ಐಷಾರಾಮಿ ಜೀವನಕ್ಕಾಗಿ ಅಜ್ಜಿಯನ್ನೇ ಕೊಂದ ಮೊಮ್ಮಗಳು
ಬಿನ್ನಿಪೇಟೆಯಲ್ಲಿ ಕೆಲವು ದಿನಗಳ ಹಿಂದೆ ನಡೆದ ವೃದ್ಧೆ ರಾಮರತ್ನಮ್ಮ ಕೊಲೆ ರಹಸ್ಯ ಬಯಲಾಗಿದೆ. ಅಜ್ಜಿಯ ಮೊಮ್ಮಗಳಾದ ಹರ್ಷಿತಾ (19)ಳನ್ನು ಪೊಲೀಸರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಅಜ್ಜಿಯನ್ನು ಕೊಲೆ ಮಾಡಿ ಚಿನ್ನಾಭರಣ ದೋಚಿದ್ದ ಹರ್ಷಿತಾ ಅದನ್ನು ಅಡವಿಟ್ಟು, ಸ್ನೇಹಿತರೊಂದಿಗೆ ಪಾರ್ಟಿ ಮಾಡಿರುವ ಕುರಿತು ಪೊಲೀಸರಿಗೆ ಮಾಹಿತಿ ದೊರಕಿದೆ.
ಲಟ್ಟಣಿಗೆಯಿಂದ ಹೊಡೆದು ಸಾಯಿಸಿದಳು : ಮೇ 10ರಂದು ಹರ್ಷಿತಾ ತಂದೆ-ತಾಯಿ ಕೆಲಸಕ್ಕೆ ಹೋದ ಬಳಿಕ ಸಹೋದರಿಯನ್ನು ಕಾಲೇಜಿಗೆ ಬಿಟ್ಟು ಮನೆಗೆ ವಾಪಸ್ ಬಂದಿದ್ದಾಳೆ. ಸ್ನಾನದ ಕೋಣೆಯಲ್ಲಿ ಬಟ್ಟೆ ಒಗೆಯುತ್ತಿದ್ದ ಅಜ್ಜಿಯನ್ನು ಪ್ರೀತಿಯಿಂದ ಮಾತನಾಡಿಸುತ್ತಲೇ ಲಟ್ಟಣಿಗೆಯಿಂದ ತಲೆಗೆ ಹೊಡೆದಿದ್ದಾಳೆ. ಇದರಿಂದ ಪ್ರಜ್ಞಾಹೀನರಾದ ಅಜ್ಜಿಯನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಆಭರಣಗಳೊಂದಿಗೆ ಪರಾರಿಯಾಗಿದ್ದಳು.
ಘಟನೆಯ ವಿವರ : ಮೂಲತಃ ಮೈಸೂರಿನವರಾದ ರಾಮರತ್ನಮ್ಮ ಅಲ್ಲಿಯೇ ವಾಸಿಸುತ್ತಿದ್ದರು. ಪುತ್ರಿ ಲಕ್ಷ್ಮೀಯನ್ನು ಬಿನ್ನಿಪೇಟೆಯ ನಿವಾಸಿ ಶೇಖರ್ ಅವರಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಈ ದಂಪತಿಗೆ ಹರ್ಷಿತಾ ಸೇರಿ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಕೆಲವು ದಿನಗಳ ಹಿಂದೆ ಅವರು ಬಿನ್ನಿಪೇಟೆಯಲ್ಲಿರುವ ಮಗಳ ಮನಗೆ ಆಗಮಿಸಿದ್ದರು.
ಅಜ್ಜಿಯ ಎರಡನೇ ಮೊಮ್ಮಗಳಾದ ಹರ್ಷಿತಾ ಎಸ್ಎಸ್ಎಲ್ಎಸಿಯಲ್ಲಿ ಫೇಲಾಗಿ, ವಿದ್ಯಾಭ್ಯಾಸ ಬಿಟ್ಟು, ಚಾಮರಾಜಪೇಟೆ ಬಳಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಐಷಾರಾಮಿ ಜೀವನ ಮಾಡುವ ಕನಸು ಹೊಂದಿದ್ದ ಹರ್ಷಿತಾ ಬೈಕ್ ಕೊಡಿಸುವಂತೆ ಪೋಷಕರಿಗೆ ಒತ್ತಾಯಿಸುತ್ತಿದ್ದಳು. ಆದರೆ, ಮುಂದೆ ನೋಡೋಣ ಎಂದು ಕುಟುಂಬದವರು ತಿಳಿಸಿದ್ದರು.
