ಮಗನ ಪರ ಪ್ರಚಾರಕ್ಕೆ ಬಚ್ಚೇಗೌಡ್ರು ಬರ್ತಾರಾ? ಶರತ್ ಕ್ಲಿಯರ್ ಕಟ್ ಸ್ಪಷ್ಟನೆ
ಬೆಂಗಳೂರು, ನ 22: ಮುಖ್ಯಮಂತ್ರಿ ಯಡಿಯೂರಪ್ಪ ಆದಿಯಾಗಿ, ಬಿಜೆಪಿ ಮುಖಂಡರ, ಯಾವ ಬೆದರಿಕೆಗೂ, ಒತ್ತಡಕ್ಕೂ ಮಣಿಯದ ಶರತ್ ಬಚ್ಚೇಗೌಡ, ಹೊಸಕೋಟೆ ಕ್ಷೇತ್ರದಿಂದ ಪಕ್ಷೇತರರಾಗಿ ಕಣದಲ್ಲಿ ಉಳಿದಿದ್ದಾರೆ.
ನಾಮಪತ್ರ ಸಲ್ಲಿಕೆ ಹಿಂಪಡೆಯುವ ಕೊನೆಯ ದಿನದಂದು, ಬಿಜೆಪಿಯ ಪ್ರಾಥಮಿಕ ಸದಸ್ಯತ್ವದಿಂದ ಶರತ್ ಅವರನ್ನು ಉಚ್ಚಾಟಿಸಿ, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದರು.
ಶರತ್ ಬಚ್ಚೇಗೌಡ ಗೆ ಪ್ರೆಶರ್ ಕುಕ್ಕರ್: ಬುಡಮೇಲಾದ ಕಾಂಗ್ರೆಸ್ ಪ್ಲಾನ್
ಚುನಾವಣಾ ಆಯೋಗ ಶರತ್ ಬಚ್ಚೇಗೌಡಗೆ ಪ್ರೆಶರ್ ಕುಕ್ಕರ್ ಅನ್ನು ಚಿಹ್ನೆಯಾಗಿ ನೀಡಿದೆ. ಈ ನಡುವೆ, ಶರತ್ ಅವರ ತಂದೆ, ಬಿಜೆಪಿ ಸಂಸದ, ಬಚ್ಚೇಗೌಡ್ರು, ಮಗನ ಪರವಾಗಿ ಪ್ರಚಾರ ನಡೆಸುತ್ತಾರಾ ಎನ್ನುವುದು ಪ್ರಶ್ನೆಯಾಗಿತ್ತು.
ಈ ಬಗ್ಗೆ ಸ್ಪಷ್ಟನೆ ನೀಡಿರುವ ಶರತ್, "ಶಿಸ್ತುಕ್ರಮ ಎದುರಿಸಬೇಕಾದಂತಹ ಕೆಲಸವನ್ನು ನನ್ನ ತಂದೆ ಮಾಡಿಲ್ಲ. ನನ್ನ ತಂದೆ ಮಾಡಿರುವ ಅಭಿವೃದ್ದಿ ಕೆಲಸವನ್ನು ಮುಂದಿಟ್ಟುಕೊಂಡು ನಾನು ಮತಯಾಚಿಸುತ್ತೇನೆ" ಎಂದು ಹೇಳಿದ್ದಾರೆ.
"ನನ್ನ ಪರವಾಗಿ ಬಚ್ಚೇಗೌಡ್ರು ಪ್ರಚಾರ ನಡೆಸಿದರೆ ತಾನೇ, ಅವರ ವಿರುದ್ದ ಶಿಸ್ತುಕ್ರಮ. ನನ್ನ ತಂದೆ, ಪ್ರಚಾರಕ್ಕೆ ಬರುವುದಿಲ್ಲ" ಎಂದು ಶರತ್ ಸ್ಪಷ್ಟನೆಯನ್ನು ನೀಡಿದ್ದಾರೆ.
ಹೊಸಕೋಟೆ ಉಪ ಚುನಾವಣೆ; ಶರತ್ ಬಚ್ಚೇಗೌಡ ಸ್ಫೋಟಕ ಹೇಳಿಕೆ
"ಕಳೆದ ಚುನಾವಣೆಯಲ್ಲಿ ಬಿಜೆಪಿಯಲ್ಲಿರುವಾಗ ಮತದಾರರು ಆಶೀರ್ವಾದ ಮಾಡಿದರು. ಈಗ ಬಿಜೆಪಿ ಟಿಕೆಟ್ ನೀಡದ ಕಾರಣ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಕಾರ್ಯಕರ್ತರು ಒತ್ತಾಯ ಮಾಡಿದರು. ಹೀಗಾಗಿ ಯಾವುದೇ ಕಾರಣಕ್ಕೂ ಕಣದಿಂದ ಹಿಂದೆ ಸರಿಯಲ್ಲ" ಎಂದು ಶರತ್ ಬಚ್ಚೇಗೌಡ ಹಲವು ಬಾರಿ ಸ್ಪಷ್ಟಪಡಿಸಿದ್ದರು.