ಗ್ರಾಹಕರ ಹಿತಾಸಕ್ತಿ ರಕ್ಷಿಸುವಂತೆ ಬಿ-ಪ್ಯಾಕ್ ಮನವಿ
ಬೆಂಗಳೂರು,ಫೆಬ್ರವರಿ 20 : ಬೆಸ್ಕಾಂ ವ್ಯಾಪ್ತಿಯಲ್ಲಿನ ಗ್ರಾಹಕರ ಹಿತಾಸಕ್ತಿ ರಕ್ಷಿಸುವಂತೆ ಬಿ-ಪ್ಯಾಕ್ ಸಂಘಟನೆ ಕೆಇಆರ್ ಸಿ ಗೆ ಮನವಿ ಸಲ್ಲಿಸಿದೆ.
2018-19 ರ ವಿದ್ಯುತ್ ಪರಿಷ್ಕರಣೆ ಹಿನ್ನೆಲೆಯಲ್ಲಿ ಸಂಘಟನೆಯು ಬೆಸ್ಕಾಂ ಪ್ರಸ್ತಾಪಗಳಿಗೆ ತನ್ನ ಆಕ್ಷೇಪಗಳನ್ನು ಸಲ್ಲಿಸಿದೆ. ವಿದ್ಯುತ್ ಬಳಕೆದಾರರಿಗೆ ಹೆಚ್ಚಿನ ಹೊರೆಯಾಗದಂತೆ ಪರಿಷ್ಕರಣೆ ಮಾಡಬೇಕೇ ವಿನಃ ಬೆಸ್ಕಾಂ ಪ್ರಸ್ತಾಪಿಸಿರುವ ಪ್ರತಿ ಯೂನಿಟ್ ದರದಂತೆ 85 ಪೈಸೆಗೆ ಒಪ್ಪಿಗೆ ನೀಡಬಾರದು ಎಂದು ಅಹವಾಲು ದಾಖಲಿಸಿದೆ.
ಬೆಸ್ಕಾಂ ತನ್ನ ವ್ಯಾಪ್ತಿಯಲ್ಲಿ ಕೆಲ ಪ್ರದೇಶಗಳಲ್ಲಿ ಮಾತ್ರ ವಿದ್ಯುತ್ ಉಳಿತಾಯ ಮಾಡುತ್ತಿದೆ. ಉಳಿದೆಡೆ ಸರಬರಾಜಿನಲ್ಲಿ ನಷ್ಟ ಅನುಭವಿಸಿದೆ. ಈ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸದ ಕಾರಣ ಸಂಸ್ಥೆ ನಷ್ಟಕ್ಕೆ ಈಡಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳದೆ ನಷ್ಟದ ಬಾಬ್ತನ್ನು ಗ್ರಾಹಕರಿಗೆ ವರ್ಗಾಯಿಸುವುದು ಸರಿಯಲ್ಲ. ಮಹಾನಗರದಾಚೆಗಿನ ಪ್ರದೇಶಗಳಲ್ಲಿ ಈಗಲೂ ಶೇ.20 ಕ್ಕಿಂತ ಹೆಚ್ಚು ವಿದ್ಯುತ್ ನಷ್ಟವಾಗುತ್ತಿರುವುದಕ್ಕೆ ಸೂಕ್ತ ಕ್ರಮ ಕೈಗೊಂಡಿಲ್ಲ ಎಂಬ ಆಕ್ಷೇಪಣೆಯನ್ನು ಬಿ-ಪ್ಯಾಕ್ ಸಲ್ಲಿಸಿದೆ.