'ಇದ್ದರೂ, ಸತ್ತರೂ ಹಿಂದೂಸ್ತಾನದಲ್ಲಿ': ಬೀದಿಗಿಳಿದ ಮುಸ್ಲಿಂ ಮಹಿಳೆಯರು
ಬೆಂಗಳೂರು, ಜನವರಿ 18: ಗೃಹ ಸಚಿವ ಅಮಿತ್ ಶಾ ಬೆಂಗಳೂರು ಭೇಟಿ ದಿನವೇ ಸಾವಿರಾರು ಮುಸ್ಲಿಂ ಮಹಿಳೆಯರು ಕೇಂದ್ರ ಸರಕಾರ ಜಾರಿಗೊಳಿಸಲು ಮುಂದಾಗಿರುವ ಪೌರತ್ವ ಸಂಬಂಧಿ ಕಾನೂನುಗಳನ್ನು ವಿರೋಧಿಸಿ ಬೀದಿಗಿಳಿದರು.
ಇಲ್ಲಿನ ಕಂಟೋನ್ಮೆಂಟ್ ಪ್ರದೇಶದ (ಶಿವಾಜಿನಗರ) ಟ್ಯಾನರಿ ರಸ್ತೆಯ ಈದ್ಗಾ ಮೈದಾನದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನಾ ಸಮಾವೇಶದಲ್ಲಿ ಮಹಿಳೆಯರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಹೊಸ ಕಾನೂನು ಜಾರಿ ಹಿನ್ನೆಲೆಯಲ್ಲಿ ಅವರು ಎದುರಿಸುತ್ತಿರುವ ಅಸ್ಥಿರತೆ ಹಾಗೂ ಆತಂಕಗಳನ್ನು ಸಾಮೂಹಿಕವಾಗಿ ಹಂಚಿಕೊಂಡರು. 'ಜಂಟಿ ಕ್ರಿಯಾ ಸಮಿತಿ ಕರ್ನಾಟಕ' ಸಂಘಟನೆ ಸಮಾವೇಶವನ್ನು ಆಯೋಜನೆ ಮಾಡಿತ್ತು.
ಬೆಂಗಳೂರಿನಲ್ಲಿ ಸರಣಿ ವಿರೋಧ
ಡಿ. 11ರಂದು ಕೇಂದ್ರ ಸರಕಾರ ಮಂಡಿಸಿದ್ದ ಕ್ಯಾಬ್ ಎಂದು ಕರೆಯಲಾದ ಪೌರತ್ವ ತಿದ್ದುಪಡಿ ಕಾಯ್ದೆಗೆ ಅಂಗೀಕಾರವನ್ನು ಪಡೆದುಕೊಂಡಿತು. ನಂತರ ದೇಶಾದ್ಯಂತ ರಾಷ್ಟ್ರೀಯ ಪೌರತ್ವ ಕಾಯ್ದೆಯ ವಿರುದ್ಧ ಪ್ರತಿಭಟನೆಗಳು ಆರಂಭಗೊಂಡವು. ಬೆಂಗಳೂರಿನಲ್ಲಿ ಕಾಯ್ದೆ ವಿರೋಧಿಸಿ ನಡೆದ ಪ್ರತಿಭಟನೆಗಳಿಗೆ ಟೌನ್ ಹಾಲ್ ಸೇರಿದಂತೆ ನಗರದ ಹಲವು ಭಾಗಗಳು ಸಾಕ್ಷಿಯಾದವು. ಇದರ ಮುಂದುವರಿದ ಭಾಗವಾಗಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಮಹಿಳೆಯರು ಭಾನುವಾರ ಕೇಂದ್ರ ಸರಕಾರದ ಕಾಯ್ದೆಗೆ ವಿರೋಧವನ್ನು ವ್ಯಕ್ತಪಡಿಸಿದರು.
