ಜಯನಗರದಲ್ಲಿ ಹಸಿರು ಬೆಂಗಳೂರು ಸಂಕಲ್ಪ ಕೈಗೊಂಡ ಕೈ ಅಭ್ಯರ್ಥಿ
ಬೆಂಗಳೂರು, ಏಪ್ರಿಲ್ 14: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ, ಪಾದಯಾತ್ರೆ, ರೋಡ್ ಶೋ ಮೂಲಕ ಮತದಾರರ ಗಮನ ಸೆಳೆಯುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ 'ಹಸಿರು ಬೆಂಗಳೂರಿಗಾಗಿ ಹಲವು ಯೋಜನೆಗಳನ್ನು ಪ್ರಕಟಿಸಿದರು.
ಬೆಂಗಳೂರು ನಗರವನ್ನು ಇನ್ನಷ್ಟು ಹಸಿರುಗೊಳಿಸುವುದಕ್ಕಾಗಿ ಹಲವಾರು ಯೋಜನೆಗಳನ್ನು ರೂಪಿಸಿದ್ದು, ಹಸಿರು ಬೆಂಗಳೂರಿಗಾಗಿ ಈಗಿರುವ ಉದ್ಯಾನವನಗಳ ಅಭಿವೃದ್ದಿ, ಲಾಲ್ ಭಾಗ್ ಮಾದರಿಯ ನೂತನ ಉದ್ಯಾನವನ ನಿರ್ಮಾಣ, ರಸ್ತೆ ಬದಿಯಲ್ಲಿ ಸಾಲು ಮರಗಳನ್ನು ನೆಡುವುದು, ಈಗಿರುವಮರಗಳ ಸೂಕ್ತ ಆರೈಕೆ, ಸ್ಯಾಂಕಿ ಕರೆ ಮಾದರಿಯಲ್ಲಿ ಕ್ಷೇತ್ರದ ಕೆರೆಗಳ ಅಭಿವೃದ್ದಿ ಮುಂತಾದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದಾಗಿ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬಿ ಕೆ ಹರಿಪ್ರಸಾದ್ ಹೇಳಿದ್ದಾರೆ.
ಮೂರು ವಿಧಾನಸಭಾ ಕ್ಷೇತ್ರಗಳಲ್ಲಿ ಬಿಕೆ ಹರಿ ಪ್ರಸಾದ್ ರೋಡ್ ಶೋ
ಜಯನಗರದ ಸಾವಯವ ಹೋಟೇಲ್ ನಲ್ಲಿ ಪರಿಸರವಾದಿಗಳೊಂದಿಗೆ "ಪರಿಸರವಾದದೊಂದಿಗೆ ಪ್ರಜಾಪ್ರಭುತ್ವ" ದ ಬಗ್ಗೆ ಚರ್ಚೆ ನಡೆಸಿದ ಅವರು ತಮ್ಮ ಕನಸಿನ ಯೋಜನೆಗಳನ್ನು ಹಂಚಿಕೊಂಡರು. ಬೆಂಗಳೂರಿನ ಪರಿಸರವನ್ನು ಕಾಪಾಡುವುದು ನಮ್ಮ ಪ್ರಥಮ ಆಧ್ಯತೆ ಆಗಿರಲಿದೆ. ಈಗಿನ ವಾಯುಮಾಲಿನ್ಯ ಹಾಗೂ ಇನ್ನಿತರೆ ಸಮಸ್ಯೆಗಳನ್ನು ಕಡಿಮೆಗೊಳಿಸುವುದಕ್ಕೆ ಹೆಚ್ಚಿನ ಒತ್ತು ನೀಡಲಿದ್ದೇವೆ. ಪರಿಸರ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ. ಹೀಗಾಗಿ ನಗರದ ಸೌಂದರ್ಯ ಹಾಗೂ ಮರಗಳನ್ನು ನೆಡುವುದಕ್ಕೆ ಹೆಚ್ಚಿನ ಪ್ರಾಧಾನ್ಯತೆ ನೀಡಲಿದ್ದೇನೆ ಎಂದರು.
ಪರಿಸರವಾದಿಗಳ ಸಭೆಯಲ್ಲಿ ಚಿತ್ರ ನಿರ್ದೇಶಕ ಅಪೂರ್ವ ಕಾಸರವಳ್ಳಿ, ಹಿರಿಯ ರಂಗಕರ್ಮಿ ಮಲ್ಲಿಕಾರ್ಜುನ ಕಡಕೋಳ, ನೃತ್ಯ ಕಲಾವಿದೆ ವಂದನಾ, ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಪರಿಸರವಾದಿ ಡಾ ಆರ್ ಹೆಚ್ ಸಾಹುಕಾರ್, ರಾಮಕೃಷ್ಣ ಭಟ್, ಸಿ ಯತಿರಾಜ್, ಸಮಾಜವಾದಿ ಚಿಂತಕ ಜಿ ವಿ ಸುಂದರ್, ಸಾವಯವ ಕೃಷಿಕರಾದ ಜಯರಾಂ ಭಾಗವಹಿಸಿದ್ದರು.
ಜಯನಗರದಲ್ಲಿ ವಿದ್ಯಾರ್ಥಿಗಳ ಜೊತೆ ಬಿಕೆ ಹರಿ ಪ್ರಸಾದ್ ಸಂವಾದ
ನಂತರ ಬಿ ಕೆ ಹರಿಪ್ರಸಾದ್ ಅವರು ಬಸವನಗುಡಿಯ ಹನುಮಂತನಗರದಲ್ಲಿ ಬೃಹತ್ ಬೈಕ್ rallyಯಲ್ಲಿ ಪಾಲ್ಗೊಂಡಿದ್ದರು. ಗವಿಗಂಗಾಧರೇಶ್ವರ ಸನ್ನಿಧಿಯಲ್ಲಿ ಆರ್ಶಿರ್ವಾದ ಪಡೆದು rallyಗೆ ಚಾಲನೆ ನೀಡಲಾಯಿತು. ಮರಾಠ ಹಾಸ್ಟೆಲ್ ನಲ್ಲಿ ನಡೆದ ಕಮ್ಮ ನಾಯ್ದು ಸಮುದಾಯದ ನಾಯಕರೊಂದಿಗೆ ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು.
'65 ವರ್ಷ ಸುಭದ್ರ ಆಡಳಿತ ನೀಡಿದ ಕಾಂಗ್ರೆಸ್ಸಿಗೆ ಮತ ನೀಡಿ'
ಇದೇ ವೇಳೆ ಎನ್ ಎಸ್ ಯು ಐ ಘಟಕದ ಕಾರ್ಯಕರ್ತರು ಕೇಸರೀ ಶಾಲು ಧರಿಸಿ ಮತಪ್ರಚಾರದಲ್ಲಿ ಪಾಲ್ಗೊಂಡಿದ್ದು ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು.