ಬೆಂಗಳೂರಿನಲ್ಲಿ ತಲೆ ಎತ್ತಿದೆ ವಾಟರ್ ಮಾಫಿಯಾ..!
ಬೆಂಗಳೂರು, ಮೇ.2:ಬೆಂಗಳೂರಿನಲ್ಲಿ ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗುತ್ತಿದ್ದರೆ, ಇನ್ನೊಂದು ಕಡೆ ಕುಡಿಯುವ ನೀರಿನ ಅಭಾವದಿಂದಾಗಿ ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಸಮಸ್ಯೆಗಳ ನಡುವೆ ನಗರದಲ್ಲಿ ವಾಟರ್ ಮಾಫಿಯಾ ತಲೆಯೆತ್ತಿದೆ.
ಬಿಬಿಎಂಪಿ ಮತ್ತು ಜಲಮಂಡಳಿ ಕುಡಿಯುವ ನೀರಿನ ಅಭಾವವಿರುವ ಸ್ಥಳಗಳಿಗೆ ಟ್ಯಾಂಕರ್ಗಳ ಮೂಲಕ ನೀರು ಸರಬರಾಜು ಮಾಡುತ್ತಿದೆ. ಖಾಸಗಿ ಟ್ಯಾಂಕರ್ಗಳ ಮೂಲಕ ನೀರು ವಿತರಣೆ ಮಾಡುವವರು ಇದನ್ನು ದಂಧೆಯಾಗಿ ಪರಿವರ್ತನೆ ಮಾಡಿಕೊಂಡಿದ್ದಾರೆ.[ಕುಡಿಯುವ ನೀರಿನ ಕೊರತೆ ಇದೆಯೇ? ಕರೆ ಮಾಡಿ]
ಒಂದು ಟ್ಯಾಂಕರ್ ನೀರಿಗೆ ಬಿಬಿಎಂಪಿ 400 ರೂ. ನಿಗದಿಪಡಿಸಿದ್ದರೆ, ಖಾಸಗಿಯವರು 800 ರೂಪಾಯಿಗೆ ಮಾರಾಟ ಮಾಡಿ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಬರತೊಡಗಿದೆ.
ಈ ಮಧ್ಯೆ ಜಲಮಂಡಳಿಯ ವಿರುದ್ದ ಮತ್ತೊಂದು ಆರೋಪ ಕೇಳಿಬಂದಿದೆ. ಖಾಸಗಿ ಟ್ಯಾಂಕರ್ ನೀರಿಗೆ ಬೇಡಿಕೆ ಹೆಚ್ಚಿಸಲು ಬೇಸಗೆಯಲ್ಲಿ ಕೆಲ ಭಾಗದಲ್ಲಿ ನೀರಿನ ಅಭಾವವಿರುವುದನ್ನು ನೆಪವಾಗಿಟ್ಟುಕೊಂಡು ಪೈಪ್ನ ಮೂಲಕ ಬೇಕಂತಲೇ ಕಡಿಮೆ ಪ್ರಮಾಣದಲ್ಲಿ ನೀರನ್ನು ಬಿಡುತ್ತಾರೆ. ಈ ಮೂಲಕ ಬಿಬಿಎಂಪಿ ಕೆಲ ಸಿಬ್ಬಂದಿಯವರು ಟ್ಯಾಕರ್ನವರ ವ್ಯವಹಾರದೊಂದಿಗೆ ಶಾಮೀಲಾಗಿದ್ದಾರೆ ಎಂಬ ಆರೋಪವು ಕೇಳಿ ಬರುತ್ತಿದೆ.
ಈ ಆರೋಪದ ಮಧ್ಯೆ ನಗರದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯೂ ಆರಂಭವಾಗಿದೆ. ಬಿಬಿಎಂಪಿ ಮತ್ತು ಜಲಮಂಡಳಿ ಗುಣಮಟ್ಟದ ನೀರು ಸರಬರಾಜು ಮಾಡುತ್ತಿದ್ದು, ನೀರು ಸರಬರಾಜು ಮಾಡುವ ಸಂದರ್ಭದಲ್ಲಿ ಅದರ ಗುಣಮಟ್ಟವನ್ನು ಪರಿಶೀಲಿಸಿ ವಿತರಿಸುತ್ತಿದೆ.[ಅಕ್ಷಯ ತೃತೀಯದ ಹಿನ್ನೆಲೆ ಏನು]
ಯಾವುದೋ ನೀರು ಸರಬರಾಜು ಮಾಡಿ ಹಣ ಪಡೆಯುವುದಷ್ಟೇ ಉದ್ದೇಶವಾಗಿರಿಸಿಕೊಂಡಿರುವ ಖಾಸಗಿ ಟ್ಯಾಂಕರ್ನವರು ನೀರನ್ನು ಗುಣಮಟ್ಟವನ್ನು ಪರಿಶೀಲಿಸದೇ ಕೆರೆಕುಂಟೆ, ಕಟ್ಟೆಗಳಲ್ಲಿರುವ ನೀರನ್ನು ತಂದು ವಿತರಣೆ ಮಾಡುತ್ತಿದ್ದಾರೆ ಎಂಬ ಆರೋಪ ಸಾರ್ವಜನಿಕರಿಂದ ಬರತೊಡಗಿದೆ.
ಈ ಕಲುಷಿತ ನೀರಿಗೆ ಹಣ ನೀಡಿ ನಗರವಾಸಿಗಳು ರೋಗಗಳಿಗೆ ಆಹ್ವಾನ ನೀಡುವ ಪರಿಸ್ಥಿತಿ ನಿರ್ಮಾಣವಾಗಿದೆ.ಕಲುಷಿತ ನೀರಿನಿಂದ ಸಾಂಕ್ರಾಮಿಕ ರೋಗಗಳು ಉಲ್ಬಣವಾಗುವ ಭೀತಿ ಎದುರಾಗಿದೆ. ಬಿಬಿಎಂಪಿ ಅಧಿಕಾರಿಗಳು ಕೂಡಲೇ ಖಾಸಗಿಯವರು ಸರಬರಾಜು ಮಾಡುವ ನೀರನ್ನು ಪರಿಶೀಲಿಸಿ, ವಾಟರ್ ಮಾಫಿಯಾ ದಂಧೆಗೆ ಕಡಿವಾಣ ಹಾಕಿ, ಸಮಸ್ಯೆಯನ್ನು ನಿವಾರಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯ ಮಾಡುತ್ತಿದ್ದಾರೆ.