ಏಪ್ರಿಲ್ 1 ರಿಂದ ಗಣತಿ: ಸುಳ್ಳು ಮಾಹಿತಿ ನೀಡಿದರೆ ದಂಡ
ಹಿಂದುಸ್ತಾನ ನೆನೆದ ಮಹಿಳೆಯರು
''ಹಿಂದೂಸ್ತಾನ್ ಜಿಂದಾಬಾದ್, ನಮ್ಮ ಹೃದಯದಲ್ಲಿ ಹಿಂದೂಸ್ತಾನ್ ಇದೆ. ನಾವು ಸತ್ತರೂ ಹಿಂದೂಸ್ತಾನ್ದಲ್ಲಿ, ಇದ್ದರೂ ಹಿಂದೂಸ್ತಾನ್ದಲ್ಲಿ, ಹಿಂದೂಸ್ತಾನವನ್ನು ಪ್ರೀತಿಸುತ್ತೇವೆ, ನಾವೆಲ್ಲ ಭಾರತೀಯರು, ನಾವು ಯಾರಿಗೂ ದಾಖಲೆಗಳನ್ನು ಕೊಡುವುದಿಲ್ಲ," ಎಂಬರ್ಥದ ಘೋಷಣೆಗಳು ಕಾರ್ಯಕ್ರಮದ ಉದ್ದಕ್ಕೂ ಮೊಳಗಿದವು. ಚಿಕ್ಕ ಮಕ್ಕಳು ಭಾರತದ ಭಾವುಟ ಹಿಡಿದು 'ನೋ ಟು ಸಿಎಎ' ಎಂದು ಫಲಕ ಪ್ರದರ್ಶಿಸಿದ್ದು ಗಮನ ಸೆಳೆಯುವಂತಿತ್ತು.
ಮುಸ್ಲಿಂರು ಬೀದಿಗೆ ಬಂದಿದ್ದಾರೆ
ಈ ವೇಳೆ ಪ್ರತಿಭಟನಾಕಾರರನ್ನು ಪ್ರತಿನಿಧಿಸಿ ವೇದಿಕೆಯಲ್ಲಿ ಮಾತನಾಡಿದ ಸಿಟಿಜನ್ಸ್ ಫಾರ್ ಬೆಂಗಳೂರು ಸಂಸ್ಥೆಯ ಮಾಜಿ ಸಂಚಾಲಕಿ ತಾರಾ ಕೃಷ್ಣಸ್ವಾಮಿ, ''ಮುಸ್ಲಿಂರು ತಮ್ಮ ಸ್ವಾಭಿಮಾನಕ್ಕೆ ದಕ್ಕೆ ಬಂದಿರುವುದಕ್ಕೆ ಬೀದಿಗೆ ಬಂದಿಲ್ಲ ಅಥವಾ ಮಸೀದಿಗಳಿಗೆ ದಕ್ಕೆ ಬಂದಿರುವುದಕ್ಕೆ ಬೀದಿಗೆ ಬಂದಿಲ್ಲ. ದೇಶದ ಸ್ವಾಭಿಮಾನಕ್ಕೆ ದಕ್ಕೆ ಬಂದಿದೆ. ಸಂವಿಧಾನಕ್ಕೆ ದಕ್ಕೆ ಬಂದಿದೆ ಎಂದು ಬೀದಿಗೆ ಬಂದಿದ್ದಾರೆ. ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಅಧಿಕಾರ ಹಿಡಿದವರು ಇಂದು ಸಂವಿಧಾನಕ್ಕೆ ಕೊಡಲಿ ಏಟು ಹಾಕುತ್ತಿದ್ದಾರೆ'' ಎಂದರು.
ಸಿಎಎ ಕುರಿತು ಮೈಕ್ರೋಸಾಫ್ಟ್ ಸಿಇಒ ಸತ್ಯ ನಾದೆಲ್ಲಾ ಹೇಳಿದ್ದೇನು?
