ಬಿಜೆಪಿ ಕಾರ್ಪೊರೇಟರ್ ಮಾನ ಮರ್ಯಾದೆ ಮೂರಾಬಟ್ಟೆ
ಏನಪ್ಪಾ ಅಂಥಾ ಮಾಡಬಾರದ ಕೆಲ್ಸ ಏನು ಮಾಡಿದರು ಈಕೆ ಅಂತೀರಾ? ಏನಿಲ್ಲಾ, ನಿನ್ನೆ ಸಂಜೆ ಸೀದಾ ಮಾಲ್ ಒಂದಕ್ಕೆ ಹೋಗಿ ಬಟ್ಟೆ ಖರೀದಿಸುವ ನೆಪದಲ್ಲಿ 5 ಎಕ್ಸ್ ಟ್ರಾ ಬಟ್ಟೆಗಳನ್ನು ಸೊಂಟದ ಸುತ್ತಾ ಕಟ್ಟಿಕೊಂಡು ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾಳೆ.
ರಾತ್ರಿ ವೇಳೆಗೆ ನ್ಯಾಯಾಧೀಶರ ಮುಂದ ಈಯಮ್ಮನನ್ನು ಹಾಜರುಪಡಿಸಲಾಗಿ ಆರೋಪಿಯನ್ನು ಸೀದಾ ಪರಪ್ಪನ ಅಗ್ರಹಾರಕ್ಕೆ ಬಿಟ್ಟುಬನ್ನಿ ಎಂದು ನ್ಯಾಯಾಧೀಶರು ಆದೇಶ ನೀಡಿದ್ದಾರೆ.
ಕಳ್ಳಿ ಲಲಿತಾ ಗಾಂಧಿನಗರದಲ್ಲಿರುವ ಸುಖ್ ಸಾಗರ್ ಮಾಲ್ ನಲ್ಲಿರುವ ಅಶೋಕ್ ಅಪೆರಲ್ಸ್ ಮಳಿಗೆಯಲ್ಲಿ ಬಟ್ಟೆ ಕದಿಯುವಾಗ ಮಾಲ್ ಸಿಬ್ಬಂದಿ ಹೊಂಚುಹಾಕಿ ಈಯಮ್ಮನನ್ನು ರೆಡ್ ಹ್ಯಾಂಡ್ ಆಗಿ ಹಿಡಿದುಹಾಕಿದ್ದಾರೆ. ಅಂದಹಾಗೆ ಈ ಮಹಾತಾಯಿ ಈ ಹಿಂದೆಯೂ ಇದೇ ಮಳಿಗೆಯಲ್ಲಿ ಬಟ್ಟೆ ಕದ್ದಿದ್ದಾಳೆ. ಮಾಲ್ ಸಿಬ್ಬಂದಿಗೆ ಅನುಮಾನ ಬಂದಿದೆ. ಮೂರನೆಯ ಬಾರಿಗೆ ಬಂದಾಗ ವ್ಯವಸ್ಥಿತವಾಗಿ ಬಲೆಗೆ ಬೀಳಿಸಿದ್ದಾರೆ. ಅಲ್ಲಿಗೆ ಬಿಜೆಪಿಯ ಮತ್ತೊಬ್ಬ ಸದಸ್ಯರ ಮಾನಾಮರ್ಯಾದೆ ಮೂರಾಬಟ್ಟೆಗೆ ಹರಾಜಿಗೆ ಬಿದ್ದಿದೆ.
ಕದಿಯೋ ಚಟ (kleptomaniac) ಒಂದು ರೋಗ. ಈಯಮ್ಮನಿಗೆ ಎಲ್ಲಾ ಇದ್ದು ಕದಿಯುವ ಚಟಕ್ಕೆ ಬಿದ್ದಿದ್ದಾಳೆ. ಅದೂ ಒಂದು ರೋಗ. ಏನೇ ಆಗಲಿ ಆಯಮ್ಮನ ಚಾಳಿಯನ್ನು ಇನ್ನು ನಾವು ಬಿಡಿಸುತ್ತೇವೆ ಎಂದು ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ಎಬಿ ರಾಜೇಂದ್ರ ಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಲಲಿತಾ ನಿನ್ನೆ ಒಟ್ಟು 5 ಚೂಡಿದಾರ್ ಟಾಪ್ ಗಳನ್ನು ಕಳವು ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಟ್ರಯಲ್ ನೋಡುವ ಸೋಗಿನಲ್ಲಿ 6 ಚೂಡಿದಾರ್ ಟಾಪ್ ಗಳನ್ನು ತೆಗೆದುಕೊಂಡು ಟ್ರಯಲ್ ರೂಂಗೆ ಹೋಗಿದ್ದ ಲಲಿತಾ ಅವರು ಅದರಲ್ಲಿ 5 ಟಾಪ್ ಗಳನ್ನು ಸೊಂಟಕ್ಕೆ ಸುತ್ತಿಕೊಂಡಿದ್ದರು.
ನಂತರ ಟ್ರಯಲ್ ರೂಂನಿಂದ ಹೊರಬಂದ ಅವರು 1 ಟಾಪ್ ಹಿಂದಿರುಗಿಸಿ ಅಂಗಡಿಯಿಂದ ಹೊರಡಲು ಅನುವಾಗಿದ್ದಾಳೆ. ಆಕೆ ರಿಟರ್ನ್ ಮಾಡಿದ ಟಾಪ್ ಸಂಖ್ಯೆ ಕಡಿಮೆ ಇದ್ದುದರಿಂದ ಅನುಮಾನಗೊಂಡ ಸಿಬ್ಬಂದಿ, ಲಲಿತಾರನ್ನು ತಡೆದು ವಿಚಾರಿಸಿದಾಗ ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ಮುಂದೆ ಮಳಿಗೆಯ ಮಾಲೀಕ ಅಶೋಕ್ ಅವರು ಉಪ್ಪಾರಪೇಟೆ ಪೊಲೀಸರಿಗೆ ಕರೆ ಮಾಡಿದ್ದಾರೆ. ಮಹಿಳಾ ಸಿಬ್ಬಂದಿಯನ್ನು ಅರ್ಜೆಂಟಾಗಿ ಕಳುಹಿಸುವಂತೆ ಕೋರಿದ್ದಾರೆ. ಮಹಿಳಾ ಪೇದೆ ಬಂದು ಚೆಕ್ ಮಾಡಲಾಗಿ ಟಾಪ್ ಗಳು ಲಲಿತಾರ ನಡುವಿನಿಂದ ಒಂದೊಂದಾಗಿ ಹೊರಬರುತ್ತಿದ್ದಂತೆ ಆಕೆಯ ಮಾನವೂ ಕಳಚಿಬಿದ್ದಿದೆ.