ಅಜ್ಜಿ ಬ್ಯಾಂಕ್ ಖಾತೆಯಲ್ಲಿ 15 ಲಕ್ಷವಿರುವ ವಿಚಾರ ತಿಳಿದ ಹರ್ಷಿತಾ, ಬೈಕ್ ಕೊಡಿಸುವಂತೆ ಅಜ್ಜಿಗೆ ಒತ್ತಾಯಿಸಿದ್ದಾಳೆ. ಆದರೆ, ಮೊಮ್ಮಗಳ ಬೇಡಿಕೆಯನ್ನು ಅಜ್ಜಿ ತಿರಸ್ಕರಿಸಿದ್ದರು. ಇದರಿಂದ ಅಸಮಾಧಾನಗೊಂಡ ಹರ್ಷಿತಾ ಅಜ್ಜಿ ಧರಿಸಿರುವ ಚಿನ್ನಾಭರಣ ಕಳವು ಮಾಡಲು ಹೊಂಚು ಹಾಕಿದ್ದಳು. ಅದರಂತೆ ಮೇ 10ರಂದು ಅಜ್ಜಿಯನ್ನು ಕೊಲೆ ಮಾಡಿ, ಚಿನ್ನಾಭರಣ ಸಮೇತ ಪರಾರಿಯಾಗಿದ್ದಳು. ಚಿನ್ನಾಭರಣ ಅಡವಿಟ್ಟು ಹಣ ಪಡೆದು ಅಂದು ಸಂಜೆ ಮನೆಗೆ ಮರಳಿದ್ದಳು.
ಮೋಜಿನ ಕೂಟ : ಅಜ್ಜಿಯನ್ನು ಕೊಂದು ದೋಚಿದ್ದ ಚಿನ್ನಾಭರಣಗಳಿಂದ ದೊರೆತ ಹಣದಲ್ಲಿ ತನ್ನ ಗೆಳೆಯನಿಗೆ 20 ಸಾವಿರ ರೂ. ಮೌಲ್ಯದ ಮೊಬೈಲ್ ಕೊಡಿಸಿದ್ದಳು, ತನ್ನ ಸಹೋದ್ಯೋಗಿಗಳೊಂದಿಗೆ ಪಾರ್ಟಿ ಮಾಡಿದ್ದಳು, ತಾನು ಮಾಡಿದ ಕೃತ್ಯದ ಬಗ್ಗೆ ಆಪ್ತ ಸ್ನೇಹಿತರ ಬಳಿ ಹೇಳಿಕೊಂಡಿದ್ದಳು.
ಐಷಾರಾಮಿ ಜೀವನ ನಡೆಸಿ ಸಿಕ್ಕಿ ಬಿದ್ದಳು : ರಾಮರತ್ನಮ್ಮ ಕೊಲೆ ಬಳಿಕ ಹರ್ಷಿತಾ ಜೀವನ ಶೈಲಿ ಬದಲಾವಣೆಯಾಗಿತ್ತು. ಇದನ್ನು ಗಮನಿಸಿದ ಪೊಲೀಸರು ಆಕೆಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯದ ವಿವರ ಬಹಿರಂಗವಾಗಿದೆ.
ಆತ್ಮಹತ್ಯೆ ಯತ್ನ : ಹರ್ಷಿತಾ ಬಂಧನದಿಂದ ಅವಮಾನಕ್ಕೊಳಗಾದ ಕುಟುಂಬದವರು ಶಿವಮೊಗ್ಗದ ಅತಿಥಿ ಕಂಪರ್ಟ್ಸ್ ವಸತಿ ಗೃಹದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾರೆ. ಹರ್ಷಿತಾ ತಂದೆ ಶೇಖರ್ (40), ತಾಯಿ ಲಕ್ಷ್ಮೀ (35) ಹಾಗೂ ಅಕ್ಕ ವರ್ಷ (20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆ ಪ್ರಯತ್ನಿಸಿದ್ದಾರೆ.
ಗುರುವಾರ ಬೆಳಗ್ಗೆ ಶಿವಮೊಗ್ಗಕ್ಕೆ ಹೋದ ಕುಟುಂಬ ಮಧ್ಯಾಹ್ನ ಆತ್ಮಹತ್ಯಗೆ ಯತ್ನಿಸಿತ್ತು. ಅವರ ಕೊಠಡಿಯಿಂದ ಬರುತ್ತಿದ್ದ ಕೂಗಾಟದ ಸದ್ದು ಕೇಳಿ ಲಾಡ್ಜ್ ಸಿಬ್ಬಂದಿ ಧಾವಿಸಿದಾಗ ಮೂವರೂ ಅಸ್ವಸ್ಥರಾಗಿ ಬಿದ್ದಿದ್ದರು. ಕೂಡಲೇ ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ಸಿಬ್ಬಂದಿ ದಾಖಲಿಸಲಾಯಿತು. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ವಿಶೇಷ ತಂಡ : ಅಜ್ಜಿ ಕೊಲೆ ಪ್ರಕರಣದ ತನಿಖೆ ನಡೆಸಲು ಜಗಜೀವನರಾಂ ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ ಪೆಕ್ಟರ್ ಆರ್.ವಸಂತಕುಮಾರ್ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಪಿಎಸ್ಐ ದಾಳೇಗೌಡ, ಎಸ್ಐ ರುದ್ರಪ್ಪ, ಗಜೇಂದ್ರ, ಸತೀಶ್, ದೇವರಾಜ, ವೆಂಕಟೇಶ್, ಪರಮೇಶ್ ನಾಯ್ಕ್, ನಾಗೇಶ್, ಗುಣಶೇಖರ್ ಮುಂತಾದವರು ತಂಡದಲ್ಲಿದ್ದರು.