ಭಾರತ ಲಾಕ್ ಡೌನ್ ನಡುವೆ ಶಾಲಾ ಬಸ್ ಚಾಲಕರು ಕಿಕ್ ಔಟ್
ಬೆಂಗಳೂರು, ಮಾರ್ಚ್.31: ಬರಗಾಲದಲ್ಲಿ ಅಧಿಕ ಮಾಸ.. ಗಾಯದ ಮೇಲೆ ಬರೆ ಹಾಕುವುದು.. ಇಂಥ ಗಾದೆಮಾತುಗಳು ಬೆಂಗಳೂರಿನಲ್ಲಿ ನಡೆದಿರುವ ಇದೊಂದು ಘಟನೆಗೆ ಸಾಕ್ಷಿಯಾಗುತ್ತಿವೆ.
ಕೊರೊನಾ ವೈರಸ್ ಕಾಟದಿಂದ ಮುಕ್ತಿ ಹೊಂದೋಕೆ ಭಾರತ ಲಾಕ್ ಡೌನ್ ಗೆ ಕೇಂದ್ರ ಸರ್ಕಾರ ಕಟ್ಟಪ್ಪಣೆ ಹೊರಡಿಸಿದೆ. ರಾಜ್ಯ ಸರ್ಕಾರವು ಬಡವರು, ಅಸಹಾಯಕರು, ನಿರ್ಗತಿಕರ ನೆರವಿಗೆ ಯೋಜನೆಗಳನ್ನು ರೂಪಿಸಲು ಚಿಂತನೆ ನಡೆಸುತ್ತಿವೆ.
ಲಾಕ್ ಡೌನ್ ಇದ್ದರೂ ಚಿಕ್ಕಮಗಳೂರು ರೆಸಾರ್ಟ್ ನತ್ತ ಪ್ರವಾಸಿಗರು
ಖಾಸಗಿ ಸಂಸ್ಥೆಗಳು, ದಾನಿಗಳು ಕೊರೊನಾ ವಿರುದ್ಧ ಹೋರಾಟಕ್ಕೆ ಕೈಜೋಡಿಸುತ್ತಿದ್ದಾರೆ. ಇದರ ನಡುವೆ ಬೆಂಗಳೂರಿನ ಖಾಸಗಿ ಶಾಲಾ ಆಡಳಿತ ಮಂಡಳಿ ಶಾಲೆಯ ಬಸ್ ಚಾಲಕರನ್ನು ಉದ್ಯೋಗದಿಂದ ತೆಗೆದು ಹಾಕಿದೆ.
ಒಂದು ಕರೆಯಲ್ಲೇ ಉದ್ಯೋಗದಿಂದ ಔಟ್
ಬೆಂಗಳೂರು ರಿಚ್ ಮೆಂಡ್ ಸರ್ಕಲ್ ನಲ್ಲಿ ಇರುವ ಬಾಲ್ಡ್ ವಿನ್ ಬಾಯ್ಸ್ ಶಾಲಾ ಆಡಳಿತ ಮಂಡಳಿಯು ಸರಿ ಸುಮಾರು 20 ರಿಂದ 25 ಮಂದಿ ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕಿದೆ ಎಂಬ ಆರೋಪ ಕೇಳಿ ಬಂದಿದೆ. ಸೋಮವಾರ ಶಾಲಾ ಆಡಳಿತ ಮಂಡಳಿಯು ಬಸ್ ಚಾಲಕರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನು ಕೆಲಸದಿಂದ ತೆಗೆದಿರುವ ಬಗ್ಗೆ ಒಂದೇ ಒಂದು ಫೋನ್ ಕಾಲ್ ನಲ್ಲಿ ತಿಳಿಸಿದೆ ಎಂದು ಉದ್ಯೋಗಿಗಳು ದೂಷಿಸುತ್ತಿದ್ದಾರೆ.
ಏಪ್ರಿಲ್ ಸಂಬಳವೂ ಇಲ್ಲ, ಮೇ ತಿಂಗಳಂತೂ ಮಾತಾಡಂಗಿಲ್ಲ
ಭಾರತ ಲಾಕ್ ಡೌನ್ ನಿಂದ ಸಾರ್ವಜನಿಕರಿಗೆ ತೊಂದರೆ ಆಗಬಾರದು ಎಂದು ಕೇಂದ್ರ ಸರ್ಕಾರವೇ ಸಾಕಷ್ಟು ಯೋಜನೆಗಳನ್ನು ಘೋಷಿಸಿದೆ. ಇದರ ಮಧ್ಯೆ 20ಕ್ಕೂ ಅಧಿಕ ಉದ್ಯೋಗಿಗಳನ್ನು ತೆಗೆದು ಹಾಕಿರುವ ಆಡಳಿತ ಮಂಡಳಿಯು ಮುಂದಿನ ಎರಡು ತಿಂಗಳ ಸಂಬಳವನ್ನೂ ನೀಡುವುದಿಲ್ಲ ಎಂದು ಹೇಳಿದೆ. ಸಾಮಾನ್ಯ ದಿನಗಳಲ್ಲೇ ಉದ್ಯೋಗ ಸಿಗುವುದು ಕಷ್ಟವಿರುವಂತಾ ಸಂದರ್ಭದಲ್ಲಿ ದೇಶಕ್ಕೆ ದೇಶವೇ ಸ್ತಬ್ಧಗೊಂಡಿರುವ ಇಂಥ ಸನ್ನಿವೇಶದಲ್ಲಿ ಬಡವರ ಹೊಟ್ಟೆ ಮೇಲೆ ಹೊಡೆಯುವುದಕ್ಕೆ ಆಡಳಿತ ಮಂಡಳಿ ಇಂಥ ಕೆಲಸವನ್ನು ಮಾಡಿದೆ ಎಂಬುದು ನೊಂದ ಉದ್ಯೋಗಿಗಳ ಆರೋಪವಾಗಿದೆ.
