ಬೆಂಗಳೂರಿನಿಂದ ಚಂಡೀಗಢಕ್ಕೆ ನೇರ ರೈಲು
ಬೆಂಗಳೂರು, ಜ.21: ಚಂಡೀಗಢ ನಿಜಕ್ಕೂ ಸುವ್ಯವಸ್ಥಿತ ಉಲ್ಲಾಸಿತ ನಗರ. ಅದು ಬೆಂಗಳೂರಿನಿಂದ ಬರೋಬ್ಬರಿ 2,643 ಕಿಮೀ ದೂರದಲ್ಲಿದೆ. ಅಲ್ಲಿಗೆ ತಲುಪಲು ರೈಲು ಮೂಲಕ 51 ಗಂಟೆಗಳ ಪ್ರಯಾಣವಾಗುತ್ತದೆ. ಏನೀಗ ಅಂದರೆ?
ಬೆಂಗಳೂರು ಮತ್ತು ಚಂಡೀಗಢ ಮಧ್ಯೆ ಈಗ ನೇರ ರೈಲು ಸಂಪರ್ಕ ಕಲ್ಪಿಸಲಾಗಿದೆ. ಕರ್ನಾಟಕ ಸಂಪರ್ಕ ಕ್ರಾಂತಿ ಟ್ರೈನು ವಾರಕ್ಕೆರಡು ಬಾರಿ ಯಶವಂತಪುರದಿಂದ ಚಂಡೀಗಢಕ್ಕೆ ಸಂಚರಿಸುತ್ತದೆ. ಕೇಂದ್ರ ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಮೊದಲ ರೈಲಿಗೆ ಹಸಿರು ನಿಶಾನೆ ತೋರಿದರು.
ಅಲ್ಲಿಂದ ಮುಂದಕ್ಕೆ ಹರ್ಯಾಣ, ಹಿಮಾಚಲ ಪ್ರದೇಶ, ಪಂಜಾಬ್, ಜಮ್ಮು ಕಾಶ್ಮೀರಕ್ಕೆ ಪ್ರಯಾಣ ಮಾಡುವವರಿಗೆ ಇದು ನಿಜಕ್ಕೂ ತುಂಬಾ ಪ್ರಯೋಜನಕಾರಿ. ಇದುವರೆಗೂ ಈ ದಿಕ್ಕಿನಲ್ಲಿ ಪ್ರಯಾಣಿಸಬೇಕಾದವರು ದೆಹಲಿಗೆ ತೆರಳಿ ಅಲ್ಲಿಂದ ತಮ್ಮ ತಮ್ಮ ದಿಕ್ಕಿಗೆ ಪ್ರಯಾಣ ಬೆಳಸಬೇಕಿತ್ತು. ಅಂದರೆ ದಿಲ್ಲಿಯಲ್ಲಿ 12 ಗಂಟೆ ಕಾಲ ಕಾಯುವುದು ಅನಿವಾರ್ಯವಾಗಿತ್ತು. 12 ಗಂಟೆ ಅಂದರೆ ಇಡೀ ದಿನದ ಕಾರ್ಯಕ್ರಮವಾಗಿಬಿಡುತ್ತಿತ್ತು. ಆದರೆ ಮುಂದೆ ದಿಲ್ಲಿ ರೈಲ್ವೆ ನಿಲ್ದಾಣದಲ್ಲಿ ಠಿಕಾಣಿ ಹೂಡುವ ಅಗತ್ಯವಿಲ್ಲ.
ಚಂಡೀಗಢಕ್ಕೆ ನೇರವಾಗಿ ಹೋಗುವುದರಿಂದ ಇನ್ನೂ ಒಂದು ಅಡ್ವಾಂಟೇಜ್ ಇದೆ. ಏನಪ್ಪಾ ಅಂದರೆ ಶಿಮ್ಲಾ, ಕುಲು, ಮನಾಲಿ ಮತ್ತು ಲಡಾಕ್ ಗಿರಿಧಾಮಗಳಿಗೆ ರಸ್ತೆ ಮೂಲಕ ತಲುಪಲು ಸಹಾಯಕವಾಗುತ್ತದೆ. ಕೆಲವರು ಗಿರಿಧಾಮಗಳಿಗೆ ಬೈಕೇರಿ ಹೋಗುವುದನ್ನು ಇಷ್ಟಪಡುತ್ತಾರೆ. ಅಂತಹವರು ಬೈಕುಗಳನ್ನು ಇಲ್ಲಿಂದಲೇ ರೈಲಿನಲ್ಲಿ ಸಾಗಿಸಿಕೊಂಡು ಹೋಗಬಹುದು!
ಆದರೆ ಪೂನಾ ಮಾರ್ಗದಲ್ಲಿ ಸಂಚರಿಸುವ ಬದಲು ಸಿಕಂದರಾಬಾದ್ ಮೂಲಕ ಮಾರ್ಗ ನಿಗದಿಪಡಿಸಿದ್ದರೆ ಇನ್ನೂ ಹೆಚ್ಚು ಅನುಕೂಲಕರವಾಗಿರುತ್ತಿತ್ತು ಎಂಬ ಕೂಗೂ ಕೇಳಿಬಂದಿದೆ.