ಪಾದರಾಯನಪುರದಲ್ಲಿ ದಾಂಧಲೆ ಸೃಷ್ಟಿಸಿದ 141 ಮಂದಿ ಕೈಗೆ ಕೋಳ
ಬೆಂಗಳೂರು, ಏಪ್ರಿಲ್.21: ಪಾದರಾಯನಪುರ ಪ್ರದೇಶದಲ್ಲಿ ನಡೆದ ಕೊರೊನಾ ವೈರಸ್ ಸೋಂಕಿತರ ತಪಾಸಣೆಗೆ ತೆರಳಿದ ವೈದ್ಯಕೀಯ ಸಿಬ್ಬಂದಿ ಮತ್ತು ಬಿಬಿಎಂಪಿ ಅಧಿಕಾರಿಗಳ ಜೊತೆಗೆ ಕೆಲವು ಪುಂಡರು ಮಾಡಿರುವ ದಾಂಧಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ 141 ಜನರನ್ನು ಬಂಧಿಸಿದ್ದು ವಿಚಾರಣೆ ನಡೆಸುತ್ತಿದ್ದಾರೆ.
ಭಾನುವಾರ ರಾತ್ರಿ ನಡೆದ ಗಲಾಟೆಗೆ ಸಂಬಂಧ ಸಿಸಿ ಕ್ಯಾಮರಾ ಮತ್ತು ಮೊಬೈಲ್ ದೃಶ್ಯಾವಳಿ ಆಧರಿಸಿ ಸೋಮವಾರ ಬೆಳಗ್ಗೆಯೇ 54 ಶಂಕಿತರನ್ನು ಜೆ.ಜೆ.ನಗರ ಠಾಣೆ ಪೊಲೀಸರು ಬಂಧಿಸಿದ್ದರು. ಮಧ್ಯಾಹ್ನದ ವೇಳೆ ಮತ್ತೆ ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಯಿತು.
ಚಿತ್ರಗಳು : ಗಲಭೆ ಬಳಿಕ ಪಾದರಾಯನಪುರ ಕಂಡಿದ್ದು ಹೀಗೆ
ಸೋಮವಾರ ರಾತ್ರಿ ವೇಳೆಗೆ ಸಿಸಿಬಿ ಮತ್ತು ಪಶ್ಚಿಮ ವಿಭಾಗ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ 82 ಜನ ಶಂಕಿತರನ್ನು ಬಂಧಿಸಿದ್ದಾರ. ಇಂದು ಈ ಬಂಧಿತರನ್ನೆಲ್ಲ ನ್ಯಾಯಾಲಯದ ಎದುರು ಹಾಜರು ಪಡಿಸಿ ಪೊಲೀಸರು ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಯಿದೆ.
ರಾಮನಗರ ಸೆಂಟ್ರಲ್ ಜೈಲಿಗೆ ಆರೋಪಿಗಳು ಸ್ಥಳಾಂತರ
ಸೋಮವಾರ ಬೆಳಗ್ಗೆಯೇ ಬಂಧಿಸಿದ 54 ಜನ ಆರೋಪಿಗಳನ್ನು ಸದ್ಯದ ಮಟ್ಟಿಗೆ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಗಿದೆ. ಇಂದು ಎಲ್ಲ ಆರೋಪಿಗಳನ್ನು ರಾಮನಗರದ ಸೆಂಟ್ರಲ್ ಜೈಲಿಗೆ ಶಿಫ್ಟ್ ಮಾಡಲು ಕಾರಾಗೃಹ ಡಿಜಿಪಿ ಅಲೋಕ್ ಮೋಹನ್ ಆದೇಶಿಸಿದ್ದಾರೆ.
ಸೋಂಕಿತರಿಲ್ಲದ ರಾಮನಗರದಲ್ಲಿ ಆತಂಕದ ಛಾಯೆ
ಕೊರೊನಾ ವೈರಸ್ ಸೋಂಕಿತರಿಲ್ಲದೇ ಸುರಕ್ಷಿತವಾಗಿದ್ದ ರಾಮನಗರದಲ್ಲೀಗ ಭೀತಿ ಎದುರಾಗಿದೆ. ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರೇ ಹೆಚ್ಚಾಗಿರುವ ಪಾದರಾಯನಪುರದಲ್ಲಿ ದಾಂಧಲೆ ಮಾಡಿದ ಆರೋಪಿಗಳನ್ನು ಜಿಲ್ಲೆಯ ಕೇಂದ್ರ ಕಾರಾಗೃಹಕ್ಕೆ ಶಿಫ್ಟ್ ಮಾಡುತ್ತಿರುವುದು ಆತಂಕವನ್ನು ಹುಟ್ಟಿಸಿದೆ.
ರಾಮನಗರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳು ಶಿಫ್ಟ್
ಇನ್ನು, ಪಾದರಾಯನಪುರ ದಾಂಧಲೆಗೆ ಸಂಬಂಧಿಸಿದಂತೆ ಬಂಧಿಸಿದ ಆರೋಪಿಗಳಲ್ಲಿ ಕೊರೊನಾ ವೈರಸ್ ಸೋಂಕು ತಗಲಿದ್ದಲ್ಲಿ ಭಾರಿ ಅಪಾಯವನ್ನು ಎದುರಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ರಾಮನಗರ ಸೆಂಟ್ರಲ್ ಜೈಲಿನಲ್ಲಿದ್ದ 177 ಕೈದಿಗಳನ್ನು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗುತ್ತಿದೆ.
ಬೆಂಗಳೂರಿನಿಂದ ರಾಮನಗರಕ್ಕೆ ಏಕೆ ಆರೋಪಿಗಳು ಶಿಫ್ಟ್?
ಪಾದರಾಯನಪುರ ಮೊದಲೇ ಕೊರೊನಾ ವೈರಸ್ ಸೋಂಕಿತರು ಅತಿಹೆಚ್ಚು ಇರುವ ಕಾರಣ ಕಂಪ್ಲೀಟ್ ಸೀಲ್ ಡೌನ್ ಮಾಡಲು ಸರ್ಕಾರ ಆದೇಶಿಸಿತ್ತು. ಇದರ ನಡುವೆ 58 ಜನರ ಪೈಕಿ 19 ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿದ್ದು, ಉಳಿದ 39 ಜನರನ್ನು ತಪಾಸಣೆಗೆ ತೆರಳಿದ್ದ ವೇಳೆಯಲ್ಲಿ ದಾಂಧಲೆ ನಡೆದಿದೆ. ಈ ಸಂದರ್ಭದಲ್ಲಿ ದಾಂಧಲೆ ಎಬ್ಬಿಸಿದ ಅಷ್ಟು ಜನರಲ್ಲಿ ಒಬ್ಬರಿಗೆ ಸೋಂಕು ತಗಲಿದ್ದರೂ ಅಪಾರ ಸಂಖ್ಯೆಯಲ್ಲಿರುವ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಕೈದಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿಯಾಗುತ್ತದೆ. ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಮನಗರ ಜಿಲ್ಲಾ ಕೇಂದ್ರ ಕಾರಾಗೃಹಕ್ಕೆ ಇವರನ್ನೆಲ್ಲ ಶಿಫ್ಟ್ ಮಾಡಲಾಗುತ್ತಿದೆ.