ಬೆಂಗಳೂರು: ಎಂಟು ಕಳ್ಳರ ಬಂಧನ:1 ಕೆ.ಜಿ ಚಿನ್ನ ಜಪ್ತಿ
ಬೆಂಗಳೂರು ,ಜೂನ್.2: ಉತ್ತರ ವಿಭಾಗದ ಪೊಲೀಸರು ಮಹತ್ವದ ಕಾರ್ಯಾಚರಣೆಯಲ್ಲಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಎಂಟು ಜನ ಕುಖ್ಯಾತ ಸರಗಳ್ಳರನ್ನು ಬಂಧಿಸಿ 38.50 ಲಕ್ಷ ರೂ ಬೆಲೆ ಬಾಳುವ ಸುಮಾರು 1 ಕೆ.ಜಿ ತೂಕದ ಚಿನ್ನಾಭರಣಗಳು ಸೇರಿದಂತೆ, 20 ಲ್ಯಾಪ್ಟ್ಯಾಪ್ ಹಾಗೂ 4 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಮಲ್ಲೇಶ್ವರಂ ಪೊಲೀಸರ ಕಾರ್ಯಾಚರಣೆ: ಮಲ್ಲೇಶ್ವರಂ ಪೊಲೀಸರು ಇಬ್ಬರು ಕುಖ್ಯಾತ ಸರಗಳ್ಳರನ್ನು ಬಂಧಿಸಿ, 12 ಲಕ್ಷ ರೂ ಬೆಲೆ ಬಾಳುವ 405 ಗ್ರಾಂ ತೂಕದ 18 ಚಿನ್ನದ ಚೈನುಗಳನ್ನು ವಶಪಡಿಸಿಕೊಂಡಿದ್ದಾರೆ.
ಭರತ್ ಬಿನ್ ಬಾಬುರಾವ್(21) ಚರಣ ಬಿನ್ ಬಾಬುರಾವ್(21) ಬಂಧಿತ ಆರೋಪಿಗಳು. ಆರೋಪಿಗಳು ಸಹೋದರರಾಗಿದ್ದು ಬೈಕ್ಗಳನ್ನು ಕಳ್ಳತನ ಮಾಡಿ ಆ ಬೈಕ್ನಲ್ಲಿ ಪಾರ್ಕ್ ಹಾಗೂ ಜನಸಂದಣಿ ಕಡಿಮೆ ಇರುವ ನಿರ್ಜನ ಪ್ರದೇಶಗಳಲ್ಲಿ ಸಂಚರಿಸಿ ಒಂಟಿ ಮಹಿಳೆಯರಿಂದ ಚಿನ್ನದ ಸರಗಳನ್ನು ಅಪಹರಿಸುತ್ತಿದ್ದರು.
ಆರೋಪಿಗಳ ಬಂಧನದಿಂದಾಗಿ ಮಲ್ಲೇಶ್ವರಂ, ರಾಜಾಜಿನಗರ, ಸುಬ್ರಮಣ್ಯನಗರ, ಪೀಣ್ಯ, ಸದಾಶಿವನಗರ, ನಂದಿನಿಲೇಔಟ್, ಬಸವೇಶ್ವರನಗರ, ಮಹಾಲಕ್ಷ್ಮಿಲೇಔಟ್, ಶೇಷಾದ್ರಿಪುರ ಮತ್ತು ಮಾಗಡಿರಸ್ತೆ ಪೊಲೀಸ್ ಠಾಣೆಗಳ ಪ್ರಕರಣಗಳು ಪತ್ತೆಯಾಗಿದೆ.
ವಿದ್ಯಾರಣ್ಯಪುರ ಪೊಲೀಸರ ಕಾರ್ಯಾಚರಣೆ : ವಿದ್ಯಾರಣ್ಯಪುರ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಸರಗಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ 8.50 ಲಕ್ಷ ರೂ ಬೆಲೆ ಬಾಳುವ 231 ಗ್ರಾಂ ತೂಕದ 7 ಚಿನ್ನದ ಚೈನುಗಳನ್ನು ಹಾಗೂ ಬೆಲೆ ಬಾಳುವ 2 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಕುಮಾರ್(21) ರವಿಕುಮಾರ್(21) ಬಂಧಿತ ಆರೋಪಿಗಳು. ಆರೋಪಿಗಳು ಬೆಲೆ ಬಾಳುವ ಬೈಕ್ಗಳನ್ನು ಕಳ್ಳತನ ಮಾಡಿ ನಂತರ ಅದೇ ಬೈಕ್ಗಳಲ್ಲಿ ಸಂಚರಿಸಿ, ಸರ ಅಪಹರಣ ಹಾಗೂ ಮನೆಕಳ್ಳತನಗಳನ್ನು ಮಾಡುತ್ತಿದ್ದರು. ಇವರ ಬಂಧನದಿಂದಾಗಿ ವಿದ್ಯಾರಣ್ಯಪುರ ಪೊಲೀಸ್ ಠಾಣೆ, ಮಲ್ಲೇಶ್ವರಂ, ತಿಲಕನಗರ ಮತ್ತು ಕಾಡುಗೋಡಿ ಪೊಲೀಸ್ ಠಾಣೆಗಳ ಪ್ರಕರಣಗಳು ಪತ್ತೆಯಾಗಿದೆ.
