ಆರ್ ಟಿ ನಗರ: ಎಸಿ ಸ್ಫೋಟಕ್ಕೆ ಇಡೀ ಕುಟುಂಬವೇ ಭಸ್ಮ
ಮೃತಪಟ್ಟವರನ್ನು ಶಿವರುದ್ರಪ್ಪ (33), ಅವರ ಮಗಳು ಐಶ್ವರ್ಯ (4) ಮತ್ತು ಪತ್ನಿ ವೀಣಾ (26) ಎಂದು ಗುರುತಿಸಲಾಗಿದೆ. ನಿನ್ನೆ ರಾತ್ರಿ ಶಿವರುದ್ರಪ್ಪ ಅವರ ಮನೆಯಲ್ಲಿ ಆಕಸ್ಮಿಕವಾಗಿ ಎಸಿ ಸ್ಫೋಟಿಸಿ, ಅಗ್ನಿ ಅವಘಡ ಸಂಭವಿಸಿತ್ತು.
ಮನೆಯಿಂದ ಭಾರಿ ಪ್ರಮಾಣದ ಹೊಗೆ ಹೊರಸೂಸುತ್ತಿರುವುದನ್ನು ಗಮನಿಸಿ ಸ್ಥಳೀಯರು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ, ಮನೆಯೊಳಗಿದ್ದವರನ್ನು ಹೊರಕ್ಕೆ ಕರೆತಂದಿದ್ದರು. ತೀವ್ರವಾಗಿ ಬೆಂದುಹೋಗಿದ್ದ ಮಗು ಸ್ಥಳದಲ್ಲೇ ಸಾವನ್ನಪ್ಪಿತ್ತು.
ಗಾಯಗೊಂಡಿದ್ದ ದಂಪತಿ ಶಿವರುದ್ರಪ್ಪ ಮತ್ತು ವೀಣಾ ಅವರುಗಳನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗಿನ ಜಾವ ಅವರೂ ಮೃತರಾದರು ಎಂದು ಆರ್ ಟಿ ನಗರ ಪೊಲೀಸರು ತಿಳಿಸಿದ್ದಾರೆ. ವಿದ್ಯುತ್ ಶಾರ್ಟ್ ಸರ್ಕ್ಯೂಟಿನಿಂದ ಕಾಣಿಸಿಕೊಂಡ ಬೆಂಕಿಯಿಂದ ಎಸಿ ಸ್ಫೋಟಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಮಲ್ಲೇಶ್ವರದಲ್ಲಿ ಇತ್ತೀಚೆಗೆ (ಫೆ. 2ರಂದು) ರೆಫ್ರಿಜರೇಟರಿನಲ್ಲಿ ವಿದ್ಯುತ್ ಪ್ರವಹಿಸಿ ಸ್ಫೋಟಗೊಂಡ ಪರಿಣಾಮ ಮೈಸೂರು ದಿವಾನಗರಾಗಿದ್ದ ರಾಜ್ ಬಹದ್ದೂರ್ ನರಸಿಂಹಾಚಾರ್ ಅವರ ಮೊಮ್ಮಗಳು ಎಂಎ ಯದುಗಿರಿ ಶ್ರೀನಿವಾಸುಲು ದುರ್ಮರಣಕ್ಕೀಡಾಗಿದ್ದನ್ನು ಇಲ್ಲಿ ಸ್ಮರಿಸಬಹುದು.