just in: ಸಾಕ್ಷಿ ಇದ್ದರೆ PFI,SDPI ಬ್ಯಾನ್ ಮಾಡಲಿ -ಸಿದ್ದರಾಮಯ್ಯ
ಬೆಂಗಳೂರು, ಆಗಸ್ಟ್ 16: 'ಪಿಎಫ್ಐ ಮತ್ತು ಎಸ್ಡಿಪಿಐ ವಿರುದ್ಧ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಸಂಘಟನೆಗಳನ್ನು ನಿಷೇಧ ಮಾಡಲಿ" ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಹೇಳಿದ್ದಾರೆ.
"ಪಿಎಫ್ಐ, ಎಸ್ಡಿಪಿಐ ಈ ಯಾವ ಸಂಘಟನೆಗಳೇ ಆಗಲಿ ಸಮಾಜದ ಸಾಮರಸ್ಯ ಹಾಳುಮಾಡುತ್ತಿವೆ, ಗಲಭೆಗಳಿಗೆ ಕಾರಣವಾಗುತ್ತಿವೆ ಎಂಬುದಕ್ಕೆ ಸೂಕ್ತ ಸಾಕ್ಷ್ಯಾಧಾರ ಇದ್ದರೆ ಬಿಜೆಪಿ ಕರ್ನಾಟಕ ಸರಕಾರ ಅಂತಹಾ ಸಂಘಟನೆಗಳನ್ನು ನಿಷೇಧ ಮಾಡಲಿ' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
'ರಾಜ್ಯ ಮತ್ತು ಕೇಂದ್ರದಲ್ಲಿ ಎರಡೂ ಕಡೆ ನಿಮ್ಮದೆ ಸರ್ಕಾರ ಇದೆ. ಆದರೂ ಯಾಕೆ ಸುಮ್ಮನಿದ್ದೀರ..?" ಎಂದು ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ನಡೆದಿರುವ ಗಲಭೆ ಹಿಂದೆ ಕಾಂಗ್ರೆಸ್ನವರು ಇದ್ದಾರೆ. ಗಲಭೆ ಬಗ್ಗೆ ಕಾಂಗ್ರೆಸ್ನವರು ಖಂಡನೆ ವ್ಯಕ್ತಪಡಿಸಿಲ್ಲ. ಯಾವಾಗಲೂ ಬಿಜೆಪಿಯವರು ಕೋಮುಗಲಭೆ ಸೃಷ್ಟಿಸುತ್ತಾರೆ ಎಂದು ಆರೋಪ ಮಾಡುತ್ತಾರೆ. ಆದರೆ ಕೋಮು ಗಲಭೆ ಸೃಷ್ಟಿಸುತ್ತಿರುವವರು ಕಾಂಗ್ರೆಸ್ ಕಾರ್ಪೋರೇಟರ್ ಎಂದು ಮಾಜಿ ಸಚಿವ ಈಶ್ವರಪ್ಪ ಆರೋಪ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, "ರಾಷ್ಟ್ರಧ್ವಜದ ಜಾಗದಲ್ಲಿ ಭಗವಾಧ್ವಜ ಹಾರಿಸುತ್ತೇವೆ ಎಂದು ಹೇಳಿದ ಈಶ್ವರಪ್ಪ ಅವರನ್ನು ಇನ್ನೂ ಪಕ್ಷದಲ್ಲಿಟ್ಟುಕೊಂಡು ಬಿಜೆಪಿ ಕರ್ನಾಟಕದ ನಾಯಕರು ನಮಗೆ ದೇಶಪ್ರೇಮದ ಪಾಠ ಮಾಡುವುದು ಆತ್ಮವಂಚನೆಯಾಗುತ್ತದೆ" ಎಂದು ಕುಟುಕಿದ್ದಾರೆ.
ಮುಂದುವರಿದು, "ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಕರಾವಳಿಯಲ್ಲಿ ಹತ್ಯೆಗೀಡಾದ ಪ್ರವೀಣ್ ನೆಟ್ಟಾರು ಮನೆಗೆ ಮಾತ್ರ ಹೋಗಿ ಪರಿಹಾರ ಕೊಟ್ಟಿದ್ದಾರೆ. ಮಸೂದ್ ಮತ್ತು ಫಾಜಿಲ್ ಕುಟುಂಬವನ್ನು ಭೇಟಿಯೂ ಮಾಡಿಲ್ಲ, ಪರಿಹಾರವನ್ನೂ ಘೋಷಿಸಿಲ್ಲ. ಸರಕಾರದ ಬೊಕ್ಕಸದಿಂದ ನೀಡುವ ಪರಿಹಾರದಲ್ಲಿ
ಇಂತಹಾ ತಾರತಮ್ಯ ಯಾಕೆ" ಎಂದು ಮುಖ್ಯಮಂತ್ರಿಗಳ ನಡೆಯನ್ನು ಖಂಡಿಸಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದು ವಿಡಿ ಸಾವರ್ಕರ್ ಅವರ ಬ್ಯಾನರ್ ಅಳವಡಿಕೆ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ತೀವ್ರ ಘರ್ಷಣೆಯುಂಟಾಗಿದ್ದು. ಇದಾದ ಬಳಿಕ ಶಿವಮೊಗ್ಗ ಜಿಲ್ಲೆಯಲ್ಲಿ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಶಿವಮೊಗ್ಗದಲ್ಲಿ ಆಗಸ್ಟ್ 18ರ ರಾತ್ರಿ 10 ಗಂಟೆಯವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ.
Recommended Video