ಆರು ಪಥವಾಗಲಿದೆ ಬೆಂಗಳೂರು-ಮೈಸೂರು ಹೆದ್ದಾರಿ
ಬೆಂಗಳೂರಿನಲ್ಲಿ ಮಂಗಳವಾರ ಮಾತನಾಡಿದ ಸಚಿವ ಎಚ್.ಸಿ.ಮಹದೇವಪ್ಪ, ಕರ್ನಾಟಕದಲ್ಲಿನ 1,680 ಕಿ.ಮೀ.ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಪರಿವರ್ತನೆ ಮಾಡಲು ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಇದರಲ್ಲಿ ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿ 17 ಅನ್ನು ಆರುಪಥದ ರಸ್ತೆಯಾಗಿ ಪರಿವರ್ತನೆ ಮಾಡಲಾಗುವುದು, ಈ ಕಾಮಗಾರಿ ಆರಂಭಿಸಲು ಒಪ್ಪಿಗೆ ಪಡೆಯಲು ದೆಹಲಿಗೆ ತೆರಳುತ್ತಿರುವುದಾಗಿ ಹೇಳಿದರು.
ಬೆಂಗಳೂರು-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ವಾಹನ ದಟ್ಟಣೆ ಅಧಿಕವಾಗಿದೆ. 2007ರಲ್ಲಿ ಪ್ರತಿದಿನ 38,000ಕಾರುಗಳು ಸಂಚರಿಸುತ್ತಿದ್ದವು. ಸದ್ಯ 78,000 ಕಾರುಗಳು ಸಂಚರಿಸುತ್ತಿವೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ ಎಂದರು. ಆದ್ದರಿಂದ ರಾಜ್ಯ ಸರ್ಕಾರ ನಾಲ್ಕು ಪಥವಿರುವ 130 ಕಿ.ಮೀ ಬೆಂಗಳೂರು-ಮೈಸೂರು ಹೆದ್ದಾರಿಯನ್ನು ಆರು ಪಥವಾಗಿ ಪರಿವರ್ತಿಸಲು ನಿರ್ಧರಿಸಿದೆ ಎಂದರು. [ಬೆಂ-ಮೈ ನಡುವೆ ಆರು ಪಥದ ರಸ್ತೆಗೆ ಚಿಂತನೆ]
ಹೆದ್ದಾರಿ ವಿಸ್ತರಣೆ ಮಾಡಲು ಭೂಮಿಯನ್ನು ವಶಪಡಿಸಿಕೊಳ್ಳುವುದು ಸರ್ಕಾರದ ಪಾಲಿಗೆ ಸವಾಲಾಗಿದೆ. ಯೋಜನೆಗೆ ಅಗತ್ಯವಿರುವ 533 ಎಕರೆ ಭೂಮಿ ವಶಪಡಿಸಿಕೊಳ್ಳಲು ಸರ್ಕಾರ 1,066 ಕೋಟಿ ರೂ.ಗಳನ್ನು ಮೀಸಲಾಗಿಟ್ಟಿದೆ. ಕರ್ನಾಟಕ ರಸ್ತೆ ಅಭಿವೃದ್ಧಿ ಪ್ರಾಧಿಕಾರ ಈ ಯೋಜನೆಯ ಕಾಮಗಾರಿಯನ್ನು ನಡೆಸಲಿದ್ದು, ಇದಕ್ಕೆ ಸುಮಾರು 300 ಕೋಟಿ ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ ಎಂದು ಹೇಳಿದರು.
ಆರು ಪಥದ ರಸ್ತೆಯ ಜೊತೆಗೆ ಬಿಡದಿ, ರಾಮನಗರ, ಚನ್ನಪಟ್ಟಣ, ಮದ್ದೂರು, ಮಂಡ್ಯ ಮತ್ತ ವಾಹನ ಸಂಚಾರ ಹೆಚ್ಚಿರುವ ಇತರ ಕಡೆ ಬೈಪಾಸ್ ನಿರ್ಮಾಣ ಮಾಡಲಾಗುವುದು. ಶ್ರೀರಂಗಪಟ್ಟಣದಲ್ಲಿ ಗ್ರೇಡ್ ಸಪರೇಟರ್ ನಿರ್ಮಿಸಲಾಗುವುದು ಎಂದು ಎಚ್.ಸಿ.ಮಹದೇವಪ್ಪ ತಿಳಿಸಿದರು.