ಬನಶಂಕರಿ ಟೆಕ್ಕಿ ಕಿಡ್ನಾಪ್: ಮೂವರು ಅರೆಸ್ಟ್
ಬೆಂಗಳೂರು, ಜೂ.23: ವಾಯುವಿಹಾರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅಪಹರಿಸಿ ಎರಡು ಲಕ್ಷಕ್ಕೂ ಅಧಿಕ ಹಣವನ್ನು ಲಪಟಾಯಿಸಿದ ಮೂವರನ್ನು ಬನಶಂಕರಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
ಕುಲುಮೆಪಾಳ್ಯ, ಅಮೃತನಗರದವರಾದ ದಾವೂದ್ಖಾನ್ ಬಿನ್ ಅಪ್ಸರ್ಖಾನ್( 21) ಶುಹೇಬ್ಖಾನ್ ಬಿನ್ ಅಪ್ಸರ್ಖಾನ್(19) ಸೈಯದ್ ಸುಹೇಲ್ ಬಿನ್ ಅಬ್ದುಲ್ ಲತೀಫ್ ಬಂಧಿತರು.
ಬನಶಂಕರಿ ಬಸ್ನಿಲ್ದಾಣದ ಬಳಿ ಜೂ.23 ಶುಕ್ರವಾರ ಮಧ್ಯರಾತ್ರಿ 11-30ಕ್ಕೆ ವಾಯುವಿಹಾರಕ್ಕೆ ಹೋಗಿದ್ದ ಟೆಕ್ಕಿ ಹೃತ್ವಿಕ್ರಾಜ್ ಎಂಬವರನ್ನು ಯಾರೋ ಅಪಹರಿಸಿದ್ದರು. ಅಪಹರಿಸಿ ಅವರಲ್ಲಿದ್ದ ಎ.ಟಿ.ಎಂ ಕಾರ್ಡ್ನಿಂದ ಹಣವನ್ನು ಡ್ರಾ ಮಾಡಿಸುವುದರ ಜೊತೆಗೆ ಅವರ ಬಳಿಯಿದ್ದ ಚೆಕ್ಗೆ ಸಹಿ ಪಡೆದು ಜಯನಗರದ ಕೆನರಾ ಬ್ಯಾಂಕ್ ಶಾಖೆಯಿಂದ 2.55 ಲಕ್ಷ ರೂಗಳನ್ನು ಡ್ರಾ ಮಾಡಿದ್ದರು.
ಈ ಸಂದರ್ಭದಲ್ಲಿ ಹೃತ್ವಿಕ್ ಅವರು ತಮ್ಮ ತಾಯಿಗೆ ಮೊಬೈಲ್ ಮೂಲಕ ಮೆಸೇಜ್ ಕಳುಹಿಸಿ ತಾವು ಅಪಹರಣವಾಗಿರುವ ಬಗ್ಗೆ ಮಾಹಿತಿನೀಡಿದ್ದರು. ಮೆಸೇಜ್ ಬಂದ ಕೂಡಲೇ ಹೃತ್ವಿಕ್ ತಾಯಿ ರೇಣುಕಾರವರು ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಈ ಅಪಹರಣ ಪ್ರಕರಣವನ್ನು ಪತ್ತೆ ಮಾಡಲು ದಕ್ಷಿಣ ವಿಭಾಗದ ಉಪ ಪೊಲೀಸ್ ಕಮೀಷನರ್ ಹೆಚ್.ಎಸ್. ರೇವಣ್ಣ ರವರ ಮಾರ್ಗದರ್ಶನದಲ್ಲಿ, ಬನಶಂಕರಿ ಉಪ ವಿಭಾಗ ಎಸಿಪಿ ಎಸ್.ಸುರೇಶ್ಬಾಬು ನೇತೃತ್ವದಲ್ಲಿ ಬನಶಂಕರಿ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಹೆಚ್.ಎಸ್.ಜಗದೀಶ, ಜೆ.ಪಿ.ನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಮನೋಜ್ಕುಮಾರ್, ಸುಬ್ರಮಣ್ಯಪುರ ಪೊಲೀಸ್ ಠಾಣೆಯ ಪಿ.ಐ ಎಸ್.ಕೆ. ಮಾಲತೀಶ್, ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯ ಪಿಐ ಬಿ.ಕೆ.ಶೇಖರ್ ಮತ್ತು ಪಿ.ಎಸ್.ಐ ರವರುಗಳಾದ ಮಂಜು.ಬಿ.ಪಿ, ಧರ್ಮೇಂದ್ರ, ಮಂಜುನಾಥ್.ಕೆ.ಆರ್, ಮಂಜುನಾಥ್ ಮತ್ತು ಸಿಬ್ಬಂದಿಯವರನ್ನು ಒಳಗೊಂಡ ಪತ್ತೆ ತಂಡಗಳು ಕೃತ್ಯ ನಡೆದ 24 ಗಂಟೆಯೊಳಗಾಗಿ ಅಪಹರಣ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ.