'ಅತ್ಯಾಚಾರ ಪ್ರೇರೇಪಿಸುವ ಚಿತ್ರ ಕಿತ್ತು ಬಿಸಾಕಿ'
ಬೆಂಗಳೂರು, ಜು. 21 : ಸರಕಾರ ಗೊರಕೆ ಹೊಡೆಯುತ್ತಿದೆಯೋ, ಪೊಲೀಸ್ ಇಲಾಖೆ ನಿಷ್ಕ್ರಿಯವಾಗಿದೆಯೋ, ಇವೆರಡರ ದುರ್ಲಾಭ ಪಡೆದಿರುವಂತಿರುವ ವಿಕೃತ ಕಾಮಿಗಳು, ಸಮಾಜವಿರೋಧಿ ಕ್ರಿಮಿಗಳು ಮಹಿಳೆಯರ ಮೇಲೆ ಮುಗಿಬಿದ್ದಿದ್ದಾರೆ. ಬೆಂಗಳೂರು, ಕೋಲಾರ, ಮಂಡ್ಯ, ಬೆಳಗಾವಿ, ಹಾವೇರಿ ಮುಂತಾದ ಜಿಲ್ಲೆಗಳಲ್ಲಿ ಕಾಮುಕರ ಆಟಕ್ಕೆ ಕೊಕ್ಕೆ ಇಲ್ಲದಂತಾಗಿದೆ.
ಲೈಂಗಿಕ ದೌರ್ಜನ್ಯವನ್ನು ಹತ್ತಿಕ್ಕಲು, ಕಾನೂನು ವ್ಯವಸ್ಥೆಯನ್ನು ನಿಯಂತ್ರಿಸಲು ಸಂಪೂರ್ಣ ವಿಫಲರಾಗಿದ್ದಾರೆ ಎಂದು ವಿರೋಧ ಪಕ್ಷಗಳು ಗೃಹಮಂತ್ರಿ ಕೆಜೆ ಜಾರ್ಜ್ ಅವರ ತಲೆದಂಡಕ್ಕೆ ರೆಡಿಯಾಗಿ ನಿಂತಿವೆ. ವಿರೋಧ ಪಕ್ಷದವರು ಗೃಹಸಚಿವರ ತಲೆದಂಡ ಕೇಳುತ್ತಿರುವ ಸಮಯದಲ್ಲಿ ಸರಕಾರ ಪೊಲೀಸ್ ಇಲಾಖೆಯಲ್ಲಿ ಭಾರೀ ಬದಲಾವಣೆಗಳನ್ನು ಜಾರಿಗೆ ತಂದಿದ್ದು, ಬೆಂಗಳೂರು ಪೊಲೀಸ್ ಆಯುಕ್ತರನ್ನೇ ವರ್ಗಾವಣೆ ಮಾಡಿದೆ.
ಈ ನಡುವೆ, ಮೃಗೀಯ ಕಾಮನೆಯ ಕಿಚ್ಚೆಬ್ಬಿಸುವಂಥ ಚಿತ್ರವೊಂದು ಬಿಡುಗಡೆಯಾಗಿರುವುದರ ಬಗ್ಗೆ ವಿಧಾನಸಭೆಯಲ್ಲಿ ಗಮನ ಸೆಳೆಯಲಾಗಿದ್ದು, ಇಂಥ ಚಿತ್ರಗಳನ್ನು ಚಿತ್ರಮಂದಿರದಿಂದ ಕಿತ್ತೊಗೆಯದಿದ್ದರೆ ಮಹಿಳೆಯರ ಮೇಲೆ ಮತ್ತಷ್ಟು ದೌರ್ಜನ್ಯ ಹೆಚ್ಚುತ್ತವೆಂದು ಜೆಡಿಎಸ್ ನಾಯಕ ವೈಎಸ್ವಿ ದತ್ತಾ ಅವರು ಸರಕಾರವನ್ನು ಆಗ್ರಹಿಸಿದ್ದಾರೆ. ಇದನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಚಿತ್ರ ನೋಡಿ ವರದಿ ಒಪ್ಪಿಸುವಂತೆ ಪೊಲೀಸ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ.
ಏನೂ ಅರಿಯದ ಮಕ್ಕಳನ್ನು ಮುಕ್ಕುತ್ತಿರುವ ಕಾಮುಕರನ್ನು ನಿರ್ದಯವಾಗಿ ಶಿಕ್ಷಿಸಬೇಕು, ಮಹಿಳೆಯರಿಗೆ ರಕ್ಷಣೆ ನೀಡಬೇಕೆಂದು ಆಗ್ರಹಿಸಿ ಬೆಂಗಳೂರು, ಧಾರವಾಡ, ಮೈಸೂರು, ತುಮಕೂರು, ಗುಲಬರ್ಗ, ಮಂಡ್ಯದಲ್ಲಿ ಭಾರೀ ಪ್ರತಿಭಟನೆಗಳು ನಡೆಯುತ್ತಿವೆ. ಅಸಮರ್ಥ ಕೆಜೆ ಜಾರ್ಜ್ ರನ್ನು ಕಿತ್ತು ಬಿಸಾಕಿ ಎಂದು ಭಾರತೀಯ ಜನತಾ ಪಕ್ಷ ಹಲವಾರು ಕಡೆಗಳಲ್ಲಿ ಪ್ರತಿಭಟನೆ ನಡೆಸಿದೆ. ಇದೆಲ್ಲದರ ಜೊತೆಗೆ ಕೇಂದ್ರ ಸರಕಾರ ಕೂಡ ಇತ್ತ ಗಮನ ಹರಿಸಬೇಕಿದೆ. [ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್]
ಲೈಂಗಿಕತೆ ಪ್ರೇರೇಪಿಸುವ ಚಿತ್ರಗಳು ಮಾರಕವೆ?
