ಪ್ರತಿ ಲೀಟರ್ ಹಾಲಿಗೆ 2 ರೂ ಹೆಚ್ಚಳ: ರೈತರಿಗೆ ಬಮೂಲ್ ಸಿಹಿ ಸುದ್ದಿ
ಬೆಂಗಳೂರು, ಡಿಸೆಂಬರ್ 31: ಹೊಸ ವರ್ಷದಿಂದ ಬಮೂಲ್ ವ್ಯಾಪ್ತಿಯ ರೈತರು ತಾವು ಪೂರೈಸುವ ಪ್ರತಿ ಲೀಟರ್ ಹಾಲಿನ ಮೇಲೆ ಹೆಚ್ಚುವರಿ 2 ರೂ. ಪ್ರೋತ್ಸಾಹಧನ ಪಡೆದುಕೊಳ್ಳಲಿದ್ದಾರೆ. ಬಮೂಲ್ ರೈತರಿಗೆ ಈ ಸಂತಸದ ಸುದ್ದಿ ನೀಡಿದೆಯಾದರೂ, ಇದರ ಹೊರೆ ಗ್ರಾಹಕರ ಮೇಲೆ ಬೀಳುವ ಸಾಧ್ಯತೆ ಇದೆ.
2020ರ ಜನವರಿ 1ರಿಂದ ಪ್ರತಿ ಲೀಟರ್ ನಂದಿನಿ ಹಾಲಿಗೆ 2 ರೂ. ಪ್ರೋತ್ಸಾಹ ಧನ ಹೆಚ್ಚಿಸಲು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟ ನಿರ್ಧರಿಸಿದೆ. ಇದರ ಜತೆಗೆ ಲೀಟರ್ ಹಾಲಿನ ದರವನ್ನು 3ರೂ ನಷ್ಟು ಹೆಚ್ಚಳ ಮಾಡಲು ಕೂಡ ಅದು ಸರ್ಕಾರಕ್ಕೆ ಮನವಿ ಮಾಡಿದೆ. ಇದರಿಂದ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಹೊಸ ವರ್ಷದಿಂದ ಮತ್ತೊಂದು ಬರೆ ಬೀಳಲಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲಾ ವ್ಯಾಪ್ತಿಯಲ್ಲಿ ಹಾಲು ಪೂರೈಕೆ ಮಾಡುತ್ತಿರುವ ಬಮೂಲ್, ಪ್ರಸ್ತುತ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ ಕಳೆದ ಸೆಪ್ಟೆಂಬರ್ನಿಂದ 26 ರೂ. ನೀಡುತ್ತಿದೆ. ಇದನ್ನು ಜ.1ರಿಂದ 28ರೂ.ಗೆ ಹೆಚ್ಚಿಸಲಾಗುತ್ತಿದೆ ಎಂದು ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಸೋಮವಾರ ತಿಳಿಸಿದರು.
ಎಟಿಎಂನಲ್ಲಿ ಹಣ ಮಾತ್ರ ಅಲ್ಲ, ಇನ್ಮುಂದೆ ಹಾಲು ಸಹ ಬರುತ್ತೆ
ಮೂರು ವರ್ಷಗಳಿಂದ ಸರ್ಕಾರ ಹಾಲಿನ ಬೆಲೆ ಏರಿಕೆ ಮಾಡಿಲ್ಲ. ಹೀಗಾಗಿ ಪ್ರತಿ ಲೀಟರ್ ಹಾಲಿಗೆ ಕನಿಷ್ಠ 3 ರೂ ಹೆಚ್ಚಳ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ಹಾಲಿನ ದರ ಏರಿಕೆ ಮಾಡಿದರೆ ಅದರಲ್ಲಿನ ಶೇ 75ರಷ್ಟನ್ನು ರೈತರಿಗೆ ಮತ್ತು ಶೇ 25ರಷ್ಟನ್ನು ಒಕ್ಕೂಟಗಳ ನಿರ್ವಹಣೆಗೆ ಬಳಸಿಕೊಳ್ಳಲಾಗುವುದು. ಪಶುಸಂಗೋಪನೆ ಇಲಾಖೆ, ಸಹಕಾರ ಇಲಾಖೆ, ಕೆಎಂಎಫ್ ಜತೆ ಚರ್ಚಿಸಿ ಬೆಲೆ ಏರಿಕೆ ಬಗ್ಗೆ ಶೀಘ್ರವೇ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.
ಇಬ್ಬರ ನಡುವಿನ ತಿಕ್ಕಾಟದಲ್ಲಿ ಮಣ್ಣು ಪಾಲಾಯ್ತು 1500 ಲೀಟರ್ ಹಾಲು
ಬಮೂಲ್ ವ್ಯಾಪ್ತಿಯಲ್ಲಿನ ಪ್ರದೇಶಗಳಲ್ಲಿ ಹಸುವಿನ ಆಹಾರದ ಬೇಡಿಕೆ ಹೆಚ್ಚಾಗಿದೆ. ಮಳೆಯ ಕೊರತೆಯಿಂದ ಒಣ ಮತ್ತು ಹಸಿರು ಮೇವು ಹಾಗೂ ನೀರಿನ ಕೊರತೆ ಹೆಚ್ಚಾಗಿದೆ. ಮುಂಬರುವ ಬೇಸಿಗೆಯಲ್ಲಿ ಹೈನುಗಾರಿಕಾ ಕೃಷಿಕರಿಗೆ ಹೆಚ್ಚಿನ ಸವಾಲು ಎದುರಾಗಲಿದೆ. ಪಶುಸಂಗೋಪನೆ ದುಬಾರಿಯಾಗಲಿದೆ. ಹೀಗಾಗಿ ರೈತರಿಗೆ ನೆರವಾಗಲು ಹಾಲು ಖರೀದಿ ದರವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದರು.
ನಗರದಲ್ಲಿ ನಂದಿನಿ ಹೆಸರನ್ನು ಬಳಸಿಕೊಂಡು ನಕಲಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿದೆ. ಇದರಿಂದ ಕೆಎಂಎಫ್ ಬ್ರ್ಯಾಂಡ್ ಮೌಲ್ಯವು ದುರ್ಬಳಕೆಯಾಗುತ್ತಿದೆ. ಕೆಎಂಎಫ್ ಜಾಗೃತ ದಳ ಹಲವು ಹಾಲು ಉತ್ಪನ್ನಗಳ ಮೇಲೆ ಇತ್ತೀಚೆಗೆ ದಾಳಿ ನಡೆಸಿದಾಗ ಎರಡು ಮಳಿಗೆಗಳಲ್ಲಿ ನಕಲಿ ತುಪ್ಪ ಪತ್ತೆಯಾಗಿತ್ತು. ಈ ಮಳಿಗೆಗಳ ಮಾಲೀಕರ ಮೇಲೆ ಎಫ್ಐಆರ್ ದಾಖಲಿಸಲಾಗಿದೆ ಎಂದರು ತಿಳಿಸಿದರು.