ಮಳೆಗಾಲಕ್ಕೆ ವಿಶೇಷ : "ಬಾ ಮಳೆಯೇ ಬಾ" ಸಂಗೀತ ಸಂಜೆ
ಬೆಂಗಳೂರು, ಜೂನ್ 11: "ಅಂತರಾಳ" ವತಿಯಿಂದ ಮಳೆಗಾಲಕ್ಕೆ ವಿಶೇಷ ಕಾರ್ಯಕ್ರಮವಾಗಿ "ಬಾ ಮಳೆಯೇ ಬಾ" ಸಂಗೀತ ಸಂಜೆಯನ್ನು ಇದೆ ಶುಕ್ರವಾರ ಜೂನ್ 14 ರಂದು ಸಂಜೆ 6 ಘಂಟೆಗೆ ನಯನ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದೆ.
ಮಳೆ ಅಂದರೆ ಅದೊಂದು ಸುಗ್ಗಿ, ಸಂಭ್ರಮ ಹಾಗೂ ಹಬ್ಬವೂ ಹೌದು. ಈ ಚಮತ್ಕಾರಿ ಮಳೆ ಭಾವಜೀವಿಯಾದ ಮನುಷ್ಯನಲ್ಲಿ ಸಾಕಷ್ಟು ಭಾವನೆಗಳನ್ನು, ಕಾಮನೆಗಳನ್ನು, ನೆನಪುಗಳನ್ನು, ವಿರಹಗಳನ್ನು ಹಾಗೂ ನೋವುಗಳನ್ನು ಮೂಡಿಸುವುದಲ್ಲದೇ ತನ್ನದೇ ಆದ ಸುಂದರ ಕಲ್ಪನಾ ಪ್ರಪಂಚಕ್ಕೆ ಎಳೆದೊಯ್ಯುವುದು. ಇಂತಹ ಒಂದು ಸುಮಧುರ ಮಳೆಯನ್ನು ಸಂಭ್ರಮಿಸೋದಕ್ಕೆ ಮಳೆಯ ಹಾಡುಗಳನ್ನು ನೆನಪಿಸೋದಕ್ಕೆ ಗುನುಗುನಿಸೋದಕ್ಕೆ ಸಂಗೀತದ ತುಂತುರು ಹನಿಗಳಲ್ಲಿ ನೆನೆಯೋದಕ್ಕೆ ಅಂತರಾಳವು ರಾಮಚಂದ್ರ ಹಡಪದ್ ಸಾರಥ್ಯದಲ್ಲಿ ಸುಂದರ ಗೀತ-ಸಂಜೆ "ಬಾ ಮಳೆಯೇ ಬಾ" ಆಯೋಜಿಸುತ್ತಿದೆ.
ಅಬ್ಬರಿಸಲಿದೆ 'ವಾಯು' ಚಂಡಮಾರುತ, ಕರ್ನಾಟಕದಲ್ಲಿ ಭಾರೀ ಮಳೆ ಸಾಧ್ಯತೆ
ಮಳೆಯ ಹಾಡುಗಳ ಸಂಭ್ರಮಕ್ಕೆ ಎಲ್ಲರಿಗೂ ಮುಕ್ತ ಪ್ರವೇಶವಿದ್ದು ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ. ಕನ್ನಡದ ಭರವಸೆಯ, ನೆಚ್ಚಿನ ಸಂಗೀತಗಾರ, ಸಂಗೀತ ನಿರ್ದೇಶಕ ರಾಮಚಂದ್ರ ಹಡಪದ್ ಅವರು ಈ ಮುಂಚೆ ಕೂಡಾ ಅಂತರಾಳ ಸಂಸ್ಥೆಯ ಸಂಗೀತ ಸರಣಿ ಕಾರ್ಯಕ್ರಮದಲ್ಲಿ ಹಾಡಿದ್ದಾರೆ.
ಸಂಗೀತ ಮತ್ತು ಸಂಗೀತವನ್ನಷ್ಟೇ ಮೂಲ ಆಶಯವನ್ನಾಗಿಸಿಕೊಂಡ ಅಂತರಾಳಕ್ಕೆ ಹೊಸ ತರಹದ ಕಾರ್ಯಕ್ರಮಗಳಿಗೆ ಮುಖ ಮಾಡುವ ಬಯಕೆ. ಅಂತೆಯೇ "ಸಾಹಿತಿ-ಸಾಹಿತ್ಯ-ಸಂಗೀತ"ದ ಆಶಯದೊಂದಿಗೆ ನಡೆಸುತ್ತಿರುವ ಸರಣಿಯ ಮೊದಲನೇಯ ಪ್ರಸ್ತುತಿಯಾಗಿ ಡಾ.ದೊಡ್ಡರಂಗೇಗೌಡರ ಗೀತ ಗಾಯನ ನಡೆಸಲಾಗಿತ್ತು. ಸರಣಿಯ ಎರಡನೇ ಕಾರ್ಯಕ್ರಮ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರ ಗೀತ ಗಾಯನ ಕಾರ್ಯಕ್ರಮ "ಮಧುರೆಗೆ ಹೋದನು ಮಾಧವ" ಕೂಡಾ ಯಶಸ್ವಿಯಾಗಿತ್ತು.