ಗಣೇಶೋತ್ಸವದಲ್ಲಿ ರಘು ದೀಕ್ಷಿತ್ ಜಾನಪದ ರಾಕ್ ಕಚೇರಿ!
ಬೆಂಗಳೂರು, ಆಗಸ್ಟ್ 27: 58ನೇ ಬೆಂಗಳೂರು ಗಣೇಶ ಉತ್ಸವದ ಪ್ರಯುಕ್ತ 7ನೇ ದಿನದಂದು ಖ್ಯಾತ ಗಾಯಕ ಹಾಗೂ ಸಂಗೀತ ಸಂಯೋಜಕ ರಘು ದೀಕ್ಷಿತ್ ಅವರ ಗಾಯನ ಮೈ ನವಿರೇಳಿಸುವಂತೆ ಮಾಡಲಿದೆ. ಕರ್ನಾಟಕದ ಹೆಮ್ಮೆಯ ಕಲಾವಿದರಲ್ಲಿ ಒಬ್ಬರೆನಿಸಿಕೊಂಡ ರಘುದೀಕ್ಷಿತ್ ಅವರ ಕಂಚಿನ ಕಂಠ ಮತ್ತು ವಿಭಿನ್ನ ಶೈಲಿಯ ಹಾಡುಗಾರಿಕೆಗೆ ಮನಸೋಲದವರಿಲ್ಲ. ಆಗಸ್ಟ್ 28, 2020ರಂದು ಸಂಜೆ 6.30ರಿಂದ ವರ್ಚುವಲ್ ವೇದಿಕೆಯಲ್ಲಿ ರಘು ದೀಕ್ಷಿತ್ ಅವರ ನಡೆಯಲಿದೆ. ಆನ್ ಲೈನ್ ಮೂಲಕ ಇವರ ಹಾಡುಗಳನ್ನಾಲಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ.
Recommended Video
ತಾವೇ ರೂಪಿಸಿದ ಒಂದು ಸಂಸ್ಥೆ "ದಿ ರಘು ದೀಕ್ಷಿತ್ ಪ್ರಾಜೆಕ್ಟ್" ವತಿಯಿಂದ ಪ್ರಪಂಚಾದ್ಯಂತ, ಹಲವಾರು ದೇಶಗಳಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಕರ್ನಾಟಕದಲ್ಲಿ ಮಾತ್ರವಲ್ಲದೆ, ದೇಶ-ವಿದೇಶಗಳಲ್ಲೂ ಅಭಿಮಾನಿಗಗಳನ್ನು ಹೊಂದಿದ್ದು, ಕಂಚಿನ ಕಂಠದಲ್ಲಿ ಹಾಡುಗಳನ್ನು ಕೇಳುವುದೇ ಆನಂದ.
ಆನ್ಲೈನಲ್ಲಿ ದಕ್ಷಿಣ ಭಾರತದ ಅತಿದೊಡ್ಡ ಗಣೇಶ ಉತ್ಸವ
ಗಾಯಕರಾಗಿ ಮಾತ್ರವಲ್ಲದೆ, ಸಂಗೀತ ನಿರ್ದೇಶಕರಾಗಿಯೂ ಇವರು ಖ್ಯಾತರು. ಕನ್ನಡದ ಸೈಕೋ ಚಲನ ಚಿತ್ರಕ್ಕಾಗಿ ಹಾಡಿದ ' ನಿನ್ನ ಪೂಜೆಗೆ ಬಂದೆ ಮಹದೇಶ್ವರ' ಹಾಡು ಇಂದಿಗೂ ಎಲ್ಲರ ಬಾಯಲ್ಲು ಗುಣುಗುಟ್ಟುತ್ತಿದೆ.ಇಂದಿನ ಯುವ ಪೀಳಿಗೆಯವರಿಗೆ ತುಂಬ ಅಚ್ಚುಮೆಚ್ಚಿನ ಗಾಯಕ ರಘು ದೀಕ್ಷಿತ್. ಸಂತ ಶಿಶುನಾಳ ಷರೀಫರ ಗೀತೆಗಳಿಗೆ ಹೊಸದಾಗಿ ಸಂಗೀತ ಸಂಯೋಜಿಸಿ, ಹಾಡಿ ಸಿಕ್ಕಾಪಟ್ಟೆ ಜನಪ್ರಿಯರಾಗಿದ್ದ ಇವರು, 'ಜಸ್ಟ್ ಮಾತ್ ಮಾತಲ್ಲಿ' ಸೇರಿದಂತೆ ಕನ್ನಡದ ಒಂದಷ್ಟು ಸಿನಿಮಾಗಳಿಗೆ ಸಂಗೀತ ನಿರ್ದೇಶನವನ್ನೂ ಮಾಡಿದ್ದಾರೆ.
ಸೆಪ್ಟೆಂಬರ್ 1ರ ತನಕ ಜರುಗಲಿರುವ ಬೆಂಗಳೂರು ಗಣೇಶ ಉತ್ಸವದ ಸಾಂಸ್ಕೃತಿಕ ಕಾರ್ಯಕ್ರಮಗಳು ಫೇಸ್ ಬುಕ್ , ಯೂ ಟ್ಯೂಬ್ , ಟ್ವಿಟ್ಟರ್, ಇನ್ಸ್ಟಾಗ್ರಾಂನಲ್ಲಿ ಲೈವ್ ಆಗಿ ಮೂಡಿ ಬರುತ್ತಿದೆ.