ಹೇಟ್ ಸ್ಟೋರಿ 2ರಂಥ ಚಿತ್ರಗಳು ಯುವಕರನ್ನು ವ್ಯಗ್ರರನ್ನಾಗಿ ಮಾಡುತ್ತಿವೆ, ಇಂಥ ಚಿತ್ರಗಳು ಸಮಾಜದ ಸ್ವಾಸ್ಥ್ಯಕ್ಕೆ ಮಾರಕ ಎಂಬುದು ವೈಎಸ್ವಿ ದತ್ತಾ ಅವರ ಅಭಿಪ್ರಾಯ. ನಿಮ್ಮದೂ ಇದೇ ಅಭಿಪ್ರಾಯವೆ?
ಮಂಡ್ಯದಲ್ಲಿ ಪ್ರತಿಕೃತಿ ಸುಟ್ಟು ಪ್ರತಿಭಟನೆ
ಮಂಡ್ಯದಲ್ಲಿ ಭಾರತೀಯ ಜನತಾ ಪಕ್ಷದವರು ಸರಕಾರದ ಪ್ರತಿಕೃತಿ ಸುಟ್ಟು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅಸಮರ್ಥ ಗೃಹ ಮಂತ್ರಿಯನ್ನು ಕಿತ್ತು ಬಿಸಾಕಿ
ಗೃಹ ಸಚಿವ ಕೆಜೆ ಜಾರ್ಜ್ ಕಾನೂನು ಮತ್ತು ಸುವ್ಯಸ್ಥೆಯನ್ನು ನಿಯಂತ್ರಿಸುವಲ್ಲಿ ವಿಫಲರಾಗಿದ್ದಾರೆ. ಇಂಥ ಅಸಮರ್ಥ ಮಂತ್ರಿಯನ್ನು ಕಿತ್ತೊಗೆಯಿರಿ ಎಂದು ಬಿಜೆಪಿಯ ಯುವ ಮೋರ್ಚಾ ಪ್ರತಿಭಟನೆ ನಡೆಸಿತು.
ಧಾರವಾಡದಲ್ಲಿಯೂ ಪ್ರತಿಭಟನೆಯ ನಿಗಿನಿಗಿ
ಧಾರವಾಡದಲ್ಲಿ ಸಣ್ಣಗೆ ಸೋನೆ ಮಳೆ ಸುರಿಯುತ್ತಿದ್ದರೂ ಲೆಕ್ಕಿಸದ ಜನರು ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ತಮ್ಮ ದನಿ ಎತ್ತಿದರು.
ಕೋಲಾರದಲ್ಲಿ ಎದ್ದ ಕೂಗು ಸರಕಾರಕ್ಕೆ ಕೇಳುವುದೆ?
ಬೆಂಗಳೂರು ಬಿಟ್ಟರೆ ಮಹಿಳೆಯರ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವುದು ಕೋಲಾರದಲ್ಲಿ. ಕಳೆದ 10 ದಿನಗಳಲ್ಲಿ 7ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿ ದಾಖಲಾಗಿವೆ. ಅಲ್ಲಿಯೂ ಭಾರೀ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಮೈಸೂರಿನಲ್ಲಿ ಸಿಡಿದೆದ್ದ ಮಹಿಳಾಮಣಿಗಳು
ರೇಪ್ ಸರಕಾರಕ್ಕೆ ಧಿಕ್ಕಾರವಿರಲಿ, ಗೃಹಮಂತ್ರಿ ರಾಜೀನಾಮೆ ನೀಡಲಿ, ಸಿದ್ದರಾಮಯ್ಯನವರೆ ನಿದ್ದೆಯಿಂದ ಎದ್ದೇಳಿ ಮುಂತಾದ ಫಲಕಗಳನ್ನು ಹಿಡಿದುಕೊಂಡು ಮಹಿಳೆಯರು ರಾಜ್ಯದಲ್ಲಿ ನಡೆಯುತ್ತಿರುವ ದೌರ್ಜನ್ಯದ ವಿರುದ್ಧ ಮೈಸೂರಿನ ಮಹಿಳೆಯರು ಘೋಷಣೆಗಳನ್ನು ಕೂಗಿದರು.