ಕೆಲಸಕ್ಕೆ ಬಾರದ ಸಿಎಎ ಕಾಯ್ದೆ
ಕರ್ನಾಟಕ ಮುಸ್ಲಿಂ ಮಹಿಳಾ ಆಂದೋಲನದ ಸಂಚಾಲಕಿ ನಗ್ಮಾ ಶೇಕ್ ಮಾತನಾಡಿ, ''ದೇಶದಲ್ಲಿ ಬಡತನ, ನಿರುದ್ಯೋಗ ಹೆಚ್ಚಾಗುತ್ತಿದ್ದರೂ, ಪೂರ್ಣ ಬಹಮತ ಪಡೆದುಕೊಂಡು ಆಡಳಿತ ನಡೆಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರು ಏನೂ ಮಾಡುತ್ತಿಲ್ಲ. ಕೆಲಸಕ್ಕೆ ಬಾರದ ಸಿಎಎ ಕಾಯ್ದೆಯನ್ನು ತಂದು ದೇಶದಲ್ಲಿ ಒಂದು ರೀತಿಯ ಅಶಾಂತಿಯ ವಾತಾವರಣವನ್ನು ಸೃಷ್ಟಿಸಿದ್ದಾರೆ. ಸಿಎಎ ಕಾಯ್ದೆ ಜಾರಿಗೊಳಿಸಿ, ಅನ್ಯ ದೇಶದಲ್ಲಿ ದೌರ್ಜನ್ಯಕ್ಕೆ ಒಳಗಾದವರಿಗೆ ಭಾರತೀಯ ಪೌರತ್ವ ನೀಡಲು ನಾವೇನು ಬೇಡ ಅಂದಿಲ್ಲ. ಧರ್ಮದ ಆಧಾರದ ಮೇಲೆ ಏಕೆ ಪೌರತ್ವ ನಿರ್ಧರಿಸುತ್ತಿದ್ದೀರಾ? ನೀವು ಸಂವಿಧಾನಕ್ಕೆ ಅಪಪ್ರಚಾರ ಮಾಡುತ್ತಿದ್ದೀರಾ? ಇದನ್ನು ನಾವು ಎಷ್ಟೇ ವಿರೋಧ ಬಂದರೂ ಖಂಡಿಸುತ್ತೇವೆ'' ಎಂದರು.
ರೆಡ್ಡಿಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ?
ಸಾಮಾಜಿಕ ಹೋರಾಟಗಾರ್ತಿ ಕವಿತಾ ರೆಡ್ಡಿ, "ನಾವು ಮುನಿಸಿಕೊಂಡರೆ, ಮುಸ್ಲಿಂರನ್ನು ಭಾರತದಿಂದ ಹೊಡೆದೋಡಿಸುತ್ತೇವೆ ಎಂದು ಹೇಳಿರುವ ಶಾಸಕ ಸೋಮಶೇಖರ ರೆಡ್ಡಿಗೆ ಸ್ವಲ್ಪವಾದರೂ ನಾಚಿಕೆ ಮಾನ ಮರ್ಯಾದೆ ಇದೆಯಾ? ಎಂದು ಪ್ರಶ್ನಿಸಿದರು. ''ಸಂವಿಧಾನ ಬದ್ದವಾಗಿ ಶಾಸಕರಾಗಿ ಆಯ್ಕೆಯಾಗಿ ಅದೇ ಸಂವಿಧಾನಕ್ಕೆ ಧಕ್ಕೆ ಮಾಡುವ ಮಾತನಾಡುತ್ತಿರುವುದನ್ನು ಈ ದೇಶದ ಪ್ರಜ್ಞಾವಂತರು ಗಮನಿಸಬೇಕು. ಸೋಮಶೇಖರ್ ರೆಡ್ಡಿಗೆ ಮಾನ ಇದ್ದರೆ, ಮುಂದಿನ ಚುನಾವಣೆಯಲ್ಲಿ ಮುಸ್ಲಿಂರ ಮತ ಕೇಳಲು ಹೋಗಬಾರದು,'' ಎಂದು ವಾಗ್ದಾಳಿ ನಡೆಸಿದರು.
ಲೇಖಕಿ ಶಾಕೀರಾ ಖನಮ್, ವಿದ್ಯಾರ್ಥಿ ಹೋರಾಟಗಾರ್ತಿ ಶಾಕೀಲ್, ಸಾಮಾಜಿಕ ಹೋರಾಟಗಾರ್ತಿ ಗೌರಿ, ಡಾ, ಆಸೀಪಾ, ನೂರ್ ಜಹೀರಾ ಸೇರಿದಂತೆ ಹಲವು ನಾಯಕಿಯರು ಸಭೆಯಲ್ಲಿ ತಮ್ಮ ಅಭಿಪ್ರಾಯಗಳ್ನು ಹಂಚಿಕೊಂಡರು.
ಸಿಎಎಗೆ ವಿರೋಧ: ಬಿಜೆಪಿ ತೊರೆದ ಅಲ್ಪಸಂಖ್ಯಾತ ಘಟಕದ ಸದಸ್ಯರು