ಮುದ್ದು ಮುಗುವಿಗಾಗಿ ಸಾಕುತಾಯಿ ಕಣ್ಣೀರು ಮತ್ತು ಜನ್ಮ ಕೊಟ್ಟ ತಾಯಿಯಿಂದ ಕಾನೂನು ಸಮರ
ಬೆಂಗಳೂರು, ಜೂ. 10: "ಮಗುವನ್ನು ರಾಜಕುಮಾರನಂತೆ ಸಾಕಿದ್ದೇವೆ. ಆ ಮಗು ಬಿಟ್ಟು ಬದುಕುವ ಶಕ್ತಿ ನಮಗಿಲ್ಲ ಸ್ವಾಮಿ, ದಯವಿಟ್ಟು ನಮಗೆ ಕೊಡಿಸಿ" ತನ್ನದೇ ಮಗು ಎಂದು ಒಂದು ವರ್ಷದಿಂದ ರಾಜಕುಮಾರನಂತೆ ಸಾಕಿದ ಪೋಷಕರ ಅಂತರಾಳ ನೋವಿನ ನುಡಿ. "ಭಗವಂತ ಅಂತೂ ನಾನು ಜನ್ಮ ಕೊಟ್ಟ ಮಗುವನ್ನು ನನ್ನ ಮಡಿಲಿಗೆ ಸೇರಿಸಿಬಿಟ್ಟೆ. ಆ ಮಗು ನನ್ನ ಕೈಗೆ ಬಂದ ಕೂಡಲೇ ಮುತ್ತಿಟ್ಟು ಮುದ್ದಾಡಬೇಕು. ಆದಷ್ಟು ಬೇಗ ನನ್ನ ಮಡಿಲು ಸೇರಿಸು" ಎಂದು ದೇವರಲ್ಲಿ ಬೇಡುತ್ತಿರುವ ಜನ್ಮ ನೀಡಿದ ತಾಯಿ. ಇದು ಸಿನಿಮಾ ಕ್ಲೈಮ್ಯಾಕ್ಸ್ ಅಲ್ಲ. ಮನೋವೈದ್ಯೆ ರಶ್ಮಿ ಕದ್ದ ಮಗುವಿನ ವಿಚಾರದಲ್ಲಿ ಸಾಕು ತಾಯಿ ಹಾಗೂ ಜನ್ಮ ಕೊಟ್ಟ ತಾಯಿ ನಡುವೆ ಏರ್ಪಟ್ಟಿರುವ ದುಸ್ಥಿತಿ.
ರೇಖಾ ಚಿತ್ರ ನೀಡಿದ ಸುಳಿವಿನಿಂದ ಒಂದು ವರ್ಷದ ಬಳಿಕ ಮಗು ಕಳ್ಳಿ ವೈದ್ಯೆ ಸೆರೆ
ಮನೋವೈದ್ಯೆ ರಶ್ಮಿ ಮಗು ಕದ್ದ ಪ್ರಕರಣ
ಮನೋವೈದ್ಯೆ ರಶ್ಮಿ ಮಗು ಕದ್ದ ಪ್ರಕರಣ ತಾರ್ಕಿಕ ಅಂತ್ಯಕ್ಕೆ ಬಂದು ನಿಂತಿದೆ. ತಮ್ಮದೇ ವೀರ್ಯಾಣು ಮತ್ತು ಅಂಡಾಣುವಿನಿಂದ ಹುಟ್ಟಿದ ಮಗು ಎಂದು ನಂಬಿಸಿ ನೀಡಿದ್ದ ಕದ್ದು ಮಗುವನ್ನು ಕೊಪ್ಪಳ ಮೂಲದ ದಂಪತಿ ತಮ್ಮದೇ ಮಗು ಎಂದು ಭಾವಿಸಿ ಸಾಕಿದ್ದರು. ಆ ಮಗು ಈಗ ಒಂದು ವರ್ಷ ಪೂರೈಸಿದ್ದು, ಸಾಕು ತಾಯಿಯ ಮುಖ ನೋಡಿ ಮಂದಹಾಸ ನಗು ಬೀರುತ್ತಿದೆ. ಆ ಮಗುವಿನಲ್ಲಿ ಕಂಡು ಕೊಂಡಿರುವ ಖುಷಿಯನ್ನು ಬಿಟ್ಟು ಒಂದು ಕ್ಷಣ ಇರಲಾದ ಸ್ಥಿತಿಯಲ್ಲಿ ಅಂಗಲಾಚುತ್ತಿದ್ದಾರೆ. ನಾವು ಸಾಕಿದ್ದು ಕದ್ದು ಮಗು ಎಂದು ತಿಳಿದು ಕಣ್ಣೀರು ಹಾಕುತ್ತಿದ್ದಾರೆ. ನಮ್ಮ ಮಗುವನ್ನು ನಮಗೆ ಕೊಡಿಸಿ ಎಂದು ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರ ಮುಂದೆ ಗೋಳಾಡಿದ್ದಾರೆ. ಸಾಕು ತಾಯಿಯ ಕಣ್ಣೀರು ನೋಡಿ ಜನ್ಮ ಕೊಟ್ಟ ತಾಯಿಯೂ ಕಣ್ಣೀರು ಹಾಕುತ್ತಿದ್ದಾರೆ.
