ಚಿಕಿತ್ಸೆ ಸಿಗದೆ ಮಗು ಸಾವು: ಸಿಎಂ ಮನೆ ಎದುರು ತಂದೆ ಪ್ರತಿಭಟನೆ
ಬೆಂಗಳೂರು, ಜುಲೈ 18:ಕೊರೊನಾ ಸೋಂಕು ಹರಡಲು ಆರಂಭವಾದ ದಿನದಿಂದ ಸಾಕಷ್ಟು ಆಸ್ಪತ್ರೆಗಳಲ್ಲಿ ಕೊರೊನಾ ಸೋಂಕಿತರನ್ನು ಬಿಟ್ಟರೆ ಸಾಮಾನ್ಯ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಅಪವಾದ ಕೇಳಿಬರುತ್ತಿದೆ.
Recommended Video
ಹತ್ತಾರು ಆಸ್ಪತ್ರೆಗಳನ್ನು ಸುತ್ತಿದ್ದರೂ ಒಂದು ತಿಂಗಳ ಮಗುವಿಗೆ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದು, ಪೋಷಕರು ಆಸ್ಪತ್ರೆ ಎದುರು ಕಿಡಿಕಾರಿದ್ದಷ್ಟೇ ಅಲ್ಲದೆ ಆಸ್ಪತ್ರೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ.
ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಧವಳಗಿರಿ ನಿವಾಸದ ಮುಂದೆ ಮಗುವಿನ ತಂದೆ ಧರಣಿ ಕುಳಿತು ಪ್ರತಿಭಟನೆ ಮಾಡುತ್ತಿದ್ದರು. ತನಗಾದ ಅನ್ಯಾಯ ಬೇರೆಯವರಿಗೆ ಆಗದಿರಲಿ ಎಂದು ಖಾಸಗಿ ಆಸ್ಪತ್ರೆಗಳ ಮೇಲೆ ಕ್ರಮಕ್ಕೆ ಒತ್ತಾಯಿಸಿ ಪ್ರತಿಭಟನೆ ಮಾಡುತ್ತಿದ್ದರು.
ಜುಲೈ 11 ರಂದು ಬೆಂಗಳೂರಿನ ಮಂಜುನಾಥ ನಗರದ ನಿವಾಸಿಯಾದ ವೆಂಕಟೇಶ್ ನಾಯ್ಡ್ ಅವರ ಒಂದು ತಿಂಗಳ ಮಗುವಿಗೆ ಚಿಕಿತ್ಸೆ ಸಿಗದೆ ಮೃತಪಟ್ಟಿತ್ತು. ಈ ಘಟನೆ ಜುಲೈ 16ರಂದು ತಡವಾಗಿ ಬೆಳಕಿಗೆ ಬಂದಿತ್ತು. ಈ ಘಟನೆಯ ಬಗ್ಗೆ ಡಿಸಿಎಂ ಹಾಗೂ ಸಚಿವರು ಕೂಡ ಬೇಸರ ವ್ಯಕ್ತಪಡಿಸಿದ್ದರು. ಇದೀಗ ಸಿಎಂ ಯಡಿಯೂರಪ್ಪ ಮನೆ ಮುಂದೆ ನ್ಯಾಯ ಕೊಡಿಸಿ ಅಂತ ಮೃತ ಮಗುವಿನ ತಂದೆ ಮಗಳ ಫೋಟೋ ಹಿಡಿದು ಕಣ್ಣೀರು ಹಾಕಿದ್ದರು.
ಧರಣಿಗೆ ಇದು ಸರಿಯಾದ ಸಮಯವಲ್ಲ ಎಂದು ಧರಣಿ ನಿರತ ಮಗುವಿನ ತಂದೆ ವೆಂಕಟೇಶ್ನನ್ನ ಪೊಲೀಸರು ಮನವೊಲಿಸುವ ಪ್ರಯತ್ನ ಮಾಡಿದ್ದರು. ಆದರೆ ವೆಂಗಟೇಶ್ ಪೊಲೀಸರ ಮುಂದೆ ತನ್ನ ಸಂಕಟವನ್ನ ಹೇಳಿಕೊಳ್ಳುತ್ತಿದ್ದರು.
ಇದೀಗ ಸಿಎಂ ಮನೆ ಮುಂದೆ ಧರಣಿ ಮಾಡುತ್ತಿದ್ದ ಮಗುವಿನ ತಂದೆಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನನ್ನ ಮಗು ಸಾವನ್ನಪ್ಪಿ ನಾಲ್ಕು ದಿನ ಕಳೆದಿದೆ, ಆದರೆ ಇದುವರೆಗೂ ಅಧಿಕಾರಿಗಳು ಈ ರೀತಿ ಆಗದಂತೆ ತಡೆಯುತ್ತೇನೆ ಎಂದು ಆಶ್ವಾಸನೆ ಕೊಡುತ್ತಿದ್ದಾರೆ. ಆದರೆ ಮತ್ತೆ ಈ ರೀತಿ ಘಟನೆಗಳು ನಡೆಯುತ್ತಿದೆ.
ನನಗೆ, ನನ್ನ ಮಗುವಿಗೆ ಆದ ಅನ್ಯಾಯ ಬೇರೆ ಯಾರಿಗೂ ಆಗಬಾರದು. ಗಂಟೆಗೆ ಒಬ್ಬೊಬ್ಬರ ಪ್ರಾಣ ಹೋಗುತ್ತಿದೆ. ಇನ್ನೂ ತಡ ಮಾಡಬೇಡಿ ದಯವಿಟ್ಟು ಖಾಸಗಿ ಆಸ್ಪತ್ರೆಗಳಿಗೆ ಆದೇಶ ಹೊರಡಿಸಿ. ನನ್ನ ಪ್ರಾಣ ಬೇಕಿದ್ದರೆ ಹೋಗಲಿ ನಾನು ಉಪವಾಸ ಮಾಡುತ್ತೇನೆ. ಎಷ್ಟು ದಿನ ಬೇಕಾದರೂ ಕಾಯುತ್ತೇನೆ ಎಂದು ಅವರು ಹೇಳಿದ್ದಾರೆ.