ಬಣ್ಣದ ಗಣಪತಿಗೆ ಬೈ, ಮಣ್ಣಿನ ಗಣೇಶನಿಗೆ ಜೈ
ಬೆಂಗಳೂರು, ಆ. 27 : ನಿಮ್ಮ ಮನೆಯಲ್ಲಿ ಈ ಬಾರಿ ಬಣ್ಣದ ಗಣಪತಿ ತಂದ್ರಾ?, ನಾವಂತೂ ತರೋಲ್ವಪ್ಪಾ, ನಾವ್ ಈ ಬಾರಿ ಬಣ್ಣವಿಲ್ಲದ ಮಣ್ಣಿನ ಗಣಪತಿನೇ ಕೂರಿಸ್ತೇವೆ... ಇಂಥ ನಿಮ್ಮ ಮಾತು ನೆರೆಮನೆಯವರಿಂದ ಕೇಳಿ ಬಂದಿದ್ದರೆ ಆಶ್ಚರ್ಯವಿಲ್ಲ.
ಯಾಕೆಂದರೆ ಈ ಸಾರಿ ಮಹಾನಗರದ ಜನ ಪರಿಸರ ಸ್ನೇಹಿ ಗಣೇಶ ಹಬ್ಬಕ್ಕೆ ಪಣ ತೊಟ್ಟಂತೆ ಕಂಡುಬರುತ್ತಿದೆ. ಅದಕ್ಕೆ ಪೂರಕವಾಗಿ ಬಣ್ಣ ರಹಿತ ಮಣ್ಣಿನ ಗಣಪತಿಗೆ ಬೇಡಿಕೆ ಹೆಚ್ಚಿದೆ.
ಮಹಾನಗರದ ಪ್ರಮುಖ ಕೇಂದ್ರಗಳಾದ ಆರ್.ವಿ.ರಸ್ತೆ, ವಿ.ವಿ.ಪುರ, ಮಲ್ಲೇಶ್ವರ, ಟ್ಯಾನರಿ ರಸ್ತೆಗಳಲ್ಲಿ ಗಣೇಶ ಮೂರ್ತಿ ಮಾರಾಟ ಭರಾಟೆ ಜೋರಾಗಿದೆ. ಅಲ್ಲದೇ ಬಡಾವಣೆಗಳ ಗಲ್ಲಿ ಗಲ್ಲಿಗಳಲ್ಲೂ ವಿವಿಧ ಬಗೆಯ ಗಣೇಶ ಮೂರ್ತಿಗಳು ಲಭ್ಯವಿದೆ. ಬಹುತೇಕ ಜನರು ಬಣ್ಣ ರಹಿತ ಮಣ್ಣಿನ ಗಣಪತಿ ಕೊಂಡೊಯ್ಯುತ್ತಿರುವುದು ಉತ್ತಮ ಬೆಳವಣಿಗೆ ಎಂದೇ ಹೇಳಬಹುದು.
ಪರಿಸರ ಸಂರಕ್ಷಣೆ ನಿಟ್ಟಿನಲ್ಲಿ ಸರ್ಕಾರಗಳು, ಮಾಧ್ಯಮಗಳು ಮೂಡಿಸಿದ ಜಾಗೃತಿಯೋ ಅಥವಾ ಸ್ವಯಂ ಜಾಗೃತಿಯೋ ಒಟ್ಟಿನಲ್ಲಿ ಈ ಬಾರಿಯ ಗಣೇಶ ಹಬ್ಬ ಪರಿಸರಸ್ನೇಹಿಯಾಗುವ ಲಕ್ಷಣ ಕಂಡುಬರುತ್ತಿದೆ.
ಗಣಪತಿ ಮೂರ್ತಿಗೆ ಬೆಲೆಗಳು
ಚಿಕ್ಕ ಮತ್ತು ಮಧ್ಯಮ ಗಾತ್ರದ ಪರಿಸರಸ್ನೇಹಿ ಗಣಪತಿಗಳ ಬೆಲೆ 50 ರೂ. ನಿಂದ ಹಿಡಿದು 1500 ಸಾವಿರ ರೂ. ವರೆಗೆ ಇದೆ. 2 ರಿಂದ 6 ಅಡಿ ಎತ್ತರದ ಮೂರ್ತಿಗಳಿಗೆ 3 ರಿಂದ 8 ಸಾವಿರ ರೂ. ನಿಗದಿಯಾಗಿದೆ. ದೊಡ್ಡ ಮತ್ತು ಅತಿದೊಡ್ಡ ಗಣಪತಿಗಳು 12 ಸಾವಿರ ರೂಪಾಯಿಂದ ಒಂದೂವರೆ ಲಕ್ಷ ರೂ.ವರೆಗಿವೆ.
ದೊಡ್ಡ ಗಣಪತಿಗಳಿಗೆ ಕುಂದಿದ ಬೇಡಿಕೆ
ಈ ಬಾರಿ ಜನರು ಚಿಕ್ಕ ಮೂರ್ತಿಗಳನ್ನೇ ನೆಚ್ಚಿಕೊಂಡಿದ್ದಾರೆ. ಗಲ್ಲಿಗಳಲ್ಲಿ ಪ್ರತಿಷ್ಠಾಪಿಸುವವರು ಸಹ 6 ಅಡಿ ಮೂರ್ತಿಯೇ ಸಾಕು ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಪರಿಣಾಮ ದೊಡ್ಡ ಮೂರ್ತಿಗಳಿಗೆ ಬೇಡಿಕೆ ಕುಸಿಯುತ್ತಿದೆ ಎನ್ನುತ್ತಾರೆ ಕತ್ರಿಗುಪ್ಪೆ ಬಳಿಯ ವ್ಯಾಪಾರಿ ನಂಜುಡಸ್ವಾಮಿ.
