ಸೊಂಟ ನೋವಿಗೆ ಸೀಮೆ ಸುಣ್ಣ ರಾಮಬಾಣ : ಆರು ವಂಚಕರ ಸೆರೆ
ಬೆಂಗಳೂರು, ಫೆಬ್ರವರಿ 16: ವಯೋ ಸಹಜ ಕಾಯಿಲೆಯಿಂದ ಬಳಲುವ ವೃದ್ಧರನ್ನು ಟಾರ್ಗೆಟ್ ಮಾಡಿ ಆಯುರ್ವೇದ ಔಷಧ ಹೆಸರಿನಲ್ಲಿ ಸೀಮೆಸುಣ್ಣ ಮಾರಾಟ ಮಾಡುತ್ತಿದ್ದ ಗ್ಯಾಂಗ್ ನ್ನು ಬೆಂಗಳೂರಿನ ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ.
ನಾನಾ ಕಾಯಿಲೆಯಿಂದ ಬಳಲುತ್ತಿರುವ ಹಿರಿಯ ನಾಗರಿಕರನ್ನು ಗುರುತಿಸುತ್ತಿದ್ದರು. ಮಂಡಿ ನೋವು, ಸೊಂಟನೋವು, ಕೈಕಾಲು ಊತ, ಬಿಪಿ, ಶುಗರ್ ಮತ್ತಿತರ ವಯೋ ಸಹಜ ಕಾಯಿಲೆಗಳಿಗೆ ಔಷಧ ಕೊಡುವ ಸೋಗಿನಲ್ಲಿ ಹಿರಿಯ ನಾಗರಿಕರನ್ನು ಪರಿಚಯ ಮಾಡಿಕೊಳ್ಳುತ್ತಿದ್ದರು. ಕಾಯಿಲೆ ವಾಸಿ ಮಾಡುವುದಾಗಿ ವೃದ್ಧರನ್ನು ನಂಬಿಸುತ್ತಿದ್ದರು. ವಾಸಿಯಾಗದಿದ್ದಲ್ಲಿ ಹಣ ವಾಪಸು ನೀಡುವ ಭರವಸೆ ನೀಡುತ್ತಿದ್ದರು.
ಸಂಜಿತ್, ಮಂಜುನಾಥ್, ಶಿವಲಿಂಗ, ರಮಾಕಾಂತ್, ಕಿಶನ್, ಕಲ್ಲೋಳಪ್ಪ ಬಂಧಿತರು. ರಾಜಾಜಿನಗರದಲ್ಲಿರುವ ಧನ್ವಂತರಿ ಆಯುರ್ವೇಧ ಸೆಂಟರ್ ಹೆಸರು ದುರ್ಬಳಕೆ ಮಾಡಿಕೊಂಡು ಮೋಸ ಮಾಡಿದ್ದಾರೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಹೋಗುವ ವೃದ್ಧರನ್ನು ಪರಿಚಯಿಸಿಕೊಳ್ಳುವ ಈ ವಂಚಕರು, ಒಳ್ಳೆ ಔಷಧಿ ನೀಡುವುದಾಗಿ ನಂಬಿಸಿ ಮೋಸ ಮಾಡುತ್ತಾರೆ. ಅದೇ ರೀತಿ ರವಿ ಬಿ. ಅನುಕರ್ ಅವರನ್ನು ಆಸ್ಪತ್ರೆ ಸಮೀಪ ಪರಿಚಯಿಸಿಕೊಂಡು, ನಿಮಗೆ ಶಾಶ್ವತ ಪರಿಹಾರ ನೀಡವುದಾಗಿ ನಂಬಿಸಿದ್ದಾರೆ. ವಂಚಕರ ಮರಳು ಮಾತು ನಂಬಿ ಅನುಕರ್ ಹಣ ನೀಡಿದ್ದರು.
ವಂಚಕ ಗ್ಯಾಂಗ್ ನ ಕೈಗೆ ಸಿಕ್ಕಿದ್ದ ರವಿ ಬಿ. ಅನುಕರ್ ಎಂಬುವರು ಮಂಡಿ ನೋವಿಗೆ ಔಷಧಿ ಪಡೆದಿದ್ದರು. ಶಾಶ್ವತವಾಗಿ ನೋವು ಶಮನವಾಗುವುದಾಗಿ ಹೇಳಿದ್ದ ವಂಚಕರು ಬರೊಬ್ಬರಿ 2.59 ಲಕ್ಷ ರೂಪಾಯಿಯನ್ನು ವಸೂಲಿ ಮಾಡಿದ್ದರು. ಈ ಔಷಧ ತಿಂಗಳಾನುಗಟ್ಟಲೇ ಪಡೆದರೂ ಯಾವ ಕಾಯಿಲೆಯೂ ವಾಸಿಯಾಗಿರಲಿಲ್ಲ. ಬಳಿಕ ಈ ವಂಚಕರು ನೀಡಿದ್ದ ಔಷಧವನ್ನು ತಜ್ಞರಿಗೆ ಕೊಟ್ಟು ಪರೀಕ್ಷಿಸಿದಾಗ ನೀಲಗಿರಿ ತೈಲಕ್ಕೆ ಸೀಮೆ ಸುಣ್ಣ ಬೆರಿಸಿ ಮಾರಾಟ ಮಾಡಿರುವ ಸಂಗತಿ ಹೊರ ಬಂದಿದೆ.
Recommended Video
ಈ ಕುರಿತು ರವಿ ಬಿ. ಅನುಕರ್ ದೂರು ನೀಡಿದ್ದು ದೂರಿನ ಮೇರೆಗೆ ಆರು ಮಂದಿ ಆರೋಪಿಗಳನ್ನು ತಿಲಕ್ ನಗರ ಪೊಲೀಸರು ಬಂಧಿಸಿದ್ದಾರೆ. ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೇ ನಕಲಿ ಔಷಧಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳ ನೂರಾರು ವೃದ್ಧರಿಗೆ ಮೋಸ ಮಾಡಿರುವ ಸಂಗತಿ ವಿಚಾರಣೆ ವೇಳೆ ಗೊತ್ತಾಗಿದೆ. ಬಂಧಿತ ಆರೋಪಿಗಳಿಂದ ಸೀಮೆ ಸುಣ್ಣ ಔಷಧಿ ಹಾಗೂ ಐದು ಲಕ್ಷ ರೂ. ಹಣವನ್ನು ವಶಪಡಿಸಿಕೊಂಡಿದ್ದಾರೆ.