ಶುಕ್ರವಾರದಿಂದ ಬೆಂಗಳೂರು ಸಾಹಿತ್ಯೋತ್ಸವ
ಎಲೆಕ್ಟ್ರಾನಿಕ್ ಸಿಟಿಯ ವೇಲಾಂಕಿನಿ ಪಾರ್ಕ್ ನಲ್ಲಿ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ, ಲೇಖಕರಾದ ನವನೀತ್ ದೇವ್ ಸೇನ್, ರಮಾಕಾಂತ್ ರತ್, ರಾಮಚಂದ್ರ ಗುಹ ಮುಂತಾದವರಿಂದ ಸಾಹಿತ್ಯೋತ್ಸವಕ್ಕೆ ಚಾಲನೆ ದೊರೆಯಲಿದೆ.
ಮೂರು ದಿನಗಳ ಕಾಲ ನಿತಂತರವಾಗಿ ಸಾಹಿತ್ಯ ಮತ್ತು ಸಂಸ್ಕೃತಿಯ ಹಲವು ಮುಗ್ಗುಲುಯಗಳ ಬಗ್ಗೆ ರಾಜ್ಯ ಮಾತ್ರವಲ್ಲದೆ ದೇಶ ಮತ್ತು ವಿದೇಶದ ಲೇಖಕರು ಮತ್ತು ಸಾಹಿತಿಗಳೊಂದಿಗೆ ಚರ್ಚೆ, ಗೋಷ್ಠಿ, ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ಮೊದಲ ಸಾಹಿತ್ಯೋವದ ಯಶಸ್ಸಿನ ನಂತರ ಎರಡನೇ ಸಾಹಿತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಸಾಹಿತ್ಯದ ಮುಖ್ಯ ವಾಹಿನಿಯಿಂದ ಹೊರಗಿದ್ದ ಲೈಫ್ ಸ್ಟೈಲ್ ಮತ್ತು ಫ್ಯಾಷನ್ ಡಿಸೈನಿಂಗ್ ಜತೆಗೆ ಆಧ್ಯಾತ್ಮ ಬರವಣಿಗೆ ಮೇಲೆಯೂ ಗೋಷ್ಠಿಗಳನ್ನು ಆಯೋಜಿಸಲಾಗಿದೆ.
ಸಾಹಿತ್ಯೋತ್ಸವದಲ್ಲಿ ಗುಲ್ಜಾರ್, ವಿಲಿಯಂ ಡಾಲ್ ರಿಂಪಲ್, ಯು.ಆರ್. ಅನಂತಮೂರ್ತಿ, ರಾಜ್ಮೋಹನ್ ಗಾಂಧಿ, ಚಂದ್ರಶೇಖರ ಕಂಬಾರ, ರಾಮಚಂದ್ರ ಗುಹಾ, ನವನೀತ ದೇವ್ಸೇನ್, ರಾಕೇಶ್, ನಿಸಾರ್ ಅಹ್ಮದ್, ಎಚ್.ಎಸ್.ವೆಂಕಟೇಶಮೂರ್ತಿ, ವೆಂಕಟಾಚಲ ಶಾಸ್ತ್ರಿ, ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ.ಬಿ.ಎ.ವಿವೇಕ್ ರೈ, ಗಿರಡ್ಡಿ ಗೋವಿಂದರಾಜು ಸೇರಿದಂತೆ ಹಲವಾರು ಲೇಖಕರು ಭಾಗವಹಿಸಲಿದ್ದಾರೆ.
ಸಾಹಿತ್ಯೋತ್ಸವದಲ್ಲಿ ನೂರು ವರ್ಷಗಳ ಭಾರತೀಯ ಸಿನಿಮಾದ ಸಂಸ್ಮರಣೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ನಟ ಫರ್ಹಾನ್ ಅಖ್ತರ್, ನಿರ್ದೇಶಕ ರಾಕೇಶ್ ಓಂಪ್ರಕಾಶ್ ಮೆಹ್ತಾ, ಬರಹಗಾರ ಪ್ರಸೂನ್ ಜೋಷಿ ಸಿನಿಮಾ ಗೋಷ್ಠಿಗಳಲ್ಲಿ ಭಾಗವಹಿಸಲಿದ್ದಾರೆ.
ರಾಜ್ಯದ ಉಪಭಾಷೆಗಳಾದ ಕೊಡವ, ತುಳು, ಬ್ಯಾರಿ ಹಾಗೂ ಕೊಂಕಣಿ ಜೊತೆ ಸಂಸ್ಕೃತವನ್ನು ಜೀವನದ ಎಲ್ಲ ಕ್ಷೇತ್ರಗಳಲ್ಲಿ ಬಳಸಿರುವ ಮತ್ತೂರು ಹಳ್ಳಿಯ ಬಗ್ಗೆ ವಿಶೇಷ ಚರ್ಚೆ ನಡೆಯಲಿದೆ. ಅಧ್ಯಾತ್ಮ ಹಾಗೂ ಬರಹ ಕುರಿತು ಶ್ರೀ ಶ್ರೀ ರವಿಶಂಕರ್ ಗುರೂಜಿ ವಿಶೇಷ ಕಾರ್ಯಕ್ರಮ ನೀಡಲಿದ್ದಾರೆ.
ಸಾರ್ವಜನಿಕರಿಗೆ ಮುಕ್ತ ಪ್ರವೇಶ ಇದ್ದು www.bangalore literaturefestival.org ವೆಬ್ ಸೈಟ್ ಗೆ ಭೇಟಿ ನೀಡಿ ನೋಂದಣಿ ಮಾಡಿಕೊಳ್ಳಬಹುದು. ಕಾರ್ಯಕ್ರಮಗಳ ಸಂಪೂರ್ಣ ವೇಳಾಪಟ್ಟಿ, ಭಾಗವಹಿಸುವ ಲೇಖಕರ ವಿವರ ಹಾಗೂ ಇತರ ಮಾಹಿತಿ ಕೂಡಾ ವೆಬ್ಸೈಟ್ನಲ್ಲಿ ಲಭ್ಯವಿದೆ.