ಪೀಣ್ಯ ಪೊಲೀಸರ ಕಾರ್ಯಾಚರಣೆ : ವಿದ್ಯಾರ್ಥಿ ಸೋಗಿನಲ್ಲಿ ಲ್ಯಾಪ್ಟಾಪ್ ಕದ್ದಿಯುತ್ತಿದ್ದ ಭರತ್ ಬಿನ್ ಸಂಗಮೇಶ್(21) ಆರೋಪಿಯನ್ನು ಪೀಣ್ಯ ಪೊಲೀಸರು ಬಂಧಿಸಿ, 9 ಲ್ಯಾಪ್ ಟಾಪ್ಗಳನ್ನು, 2 ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿ ಪೀಣ್ಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೈಕ್ಗಳಲ್ಲಿ ಸಂಚರಿಸಿ ಬೆಳಗಿನ ಜಾವ ಕಾಲೇಜು ವಿದ್ಯಾರ್ಥಿಗಳ ರೂಂಗಳ ಬಳಿ ವಿದ್ಯಾರ್ಥಿ ಸೋಗಿನಲ್ಲಿ ಹೋಗಿ ಕಿಟಕಿ ಹಾಗೂ ತೆರೆದ ಬಾಗಿಲಿನ ಮೂಲಕ ಲ್ಯಾಪ್ಟ್ಯಾಪ್ಗಳನ್ನು ಕಳ್ಳತನ ಮಾಡುತ್ತಿದ್ದನು. ಆರೋಪಿ ಈ ಹಿಂದೆ ಈ ಹಿಂದೆ ಪೀಣ್ಯ ಪೊಲೀಸ್ ಠಾಣೆಯ ಪ್ರಕರಣವೊಂದರಲ್ಲಿ ಜೈಲಿಗೆ ಹೋಗಿ ಬಂದಿದ್ದು, ಮತ್ತೆ ಅದೇ ಚಾಳಿಯನ್ನು ಮುಂದುವರೆಸಿದ್ದ. ಈತನ ಬಂಧನಿಂದಾಗಿ ಪೀಣ್ಯ ಪೊಲೀಸ್ ಠಾಣೆಯ 7 ಪ್ರಕರಣಗಳು ಪತ್ತೆಯಾಗಿದೆ.
ಸುಬ್ರಮಣ್ಯನಗರ ಪೊಲೀಸರ ಕಾರ್ಯಾಚರಣೆ :ಸುಬ್ರಮಣ್ಯನಗರ ಪೊಲೀಸರು ಸರಗಳ್ಳನೊಬ್ಬನನ್ನು ಬಂಧಿಸಿ ಆತನಿಂದ 6 ಲಕ್ಷ ರೂ ಬೆಲೆ ಬಾಳುವ 184 ಗ್ರಾಂ ತೂಕದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಲೋಕೇಶ ನಾಗರಾಜು(31) ಬಂಧಿತ ಆರೋಪಿ. ಯಶವಂತಪುರ ರೈಲ್ವೇಸ್ಟೇಷನ್ ಗುಡಿಸಲಿನ ನಿವಾಸಿಯಾಗಿರುವ ಈತ ರಾತ್ರಿ ವೇಳೆಯಲ್ಲಿ ಹೊಂಚುಹಾಕಿ ಕಿಟಕಿ ತೆರೆದಿರುವ ಮನೆಗಳನ್ನು ಗುರುತಿಸಿ ಚಿನ್ನಾಭರಣಗಳನ್ನು ಹಾಗೂ ಲ್ಯಾಪ್ಟ್ಯಾಪ್ ಹಾಗೂ ಮೊಬೈಲ್ ಪೋನನ್ನು ಕಳ್ಳತನ ಮಾಡುತ್ತಿದ್ದನು.
ಯಶವಂತಪುರ ಪೊಲೀಸರ ಕಾರ್ಯಾಚರಣೆ: ಯಶವಂತಪುರ ಪೊಲೀಸರು ಇಬ್ಬರು ಸರಗಳ್ಳರನ್ನು ಬಂಧಿಸಿ 3ಲಕ್ಷ ರೂ ಬೆಲೆ ಬಾಳುವ 100 ಗ್ರಾಂ ತೂಕದ ಚಿನ್ನಾಭರಣ, ಮತ್ತು ಒಂದು ಎಲ್ಜಿ ಹೋಮ್ ಥಿಯೇಟರ್ನ್ನು ವಶಪಡಿಸಿಕೊಂಡಿದ್ದಾರೆ.
ಲೋಕೇಶ(35) ಮಹದೇವನಾಯಕ್(26) ಬಂಧಿತ ಆರೋಪಿಗಳು. ಆರೋಪಿಗಳ ಬಂಧನದಿಂದ ತಾವರೆಕೆರೆ ಮತ್ತು ಯಶವಂತಪುರ ಪೊಲೀಸ್ ಠಾಣೆಗಳ ಪ್ರಕರಣಗಳು ಪತ್ತೆಯಾಗಿರುತ್ತವೆ.
ಮಹಾಲಕ್ಷ್ಮಿಲೇಔಟ್ ಪೊಲೀಸರ ಕಾರ್ಯಾಚರಣೆ: ಮಹಾಲಕ್ಷ್ಮಿಲೇಔಟ್ ಪೊಲೀಸರು ಚಿನ್ನದ ಸರ ಗಳ್ಳತನ ಮಾಡುತ್ತಿದ್ದ ರವಿಕುಮಾರ್(23) ನನ್ನು ಬಂಧಿಸಿ ಆತನ ವಶದಲ್ಲಿದ್ದ 1.50 ಲಕ್ಷ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.