ನಗರಕ್ಕೆ ಮೂರ್ತಿಗಳು ಬರುವುದು ಎಲ್ಲಿಂದ?
ಪ್ರತಿ ವರ್ಷ ಬೆಂಗಳೂರಿನಲ್ಲಿ ಸುಮಾರು 18 ಲಕ್ಷಕ್ಕೂ ಅಧಿಕ ಮೂರ್ತಿಗಳು ಮಾರಾಟವಾಗುತ್ತವೆ. ಇವುಗಳು ನಗರಕ್ಕೆ ಆಗಮಿಸುವುದು ತಮಿಳುನಾಡು ಮತ್ತು ನಾಗವಾರದಿಂದ. ಮೂರ್ತಿಗಳನ್ನು ಅಲ್ಲಿಂದ ಇಲ್ಲಿಯವರೆಗೆ ಸುರಕ್ಷಿತವಾಗಿ ತರುವುದು ಒಂದು ಸವಾಲಿನ ಕೆಲಸ ಎಂದು ಜನತಾ ಬಝಾರ್ ಸಮೀಪದ ಗಣೇಶ ಮೂರ್ತಿ ವ್ಯಾಪಾರಿ ನಾಗರಾಜ್ ಹೇಳುತ್ತಾರೆ.
ಯಾವ ಯಾವ ನಮೂನೆಯ ಮೂರ್ತಿ ಲಭ್ಯ?
ಈ ಬಾರಿ ಗಣೇಶ, ನರೇಂದ್ರ ಮೋದಿ ಅವತಾರವನ್ನು ತಾಳಿದ್ದಾನೆ. ಅಲ್ಲದೇ ಜಿಂಕೆ, ನವಿಲು, ಬಸವ, ಕಮಲ, ತ್ರಿಶುಲ, ಕೃಷ್ಣಮೃಗದ ಮೇಲೆ ಕುಳಿತ ಗಣೇಶ ಆಕರ್ಷಕವಾಗಿದ್ದಾನೆ. ಜತೆಗೆ ಅರ್ಧನಾರೀಶ್ವರನ ರೀತಿ ಮೂರ್ತಿ ಗಮನ ಸೆಳೆಯುತ್ತದೆ.
ಮನೆಯಲ್ಲಿ ಗಣಪತಿ ಕೂರಿಸುವರ ಸಂಖ್ಯೆ ಎಷ್ಟು?
ಮಹಾನಗರ ವ್ಯಾಪ್ತಿಯ 15 ಲಕ್ಷಕ್ಕೂ ಅಧಿಕ ಮನೆಗಳಲ್ಲಿ ಗಣೇಶ ವಿರಾಜಮಾನನಾಗುತ್ತಾನೆ. ಈಗಾಗಲೇ 7 ಲಕ್ಷಕ್ಕೂ ಅಧಿಕ ಮೂರ್ತಿ ಮಾರಾಟವಾದ ಅಂದಾಜಿದೆ ಎನ್ನುತ್ತಾರೆ ಆರ್,ವಿ.ರಸ್ತೆಯ ಮೂರ್ತಿ ಮಾರಾಟಗಾರರು.
ಮೂರ್ತಿ ವಿಸರ್ಜನೆಗೆ ಎಲ್ಲೆಲ್ಲಿ ಅವಕಾಶ?
ಬಿಬಿಎಂಪಿ ಮತ್ತು ಬಿಡಿಎ ಮೂರ್ತಿ ವಿಸರ್ಜನೆಗೆ ಮಹಾನಗರ ವ್ಯಾಪ್ತಿಯ 29 ಕೆರೆಗಳಲ್ಲಿ ಅವಕಾಶ ಕಲ್ಪಿಸಿದೆ. ಕೃತಕ ಕಲ್ಯಾಣಿಗಳನ್ನು ನಿರ್ಮಿಸಿ ವಿಸರ್ಜನೆಗೆ ಸೌಲಭ್ಯ ಕಲ್ಪಿಸಲಾಗಿದೆ. ಹಲಸೂರು, ಸ್ಯಾಂಕಿ, ಯಡುಯೂರು, ಜಕ್ಕೂರು, ಮಲ್ಲತಹಳ್ಳಿ ಕೆರೆ ಸೇರಿದಂತೆ ಹಲವೆಡೆ ಮೂರ್ತಿ ವಿಸರ್ಜಿಸಬಹುದು. ಅಲ್ಲದೇ ಪ್ರತಿ ಮನೆಗೆ ತೆರಳಳೂ 400 ಮೊಬೈಲ್ ವಾಹನಗಳನ್ನು ಸಿದ್ಧಪಡಿಸಲಾಗಿದೆ.
ಪಟಾಕಿ ಸಿಡಿಸುವಂತಿಲ್ಲ
ಈ ಬಾರಿ ಗಣಪತಿ ವಿಸರ್ಜನೆ ಮಾಡಿದ ನಂತರ ಮಧ್ಯರಾತ್ರಿಯವರೆಗೆ ಮನಬಂದಂತೆ ಪಟಾಕಿ ಸಿಡಿಸುವಂತಿಲ್ಲ. ಅಲ್ಲದೇ ವಿಸರ್ಜನೆಗೆ ತೆರಳುವ ಕೆರೆಗಳ ಸಮೀಪ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ರಾತ್ರಿ 10.30ಕ್ಕೆ ಎಲ್ಲ ಕಾರ್ಯಕ್ರಮ ಮುಕ್ತಾಯವಾಗಬೇಕು ಎಂದು ಪೊಲೀಸ್ ಇಲಾಖೆ ತಿಳಿಸಿದೆ.