15 ಕಳ್ಳರ ಜೊತೆ ಸಿಕ್ಕಿದ್ದು 68 ಮೊಬೈಲ್ ಫೋನ್ಗಳು
ನಂದಿನಿ ಲೇಔಟ್ ಪೊಲೀಸರ ಕಾರ್ಯಾಚರಣೆ: ನಂದಿನಿ ಲೇಔಟ್ ಪೊಲೀಸರು ಆರು ಜನ ಆರೋಪಿಗಳನ್ನು ಬಂಧಿಸಿ 1 ಕೆ.ಜಿ. 110 ಗ್ರಾಂ ತೂಕದ ಚಿನ್ನಾಭರಣಗಳನ್ನು ಹಾಗೂ ಒಂದು ಲಾರಿಯನ್ನು ವಶಪಡಿಸಿಕೊಂಡಿದ್ದಾರೆ.
ಕುಣಿಗಲ್ನ ರಾಜೇಶ್ (24), ನಂದಿನಿ ಲೇಔಟ್ನ ನಾಗರಾಜು(24), ಶೇಷಾದ್ರಿಪುರದ ಅಮೋಘ(22), ಸುಂಕದಕಟ್ಟೆಯ ಬಾಬು(22), ಆರ್.ಟಿ.ನಗರದ ಶಶಿಧರ್(43), ರಾಮಮೂರ್ತಿನಗರದ ಭಾಸ್ಕರ್(42) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದಾಗಿ 4 ಕಳ್ಳತನ ಹಾಗೂ ಒಂದು ಸುಲಿಗೆ ಪ್ರಕರಣಗಳು ಪತ್ತೆಯಾಗಿದೆ. ಬಂಧಿತರ ಪೈಕಿ ಆರೋಪಿ ರಾಜೇಶ್ ಒಬ್ಬನೇ ಸುಮಾರು 851 ಗ್ರಾಂ ತೂಕದ ಚಿನ್ನಾಭರಣಗಳನ್ನು ಕಳ್ಳತನ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಾಜಿನಗರ ಪೊಲೀಸರ ಕಾರ್ಯಾಚರಣೆ: ರಾಜಾಜಿನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿ 8 ಲಕ್ಷ ಬೆಲೆಬಾಳುವ ಬೆಳ್ಳಿ ಮತ್ತು ಚಿನ್ನಾಭರಣ, 68 ಮೊಬೈಲ್ ಪೋನ್ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಪೀಣ್ಯದ ಕಾಂತರಾಜು(40), ಅತ್ತಿಬೆಲೆಯ ರಾಜು(38), ನಾಗವಾರದ ರವಿ(39) ಬಂಧಿತ ಆರೋಪಿಗಳು. ಆರೋಪಿಗಳು ಹಗಲು ವೇಳೆಯಲ್ಲಿ ಸುತ್ತಾಡಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ರಾತ್ರಿ ವೇಳೆಯಲ್ಲಿ ತಮ್ಮ ಕೈಚಳಕವನ್ನು ತೋರಿಸುತ್ತಿದ್ದರು. ಇವರ ಬಂಧನದಿಂದ ಸಂಪಿಗೆಹಳ್ಳಿ, ಪರಪ್ಪನ ಅಗ್ರಹಾರ ಠಾಣೆಯಲ್ಲಿ ದಾಖಲಾದ ಒಂದೊಂದು ಪ್ರಕರಣಗಳು ಪತ್ತೆಯಾಗಿವೆ.
ರಾಜಗೋಪಾಲನಗರ ಪೊಲೀಸರ ಕಾರ್ಯಾಚರಣೆ: ರಾಜಗೋಪಾಲನಗರ ಪೊಲೀಸರು ಕಾರ್ಯಾಚರಣೆ ನಡೆಸಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ 17 ಲಕ್ಷ ರೂ. ಬೆಲೆಬಾಳುವ ಚಿನ್ನ, ಬೆಳ್ಳಿ ಆಭರಣ ಮತ್ತು ಒಂದು ಟೆಂಪೋ ಟ್ರಾವೆಲ್ಲರ್ನ್ನು ವಶಪಡಿಸಿಕೊಂಡಿದ್ದಾರೆ.
ರಾಜಗೋಪಾಲ ನಗರದವರಾದ ಗಿರೀಶ್(24), ಆಂಜಿ (25), ಆನಂದ(25), ಸುಬ್ರಮಣಿ(28) ಬಂಧಿತರು. ಆರೋಪಿಗಳು ಗಾರೆ ಕೆಲಸ ಮಾಡುತ್ತಿದ್ದು, ತಮ್ಮ ಮೋಜಿನ ಜೀವನಕ್ಕಾಗಿ ಹಣದ ಅವಶ್ಯಕತೆ ಇದ್ದುದರಿಂದ ಕಳ್ಳತನದ ಹಾದಿ ಹಿಡಿದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪೀಣ್ಯ ಪೊಲೀಸರ ಕಾರ್ಯಾಚರಣೆ: ಪೀಣ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಮನೆಕಳವು ಆರೋಪಿಗಳಾದ ಟಿ.ದಾಸರಹಳ್ಳಿಯ ಪ್ರಮೋದ್(21),ಬನ್ನೇರುಘಟ್ಟದ ವೆಂಕಟೇಶ(23) ಬಂಧಿಸಿದ್ದಾರೆ.
ಆರೋಪಿಗಳ ವಶದಿಂದ 4 ಲಕ್ಷ ರೂ ಬೆಲೆ ಬಾಳುವ 70 ಗ್ರಾಂ ತೂಕದ ಚಿನ್ನಾಭರಣಗಳು ಹಾಗೂ ಒಂದು ಟಾಟಾ ಎಸಿ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.