ಬೆಂಗಳೂರು ಲಾಕ್: ವಲಸೆ ಕಾರ್ಮಿಕರ ಬದುಕಿಗೆ ಎಐಎಫ್ಓ ಆಶಾಕಿರಣ
ಬೆಂಗಳೂರು, ಏಪ್ರಿಲ್.30: ನೊವೆಲ್ ಕೊರೊನಾ ವೈರಸ್ ಅಟ್ಟಹಾಸದಿಂದ ಕರ್ನಾಟಕಕ್ಕೆ ಕರ್ನಾಟಕವೇ ನಲುಗಿದೆ. ಇದರ ಮಧ್ಯೆ ಅತಂತ್ರ ಸ್ಥಿತಿಯಲ್ಲಿರುವ ನಿರಾಶ್ರಿತರ ಹಸಿವು ನೀಗಿಸುವ ನಿಟ್ಟಿನಲ್ಲಿ ಎಐಎಫ್ಓ (AIFO) ಎಂಬ ಸರ್ಕಾರೇತರ ಸಂಸ್ಥೆಯು ಕಾರ್ಯ ಪ್ರವೃತ್ತವಾಗಿದೆ.
Recommended Video
ಬೆಂಗಳೂರಿನಲ್ಲಿ ಬಿಪಿಎಲ್ ಕಾರ್ಡ್ ಗಳಿಲ್ಲದ ದಿನಗೂಲಿ ಕಾರ್ಮಿಕರು, ವಲಸೆ ಕಾರ್ಮಿಕರು, ವಿಕಲಾಂಗ ಚೇತನರು ಹಾಗೂ ಸ್ಲಂಗಳಲ್ಲಿ ವಾಸಿಸುವ ಅವರ ಕುಟುಂಬಕ್ಕೆ ಆಹಾರದ ಕಿಟ್ ಗಳನ್ನು ವಿತರಿಸುವ ನಿಟ್ಟಿನಲ್ಲಿ ಎಐಎಫ್ಓ ಕಾರ್ಯಕರ್ತರು ಶ್ರಮಿಸುತ್ತಿದ್ದಾರೆ.
ಒಂದೇ ಒಂದು ಕರೆಗೆ ಬಂತು ಔಷಧಿ: ಉಳಿಯಿತು ಬಳ್ಳಾರಿ ಕ್ಯಾನ್ಸರ್ ರೋಗಿ ಜೀವ
ರಾಜ್ಯ ರಾಜಧಾನಿಯಲ್ಲಿ ಬಹುಪಾಲು ಮಂದಿ ವಲಸೆ ಕಾರ್ಮಿಕರಿದ್ದು ದಿನದ ದುಡಿಮೆಯನ್ನೇ ನೆಚ್ಚಿಕೊಂಡು ಜೀವನ ಸಾಗಿಸುವ ಕಾರ್ಮಿಕರಿದ್ದಾರೆ. ಇಂಥ ಜನರಿಗೆ ನೆತ್ತಿಯ ಮೇಲೊಂದು ನೆಟ್ಟಗಿನ ಸೂರಿಲ್ಲ. ನಿತ್ಯ ದುಡಿಮೆಯಿಲ್ಲದೇ ಹಸಿವು ನೀಗುವುದಿಲ್ಲ. ಭಾರತ್ ಲಾಕ್ ಡೌನ್ ನಿಂದಾಗಿ ಇದೀಗ ದಿನದ ದುಡಿಮೆಯೂ ಇಲ್ಲದಂತಾಗಿ ಬಿಟ್ಟಿದೆ.
ಮನೆಮನೆಗೆ ಆಹಾರದ ಕಿಟ್ ಗಳ ವಿತರಣೆ:
ಬೆಂಗಳೂರಿನ ಕೊರೊನಾ ಕೇರ್ ಮೂಲಕ 713 ನಿರಾಶ್ರಿತ ಕುಟುಂಬಗಳಿಗೆ ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು. 10 ಕೆಜಿ ಅಕ್ಕಿ, 5 ಕೆಜಿ ಗೋಧಿ, 2 ಕೆಜಿ ಬೇಳೆ ಹಾಗೂ ಒಂದು ಕೆಜಿ ಸೋಪಿನ ಪುಡಿ ಹೊಂದಿರುವ ಆಹಾರದ ಕಿಟ್ ಗಳನ್ನು ಎಐಎಫ್ಓ ವಿತರಣೆ ಮಾಡಿದೆ.
ಕರ್ನಾಟಕದ ಕಂದಾಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳ ಬೆಂಬಲದೊಂದಿಗೆ ಎಐಎಫ್ಓ ಕುಷ್ಠರೋಗಿಗಳು ಹಾಗೂ ವಿಕಲಾಂಗ ಚೇತರನ್ನೊಳಗೊಂಡ 395 ಕುಟುಂಬಗಳಿಗೂ ಆಹಾರ ಕಿಟ್ ಗಳನ್ನು ವಿತರಣೆ ಮಾಡಿದರು. ಕಲಬುರಗಿ ಜಿಲ್ಲೆಯಲ್ಲಿ 75, ರಾಯಚೂರು ಜಿಲ್ಲೆಯಲ್ಲಿ 50, ಮಳವಳ್ಳಿಯಲ್ಲಿ 125, ಬಳ್ಳಾರಿ ಜಿಲ್ಲೆಯಲ್ಲಿ 50, ರಾಯಚೂರು ಗ್ರಾಮೀಣ ಭಾಗದಲ್ಲಿ 50 ಹಾಗೂ ಅನಂತಪುರ್ ಜಿಲ್ಲೆಯಲ್ಲಿ 45 ಆಹಾರದ ಕಿಟ್ ಗಳನ್ನು ವಿತರಣೆ ಮಾಡಲಾಯಿತು. ಈ ಆಹಾರದ ಕಿಟ್ ಗಳನ್ನು ಒಂದು ಕುಟುಂಬವು ಎರಡು ವಾರಗಳ ಕಾಲ ಬಳಕೆಯಾಗುತ್ತವೆ ಎಂದು ಎಐಎಫ್ಓ ತಿಳಿಸಿದೆ.
ಭಾರತ ಲಾಕ್ ಡೌನ್ ನಂತಹ ಸಂದಿಗ್ಘ ಸ್ಥಿತಿಯಲ್ಲಿ ಅಸಹಾಯಕರಿಗೆ ನೆರವು ನೀಡಲು ಸ್ವಯಂಪ್ರೇರಿತರಾಗಿ ಕೈಜೋಡಿಸುವಂತೆ ಎಐಎಫ್ಓ ಮನವಿ ಮಾಡಿಕೊಂಡಿತ್ತು. ಅದರಂತೆ ಸ್ವಯಂಪ್ರೇರಿತರಾಗಿ ನೆರವು ನೀಡಿದ ಸಾರ್ವಜನಿಕರು, ಸಿಎಸ್ಆರ್ ಮುಖಂಡರು, ಕಾರ್ಪೋರೇಟ್ ಸಂಸ್ಥೆಗಳು, ನೆಟ್ ವರ್ಕ್ ಸಂಸ್ಥೆಗಳು ಹಾಗೂ ಆಸಕ್ತಿದಾಯಕ ದಾನಿಗಳು ಸೇರಿಕೊಂಡು ಈ ಕಾರ್ಯವನ್ನು ಮಾಡುತ್ತಿದ್ದಾರೆ.