24 ಬಸ್.. 24 ಚಾಲಕರು ಹೆಚ್ಚುವರಿ ಎಲ್ಲಿದೆ?
ಬಾಲ್ಡ್ ವಿನ್ ಬಾಯ್ಸ್ ಶಾಲೆಯಲ್ಲಿ 24 ಶಾಲಾ ಬಸ್ ಗಳಿಗೆ 24 ಮಂದಿ ಚಾಲಕರು ಇದ್ದಾರೆ. ಆದರೆ ಇದೀಗ ಚಾಲಕರನ್ನು ಕೆಲಸದಿಂದ ತೆಗೆದು ಹಾಕುವುದಕ್ಕೆ ಆಡಳಿತ ಮಂಡಳಿಯು ಹೆಚ್ಚುವರಿ ಉದ್ಯೋಗಿಗಳು ಇರುವುದನ್ನೇ ಕಾರಣ ಎಂದು ಹೇಳುತ್ತಿದೆ.
ಶಾಲಾ ಬಸ್ ಚಾಲಕರ ಉದ್ಯೋಗಕ್ಕೆ ಖಾತ್ರಿಯಿಲ್ಲ
ಎರಡು ವರ್ಷ ಉದ್ಯೋಗ ಮಾಡಿದವರಿಗೆ ಉದ್ಯೋಗ ಖಾತ್ರಿ ಮಾಡಿಕೊಳ್ಳಲಾಗುತ್ತದೆ ಎಂದು ಆಡಳಿತ ಮಂಡಳಿಯು ಭರವಸೆ ನೀಡಿತ್ತು. ಆದರೆ ಇದೀಗ ಮೂರು ವರ್ಷ ಸೇವೆ ಸಲ್ಲಿಸಿದ ಉದ್ಯೋಗಿಗಳನ್ನು ಕೂಡಾ ಕೆಲಸದಿಂದ ತೆಗೆದು ಹಾಕಲಾಗಿದೆ. ಉದ್ಯೋಗವಿಲ್ಲದೇ ಬಡವರು ಬೀದಿಗೆ ಬಂದು ನಿಲ್ಲುವಂತಾಗಿದೆ.
ಕೇಂದ್ರ ಸರ್ಕಾರದ ಆದೇಶಕ್ಕಿಲ್ಲವೇ ಕವಡೆ ಕಾಸಿನ ಕಿಮ್ಮತ್ತು?
ಭಾರತ ಲಾಕ್ ಡೌನ್ ಆಗಿದೆ. ತುತ್ತು ಅನ್ನಕ್ಕೂ ಜನರು ಹಪಹಪಿಸುವಂತಾ ಸ್ಥಿತಿ ರಾಜ್ಯವಷ್ಟೇ ಅಲ್ಲ ದೇಶವನ್ನೇ ಆವರಿಸಿದೆ. ಈ ಸಂದರ್ಭದಲ್ಲಿ ಯಾವ ಕಂಪನಿಯೂ ಯಾವ ಉದ್ಯೋಗಿಯನ್ನು ಕೆಲಸದಿಂದ ತೆಗೆದು ಹಾಕುವಂತಿಲ್ಲ ಎಂದು ಕಟ್ಟಪ್ಪಣೆ ಹೊರಡಿಸಿದೆ. ಇದ್ಯಾವುದಕ್ಕೂ ಕ್ಯಾರೇ ಎನ್ನದ ಆಡಳಿತ ಮಂಡಳಿ ಬೇಕಾಬಿಟ್ಟಿಯಾಗಿ ಉದ್ಯೋಗಿಗಳನ್ನು ಬೀದಿಗೆ ಅಟ್ಟಿದೆ.
ಚಾಲಕರ ಸಮಸ್ಯೆಗೆ ಸ್ಪಂದಿಸುತ್ತಾರಾ ಶಿಕ್ಷಣ ಸಚಿವರು?
ರಾಜ್ಯದ ಶಿಕ್ಷಣ ವಲಯದಲ್ಲಿ ಎಂಥದ್ದೇ ಸಮಸ್ಯೆಗಳಿದ್ದರೂ ತಕ್ಷಣ ಸ್ಪಂದಿಸುವ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಈ ಬಗ್ಗೆ ಏನು ಹೇಳುತ್ತಾರೆ. ಸರ್ಕಾರದ ಆದೇಶಕ್ಕೂ ಕಿಮ್ಮತ್ತು ಕೊಡದ ಶಾಲಾ ಆಡಳಿತ ಮಂಡಳಿ ವಿರುದ್ಧ ಕ್ರಮ ತೆಗೆದುಕೊಳ್ಳಾತ್ತಾರಾ. ಉದ್ಯೋಗ ಕಳೆದುಕೊಂಡು ಅತಂತ್ರ ಸ್ಥಿತಿಯಲ್ಲಿ ಇರುವ ಉದ್ಯೋಗಿಗಳ ನೆರವಿಗೆ ಧಾವಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಏಕೆಂದರೆ ಇದು ಕೇವಲ ಇದೊಂದೇ ಶಿಕ್ಷಣ ಸಂಸ್ಥೆಯ ಕಥೆಯಲ್ಲ. ಶಿಕ್ಷಣ ಸಂಸ್ಥೆಗಳಲ್ಲಿ ಉದ್ಯೋಗಿಗಳಿಗೆ ಸುರಕ್ಷತೆಯೇ ಇಲ್ಲದಾಗಿದೆ.