ್ಸಿನ ನಂದನ್ ನಿಲೇಕಣಿ ಅವರ ಮುಂದಿನ ನಡೆಯೇನು?
'ಸೋತರೂ ಕ್ಷೇತ್ರದ ಜನತೆಯ ಸೇವೆಯಲ್ಲಿ ತೊಡಗುವೆ. ರಾಜಕೀಯ ಬಿಡೋಲ್ಲ' ಎಂದು ಚುನಾವಣೆಗೆ ಮುನ್ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದರು. ಆದರೆ ಈಗ ಪಕ್ಷವೂ ಹೀನಾಯ ಸೋಲು ಅನುಭವಿಸಿರುವ ಹಿನ್ನೆಲೆಯಲ್ಲಿ ನಿಲೇಕಣಿ ಅವರ ಸೋಲಿನ ತೂಕವೂ ಬಲು ಭಾರವಾಗಿದೆ.
ಹಾಗಾಗಿ ಭಾರಿ ಅಪಜಯದ ನಂತರ ನಿಲೇಕಣಿ ಮುಂದೇನು ಮಾಡಬಹುದು? ಎಂಬ ಕುತೂಹಲ ಮೂಡಿದೆ. ಜತೆಗೆ, ಚುನಾವಣಾ ಸಂದರ್ಭದಲ್ಲಿ ಬರಾಕ್ ಒಬಾಮಾ ಅವರಿಗಾಗಿ ದುಡಿದ ಟೆಕ್ಕಿಗಳ ತಂಡದಂತೆ ನಿಲೇಕಣಿ ಅವರಿಗಾಗಿಯೂ ದುಡಿದ ಟೆಕ್ಕಿಗಳ ತಂಡ ಮುಂದೇನು ನಿರುದ್ಯೋಗದ ಸುಳಿಗೆ ಸಿಲುಕುತ್ತಾರಾ? ಎಂಬ ಪ್ರಶ್ನೆಗಳು ಕಾಡತೊಡಗಿವೆ.
ಆದರೆ ತಕ್ಷಣಕ್ಕೆ ಇತ್ತ ಅನಂತಕುಮಾರ್ ಅವರು ಇದೇ ವಾರಾಂತ್ಯ ಕೇಂದ್ರ ಸಚಿವ ಸ್ಥಾನ ಅಲಕಂರಿಸುವ ಸಮಯದಲ್ಲೇ ಅತ್ತ ನಂದನ್ ನಿಲೇಕಣಿ ಅವರು ಬೋಸ್ಟನಿಗೆ ಪ್ರಯಾಣ ಬೆಳಸಲಿದ್ದಾರೆ. ಅಲ್ಲಿರುವ ತಮ್ಮ ಮಕ್ಕಳ ಜತೆ ಒಂದಷ್ಟು ಕಾಲ ಇದ್ದು ಬರುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಇತ್ತ 7,700 ಕೋಟಿ ರೂ ಆಸ್ತಿಯ ಒಡೆಯನಿಗೆ ನಿಷ್ಠರಾಗಿದ್ದ ಅವರ ಪರಮಾಪ್ತ ಟೆಕ್ಕಿ ತಂಡದವರು ಮುಂದೆ 5 ವರ್ಷ ಸುದೀರ್ಘ ಕಾಲ ಸುಮ್ಮನೆ ಕುಳಿತಿರುವುದು ಅಸಾಧ್ಯದ ಮಾತು. ಆದರೂ ಅವರೆಲ್ಲಾ ಚಿಂತಕರ ಚಾವಡಿಯಾಗಿ (think tank) ಕೆಲಸ ಮುಂದುವರಿಸುತ್ತಾರೆ. ಇನ್ನು, ಚುನಾವಣೆಯಲ್ಲಿ ಸೋತರೂ ಕ್ಷೇತ್ರದ ಜನತೆಯಲ್ಲಿ ಒಳ್ಳೆಯ ಹೆಸರು ಗಳಿಸಿದ ನಂದನ್ ನಿಲೇಕಣಿ ಅವರಿಗೆ ಶುಭವಾಗಲಿ!