Breaking: ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್.ಶಂಕರ್ 4ನೇ ಬಾರಿ ಆಯ್ಕೆ
ಬೆಂಗಳೂರು ಜೂ. 27: ಕರ್ನಾಟಕ ಚಿತ್ರಕಲಾ ಪರಿಷತ್ತಿನ ಅಧ್ಯಕ್ಷರಾಗಿ ಬಿ.ಎಲ್. ಶಂಕರ್ ಅವರು ನಾಲ್ಕನೆ ಬಾರಿಗೆ ಅಧ್ಯಕ್ಷರಾಗಿ ಭಾನುವಾರ ಚುನಾಯಿತರಾಗಿದ್ದಾರೆ. ಮುಂದಿನ ಮೂರು ವರ್ಷದವರೆಗೆ ಆಡಳಿತ ನಡೆಸಲಿದ್ದಾರೆ.
ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ಪರಿಷತ್ತಿನ ಪದಾಧಿಕಾರಿಗಳು ಮತ್ತು ಕಾರ್ಯಾಕಾರಿ ಸಮಿತಿ ಸದಸ್ಯರ ಆಯ್ಕೆ ಚುನಾವಣೆ ನಡೆಯಿತು. ಈ ವೇಳೆ ಬಿ.ಎಲ್.ಶಂಕರ್ ಅವರು ಒಟ್ಟು 122ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಪ್ರೊ.ಕೆ.ಇ.ರಾಧಾಕೃಷ್ಣ ಕೇವಲ 20 ಮತಗಳನ್ನು ಪಡೆದರು. ಬಹುಮತ ಪಡೆಯುವ ಮೂಲಕ ಬಿ.ಎಲ್.ಶಂಕರ್ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಇನ್ನೂ ಉಪಾಧ್ಯಕ್ಷರಾಗಿ ಪ್ರೊ.ಕೆ.ಅಪ್ಪಾಜಯ್ಯ, ಟಿ.ಪ್ರಭಾಕರ್ ಮತ್ತು ಎ.ರಾಮಕೃಷ್ಣಪ್ಪ ಮತ್ತು ಎಸ್.ಎನ್.ಶಶಿಧರ (ಪ್ರಧಾನ ಕಾರ್ಯದರ್ಶಿ) ಚುನಾಯಿತರಾಗಿದ್ದಾರೆ. ಸಹಾಯಕ ಕಾರ್ಯದರ್ಶಿ ಟಿ.ಚಂದ್ರಶೇಖರ್ ಹಾಗೂ ಬಿ.ಎಲ್.ಶ್ರೀನಿವಾಸ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯಾಕಾರಿ ಸಮಿತಿ ಸದಸ್ಯರಾಗಿ ಟಿ.ವಿ.ತಾರಕೇಶ್ವರಿ, ಆರ್. ಜಿ.ಭಂಡಾರಿ, ಸಿ.ಪಿ.ಉಷಾರಾಣಿ, ಬಿ.ವೈ.ವಿನೋದಾ, ಸುಬ್ರಹ್ಮಣ್ಯ ಕುಕ್ಕೆ ಸೇರಿದಂತೆ ಮತ್ತಿತರರು ಆಯ್ಕೆಯಾಗಿದ್ದಾರೆ.
ಮಾಜಿ ಸಭಾಪತಿ
ಕಾಂಗ್ರೆಸ್ ಮುಖಂಡರು ಆದ ಬಿ.ಎಲ್ ಶಂಕರ್ ಅವರಿಗೆ ಸಭಾಪತಿಯಾಗಿ, ಸಚಿವರಾಗಿ ಕಾರ್ಯ ನಿರ್ವಹಿಸಿದ ಅನುಭವವಿದೆ. ಅಲ್ಲದೇ ಇತ್ತೀಚೆಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಉಪಾಧ್ಯಕ್ಷರೂ ಆಗಿದ್ದಾರೆ. ಅವರು ಪರಿಷತ್ತಿನ ಅಧ್ಯಕ್ಷರಾಗಿ ಮುಂದಿನ ಮೂರು ವರ್ಷದ ತಮ್ಮ ಅವಧಿಯಲ್ಲಿ ಪರಿಷತ್ತು ಕುರಿತು ಹಲವು ಕನಸುಗಳನ್ನು ಹೊಂದಿದ್ದಾರೆ.
Recommended Video
"ಇಲ್ಲಿನ ವಸ್ತು ಸಂಗ್ರಹಾಲಯ ಮೇಲ್ದರ್ಜೆಗೆ ಏರಿಸುವುದು, ಇರುವ ಒಂದೇ ಸಂಜೆ ಕಾಲೇಜನ್ನು ವಿಸ್ತರಿಸಿ ಹೊಸ ಕೋರ್ಸ್ಗಳನ್ನು ಪ್ರಾರಂಭಿಸಲಾಗುವುದು. ದೆಹಲಿ ಮಾದರಿಯಲ್ಲಿ ಬೆಂಗಳೂರಿನ ಪರಿಷತ್ತಿನ ಆವರಣದಲ್ಲಿ ಕಲಾ ಉತ್ಸವ ಹಮ್ಮಿಕೊಳ್ಳುವ ಕನಸು ಹೊಂದಿದ್ದೇನೆ," ಎಂದು ಅವರು ನಾಲ್ಕನೇ ಬಾರಿ ಅಧ್ಯಕ್ಷರಾಗಿ ಆಯ್ಕೆಯಾದ ನಂತರ ಬಿ.ಎಲ್.ಶಂಕರ್ ಪ್ರತಿಕ್ರಿಯಿಸಿದ್ದಾರೆ.