ಬನವಾಸಿ ಬಳಗದಿಂದ ಹಿಂದಿ ಹೇರಿಕೆ ಹೋರಾಟದ ನೆನಪು
ಬೆಂಗಳೂರು, ಜ. 25: ಹಿಂದಿ ಹೇರಿಕೆ ಹೋರಾಟಕ್ಕೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬನವಾಸಿ ಬಳಗ ಪ್ರಕಾಶನವು ನಗರದ ಬಸವನಗುಡಿ ಬಿ.ಪಿ.ವಾಡಿಯಾ ರಸ್ತೆಯ ಮನೋರಮಾ ಹಾಲ್ ನಲ್ಲಿ ಜನವರಿ 25 ರಂದು ಸಂಜೆ 5 ರಿಂದ "ಸಮಾನ ಭಾಷಾನೀತಿಯ ಅವಶ್ಯಕತೆ ಬಗ್ಗೆ ಒಂದು ಚರ್ಚೆ" ಎಂಬ ಕಾರ್ಯಕ್ರಮ ಹಮ್ಮಿಕೊಂಡಿದೆ.
1965ರಿಂದ ಹಿಂದಿಯನ್ನು ಮಾತ್ರ ಅಧಿಕೃತ ಭಾಷೆಯಾಗಿಸುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ಹಿಂದಿಯೇತರ ನುಡಿಸಮುದಾಯಗಳ ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಯೋಜನೆ ಜಾರಿಗೆ ಮುಂದಾದಾಗ, 1965ರಲ್ಲಿ ದೊಡ್ಡಮಟ್ಟದ ಹೋರಾಟ ನಡೆಯಿತು. ನಂತರ ಹಿಂದಿ ಮತ್ತು ಇಂಗ್ಲಿಷ್ ಎರಡನ್ನೂ ಕೇಂದ್ರ ಸರ್ಕಾರದ ಅಧಿಕೃತ ಭಾಷೆಗಳಾಗಿ ಮುಂದುವರೆಸಲು ತೀರ್ಮಾನಿಸಲಾಯಿತು.[ಶ್ರವಣಬೆಳಗೊಳ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ನಿರ್ಣಯ!]
ಜನವರಿ 25ರಂದು ಈ ಹೋರಾಟಕ್ಕೆ 50 ವರ್ಷ ತುಂಬುತ್ತಿದ್ದು, ಈ ಹೊತ್ತಿನಲ್ಲಿ ಹೋರಾಟದ ನೆನಪುಗಳನ್ನು ಮೆಲುಕು ಹಾಕುತ್ತಾ, ಎಲ್ಲಾ ಭಾಷೆಗಳನ್ನೂ ಸಮಾನವೆಂದು ನೋಡುವ ಭಾಷಾನೀತಿಯ ಅವಶ್ಯಕತೆಯ ಬಗ್ಗೆ ಒಂದು ಚರ್ಚೆ ಹಮ್ಮಿಕೊಳ್ಳಲಾಗಿದೆ. ಹೆಸರಾಂತ ಸಾಹಿತಿ ಮತ್ತು ಹಿಂದಿ ಹೇರಿಕೆ ವಿರುದ್ಧ ಗಟ್ಟಿ ಧ್ವನಿ ಎತ್ತಿರುವ ಪಿ.ವಿ. ನಾರಾಯಣ ಮಾತನಾಡಲಿದ್ದಾರೆ. 'ಹಿಂದಿ ಹೇರಿಕೆ - ಮೂರು ಮಂತ್ರ ನೂರು ತಂತ್ರ' ಪಸ್ತಕ ಬರೆದಿರುವ ಆನಂದ್ ಪಾಲ್ಗೊಳ್ಳಲಿದ್ದಾರೆ.[ವಿಶ್ವಕಪ್ ಕ್ರಿಕೆಟ್ ವೀಕ್ಷಕ ವಿವರಣೆ ಕಸ್ತೂರಿ ಕನ್ನಡದಲ್ಲಿ!]
1965ರಿಂದ ತಮಿಳುನಾಡಿನಲ್ಲಿ ನಡೆದ ಹಿಂದಿ ಹೇರಿಕೆ ವಿರೋಧಿ ಹೋರಾಟದಲ್ಲಿ ತಮ್ಮನ್ನು ತೊಡಗಿರುವ ತಮಿಳುನಾಡಿನ ಹಿರಿಯ ಸಾಹಿತಿ ಜಯಪ್ರಕಾಶಮ್ ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ. ಭಾಷಾನೀತಿ ಹೋರಾಟಗಾರ ಮಣಿ ಮಣಿವಣ್ಣನ್ ಅವರೂ ಕಾರ್ಯಕ್ರಮದಲ್ಲಿ ಮಾತನಾಡಲಿದ್ದಾರೆ ಎಂದು ಬನವಾಸಿ ಬಳಗ ತಿಳಿಸಿದೆ.