ಮಗು ಮಡಿಲು ಸೇರಲಿದೆ
ಮಗು ನೀನೇ ನನ್ನ ಜೀವ ಎಂದು ಜನ್ಮ ಕೊಟ್ಟ ತಾಯಿ ಮಗುವಿನ ಉಸಿರಲ್ಲಿ ಉಸಿರಾಡುತ್ತಿದ್ದಳು. ಮನೋವೈದ್ಯೆ ರಶ್ಮಿ ಮಗುವನ್ನು ಕದ್ದ ದಿನದಿಂದ ಜೀವನವೇ ಬೇಡ ಎಂದು ಮಾನಸಿಕ ಖಿನ್ನತೆಗೆ ಒಳಗಾಗಿದ್ದಳು. ರೇಖಾ ಚಿತ್ರ ಆಧರಿಸಿ ಮಗುವನ್ನು ಕದ್ದಿದ್ದ ಕಳ್ಳ ವೈದ್ಯೆಯನ್ನು ಬಸವನಗುಡಿ ಮಹಿಳಾ ಠಾಣೆ ಪೊಲೀಸರು ಬಂಧಿಸಿದ್ದರು. ಆ ಬಳಿಕ ಕೊಪ್ಪಳದಲ್ಲಿದ್ದ ಮಗುವನ್ನು ಪತ್ತೆ ಮಾಡಿದ್ದರು. ಇದೀಗ ಕಾನೂನಾತ್ಮಕವಾಗಿ ಜನ್ಮ ಕೊಟ್ಟ ತಾಯಿಗೆ ಮಗುವನ್ನು ಹಸ್ತಾಂತರಿಸಲು ಪ್ರಕ್ರಿಯೆ ಆರಂಭಿಸಲಾಗಿದೆ. ಮಕ್ಕಳ ಕಲ್ಯಾಣ ಸಮಿತಿ ಆದೇಶದ ಮೇರೆಗೆ ಮಗುವಿನ ಡಿಎನ್ಎ ಪರೀಕ್ಷೆಯನ್ನು ಜೂ. 16 ರಂದು ನಿಗದಿ ಮಾಡಲಾಗಿದೆ. ಡಿಎನ್ಎ ಪರೀಕ್ಷೆ ಮುಗಿದ ಕೂಡಲೇ ಮಗುವನ್ನು ಜನ್ಮ ಕೊಟ್ಟ ತಾಯಿಗೆ ಪೊಲೀಸರು ಹಸ್ತಾಂತರಿಸಲಿದ್ದಾರೆ. ಮಗುವಿನ ತಂದೆ ತಾಯಿಯ ಮಾದರಿಯನ್ನು ಸಂಗ್ರಹಿಸಲಿದ್ದು, ವರದಿ ಬಂದ ಬಳಿಕ ಅದರ ಆಧಾರದ ಮೇಲೆ ಮಗುವನ್ನು ಹಸ್ತಾಂತರಿಸಲಾಗುತ್ತದೆ. ಆದರೆ, ಮಗು ನನಗೆ ಬೇಕು ಅಂತ ಸಾಕು ತಾಯಿ ಕಣ್ಣೀರು ಹಾಕುತ್ತಿದ್ದಾರೆ. ಇತ್ತ ಜನ್ಮ ಕೊಟ್ಟ ತಾಯಿ ಮಗುವನ್ನು ಮಡಿಲು ಸೇರಿಸಿಕೊಳ್ಳವ ತವಕದಲ್ಲಿದ್ದಾರೆ.
