ಬಿಎಸ್ವೈ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣ ರದ್ದು: ರಾಜ್ಯಪಾಲರ ನಡೆ ಬಗ್ಗೆ ಸಂಶಯ
ಬೆಂಗಳೂರು, ಜು. 08: ''ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಕುಟುಂಬ ಸದಸ್ಯರು 12.5 ಕೋಟಿ ರೂ. ಲಂಚ ಪಡೆದ ಆರೋಪ ಸಂಬಂಧ ಸಲ್ಲಿಸಿದ್ದ ಖಾಸಗಿ ದೂರನ್ನು ರದ್ದು ಮಾಡಿದ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರ ನಡೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ವಿಶೇಷ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ಮೊರೆ ಹೋಗುತ್ತೇನೆ,'' ಎಂದು ದೂರುದಾರ ಟಿ.ಜೆ. ಅಬ್ರಹಾಂ ಅವರು ತಿಳಿಸಿದ್ದಾರೆ.
ದೆಹಲಿಯಲ್ಲಿ ಸುದ್ದಿಗೋಷ್ಠಿ ಕರೆದು ಮಾತನಾಡಿದ ಟಿ.ಜೆ. ಅಬ್ರಹಾಂ, ಬಿ.ಎಸ್. ಯಡಿಯೂರಪ್ಪ ಅವರ ಕುಟುಂಬ ಸದಸ್ಯರ ವಿರುದ್ಧ ಸಲ್ಲಿಸಿದ್ದ ಖಾಸಗಿ ದೂರನ್ನು ನ್ಯಾಯಾಲಯ ತನಿಖೆಗೆ ಆದೇಶಿಸಬೇಕಿತ್ತು. ಸಿಎಂ ಪರವಾಗಿ ಉದ್ದೇಶ ಪೂರ್ವಕವಾಗಿ ಆದೇಶ ಮಾಡಿದಂತಾಗಿದೆ. ನಾನು ಈ ಕೇಸನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ಹೈಕೋರ್ಟ್ ,ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇನೆ. ಈ ಕೇಸ್ನಲ್ಲಿ ನ್ಯಾಯಾಧೀಶರು ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘನೆ ಮಾಡಿದ್ದಾರೆ. ಅಭಿಯೋಜನೆಗೆ ಒಳಪಡಿಸಲು ರಾಜ್ಯಪಾಲರು ಮೂರು ತಿಂಗಳ ಒಳಗೆ ನಿರ್ಧಾರ ಪ್ರಕಟಿಸಬೇಕಿತ್ತು. ರಾಜ್ಯಪಾಲರು ಮೂರು ತಿಂಗಳೊಳಗೆ ಪ್ರಕಟಿಸದಿದ್ದರೆ, ಅನುಮತಿ ನೀಡಿದೆ ಎಂದೇ ನ್ಯಾಯಾಲಯ ಪರಿಗಣಿಸಬೇಕು.
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಖಾಸಗಿ ದೂರು ಸಲ್ಲಿಸಲು ಅನುಮತಿ ಕೇಳಿದ್ದು ನಾನು. ಆದರೆ, ನನಗೆ ಯಾವುದೇ ಉತ್ತರ ನೀಡದೇ ಖಾಸಗಿ ದೂರು ವಿಚಾರಣೆ ನಡೆಯುವ ವೇಳೆ ನ್ಯಾಯಾಲಯಕ್ಕೆ ಬಂದು ತಿಳಿಸುತ್ತಾರೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಭಿಯೋಜನೆಗೆ ಒಳಪಡಿಸಲು ಮಂಜೂರಾತಿ ನಿರಾಕರಿಸಲಾಗಿದೆ ಎಂದು ಸ್ಪಷ್ಟಪಡಿಸುತ್ತಾರೆ. ರಾಜ್ಯಪಾಲರ ನಡೆ ಸರಿಯಿಲ್ಲ ಎಂದು ಅಬ್ರಹಾಂ ಕಿಡಿ ಕಾರಿದ್ದಾರೆ.
Recommended Video
ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿದ್ದಾರೆ. ಮುಖ್ಯಮಂತ್ರಿಗಳ ಗನ್ ಮ್ಯಾನ್ ನ್ಯಾಯಾಧೀಶರ ಮನೆ ಮುಂದೆ ಯಾಕೆ ಹೋಗಿದ್ದ ಎಂಬುದು ಸಮಾಜಕ್ಕೆ ಗೊತ್ತಾಗಬೇಕು. ಮುಖ್ಯಮಂತ್ರಿಗಳ ವಿರುದ್ಧದ ದೂರು ವಿಚಾರಣೆ ಬಾಕಿ ಇರುವ ವೇಳೆ ಅವರ ಗನ್ ಮ್ಯಾನ್ ನ್ಯಾಯಾಧೀಶರ ಮನೆ ಮುಂದೆ ಯಾಕೆ ಹೋಗಿದ್ದರು. ಲೊಕೇಷನ್ ಟ್ರೇಸ್ ಮಾಡಿದರೆ ಅಸಲಿ ಬಂಡವಾಳ ಬಯಲಾಗುತ್ತದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.