ಘಟನೆ ಹಿನ್ನೆಲೆ
ಕೊಪ್ಪಳ ಮೂಲದ ದಂಪತಿಗೆ ಮಗು ಆಗಿರಲಿಲ್ಲ. ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುವ ವೇಳೆ ಪರಿಚಿತವಾಗಿದ್ದ ಮನೋ ವೈದ್ಯೆ ರಶ್ಮಿ, ನಿಮಗೆ ಐವಿಎಫ್ ತಂತ್ರಜ್ಞಾನ ಮೂಲಕ ಮಗು ಕೊಡಿಸಲಾಗುವುದು ಎಂದು ಹೇಳಿದ್ದಳು. ಅದರಂತೆ ದಂಪತಿಯ ಅಂಡಾಣು ಮತ್ತು ವೀರ್ಯಾಣು ಸಂಗ್ರಹಿಸಿದ್ದ ರಶ್ಮೀ, ಬಾಡಿಗೆ ತಾಯಿಯ ಹೊಟ್ಟೆಯಲ್ಲಿ ಮಗು ಬೆಳೆಯುತ್ತಿದೆ. ನಿಮಗೆ ಶೀಘ್ರದಲ್ಲಿಯೇ ಮಗು ನೀಡುವುದಾಗಿ ನಂಬಿಸಿದ್ದಳು. ಇದನ್ನು ನಂಬಿದ್ದ ದಂಪತಿ ಬರೋಬ್ಬರಿ ಹದಿನೈದು ಲಕ್ಷ ರೂ. ಹಣವನ್ನು ನೀಡಿದ್ದರು. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಆಗತಾನೇ ಜನಿಸಿದ ಮಗುವನ್ನು ಕದ್ದಿದ್ದ ವೈದ್ಯೆ ರಶ್ಮಿ ಆಟೋದಲ್ಲಿ ಪರಾರಿಯಾಗಿದ್ದಳು. ಆನಂತರ ಮಗುವನ್ನು ಕೊಪ್ಪಳ ಮೂಲದ ದಂಪತಿಗೆ ನೀಡಿ ಬಾಕಿ ಹಣ ಪಡೆದಿದ್ದಳು. ಮಗು ಕಳೆದುಕೊಂಡಿದ್ದ ತಾಯಿ ಕಣ್ಣೀರು ಹಾಕುತ್ತಾ ಶಂಕರಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆ ನಂತರ ಪ್ರಕರಣವನ್ನು ಬಸವನಗುಡಿ ಮಹಿಳಾ ಪೊಲೀಸ್ ಠಾಣೆಗೆ ವರ್ಗಾಯಿಸಲಾಗಿತ್ತು.
Recommended Video
ಕಾನೂನು ಪ್ರಕ್ರಿಯೆಗೆ ಚಾಲನೆ
ಮಗು ಕದ್ದು ಆಟೋದಲ್ಲಿ ಹೋಗುವ ಬಗ್ಗೆ ಸಿಸಿಟಿವಿ ಸಂಗ್ರಹಿಸಿದ್ದ ಪೊಲೀಸರು ರೇಖಾ ಚಿತ್ರ ಬರೆದು ಮಗು ಪತ್ತೆಗೆ ಮುಂದಾಗಿದ್ದರು. ಕೆಲ ದಿನಗಳ ಹಿಂದಷ್ಟೇ ಆರೋಪಿ ವೈದ್ಯೆ ರಶ್ಮಿ ಅವರನ್ನು ಬಂಧಿಸಿ ಮಗುವನ್ನು ಪತ್ತೆ ಮಾಡಿದ್ದರು. ಇದೀಗ ಕಾನೂನು ಪ್ರಕ್ರಿಯೆ ಮುಗಿಸಿ ಮಗುವನ್ನು ಜನ್ಮ ಕೊಟ್ಟ ತಾಯಿಗೆ ಹಸ್ತಾಂತರಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ.