ಎಬೋಲಾ ರೋಗಕ್ಕೆ ಕರ್ನಾಟಕ ವೈದ್ಯರಿಂದ ಆಯುರ್ವೇದ ಚಿಕಿತ್ಸೆ
ಬೆಂಗಳೂರು, ಜ. 6: ಸ್ವದೇಶೀಯರಿಂದಲೇ ನಿರ್ಲಕ್ಷಿಸಲ್ಪಟ್ಟಿದ್ದರೂ ರೋಗದಿಂದ ಶಾಶ್ವತ ಪರಿಹಾರ ನೀಡಬಲ್ಲ ಆಯುರ್ವೇದ ಚಿಕಿತ್ಸೆಯತ್ತ ಇಡೀ ಜಗತ್ತು ತಿರುಗಿ ನೋಡುತ್ತಿದೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ತನ್ನ ದೇಶದ ಎಬೋಲಾ ಪೀಡಿತರಿಗೆ ಆಯುರ್ವೇದ ಚಿಕಿತ್ಸೆ ನೀಡಬೇಕೆಂದು ಲೈಬೇರಿಯಾ ಸರ್ಕಾರವು ಕರ್ನಾಟಕದ ವೈದ್ಯರನ್ನು ಕೋರಿದೆ.
ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಈ ವಿಷಯವನ್ನು ಮಾಧ್ಯಮಗಳಿಗೆ ದೃಢಪಡಿಸಿದ್ದಾರೆ. ತಿಂಗಳ ಹಿಂದೆ ಈ ಕುರಿತು ಲೈಬೇರಿಯಾ ಸರ್ಕಾರ ಇ ಮೇಲ್ ಕಳುಹಿಸಿತ್ತು. ಆಯುರ್ವೇದ ತಜ್ಞರೊಂದಿಗೆ ಬೆಳಗಾವಿಯಲ್ಲಿ ಚರ್ಚಿಸಿದ್ದೇನೆ. ಅವರು ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ" ಎಂದು ತಿಳಿಸಿದ್ದಾರೆ. [ಎಬೋಲಾ ಹತ್ತಿಕ್ಕಲು ವಿಫಲ]
ರಕ್ತಸ್ರಾವ ತಡೆಯಲು ಪರಿಣಾಮಕಾರಿ : ಆಯುರ್ವೇದ ಪಿತ್ತ ಚಿಕಿತ್ಸೆ ಪದ್ಧತಿಯು (ಪಿತ್ತ ರಸ) ಕೋಶ ಗೋಡೆಗಳು ಒಣಗುವಂತೆ ಮಾಡುತ್ತದೆ. ಆದ್ದರಿಂದ ಇದು ಎಬೋಲಾ ಪೀಡಿತ ವ್ಯಕ್ತಿಯ ರಕ್ತಸ್ರಾವ ತಡೆಯಲು ಪರಿಣಾಮಕಾರಿಯಾಗಿದೆ. ಅಲ್ಲದೆ, ಎಬೋಲಾ ಬಿಡುಗಡೆ ಮಾಡುವ ರೋಗಾಣುಗಳು ದೇಹದಲ್ಲಿ ಹರಡುವುದನ್ನು ನಿಲ್ಲಿಸಬಲ್ಲದು. [ನವದೆಹಲಿಗೆ ಬಂತು ಎಬೋಲಾ]
ಎಬೋಲಾ ರೋಗಕ್ಕೆ ನೀಡಬಹುದಾದ ಔಷಧಗಳ ಕುರಿತು ವಿವಿಧ ಆಯುರ್ವೇದ ಆಸ್ಪತ್ರೆಗಳು ಕರ್ನಾಟಕ ಸರ್ಕಾರಕ್ಕೆ ಅಭಿಪ್ರಾಯ ಕಳುಹಿಸಿಕೊಟ್ಟಿವೆ. ರಾಜೀವ್ ಗಾಂಧಿ ಹೃದ್ರೋಗ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯ ಸರ್ಕಾರವು ವೈದ್ಯರೊಂದಿಗೆ ಈ ಕುರಿತು ಚರ್ಚಿಸಿದೆ.
"ಪ್ರಸ್ತುತ ಎಬೋಲಾ ರೋಗಕ್ಕೆ ಯಾವುದೇ ಚಿಕಿತ್ಸೆ ಇಲ್ಲ. ಸಂಭವನೀಯ ಚಿಕಿತ್ಸಾ ಪದ್ಧತಿಗಳ ಕುರಿತು ಆಯುರ್ವೇದ್ ಆಸ್ಪತ್ರೆ ವೈದ್ಯರೊಂದಿಗೆ ಚರ್ಚಿಸಿದ್ದೇವೆ. ಒಂದು ವೇಳೆ ನಮಗೆ ಎಬೋಲಾ ಪೀಡಿತರೊಬ್ಬರನ್ನು ನೀಡಿದರೆ ಅವರಿಗೆ ಅಲೋಪತಿ ಮತ್ತು ಆಯುರ್ವೇದ ಮಿಶ್ರಿತ ಪದ್ಧತಿಯಲ್ಲಿ ಚಿಕಿತ್ಸೆ ನೀಡುತ್ತೇವೆ ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇವೆ" ಎಂದು ರಾಜೀವಗಾಂಧಿ ಹೃದ್ರೋಗ ಶಿಕ್ಷಣ ಸಂಸ್ಥೆಯ ವೈದ್ಯ ಡಾ. ಶಶಿಧರ ಬಗ್ಗಿ ತಿಳಿಸಿದ್ದಾರೆ. [ಎಬೋಲಾ ತಡೆಗೆ ಒಬಾಮಾ ಸೂತ್ರ]
ಡೆಂಘೆ ಜ್ವರದೊಂದಿಗೆ ಹೋಲಿಕೆ : ಆಯುರ್ವೇದ್ ಆಸ್ಪತ್ರೆಯ ಸಿಇಓ ರಾಜೀವ್ ವಾಸುದೇವನ್ ಮಾತನಾಡಿ, "ಎಬೋಲಾ ರೋಗದ ಗುಣಲಕ್ಷಣವು ಡೆಂಘೆ ಜ್ವರದ ಗುಣಲಕ್ಷಣಕ್ಕೆ ಹೋಲುತ್ತಿದೆ. ಡೆಂಘೆ ಜ್ವರವನ್ನು ಭಾರತ ಪರಿಣಾಮಕಾರಿಯಾಗಿ ಎದುರಿಸುತ್ತಿದೆ. ಆದ್ದರಿಂದ ನಾವು ಎಬೋಲಾ ವೈರಸ್ಗೆ ಪ್ರತಿಕೂಲ ವಾತಾವರಣ ಸೃಷ್ಟಿಸಬೇಕಾಗಿದೆ" ಎಂದು ತಿಳಿಸಿದ್ದಾರೆ.
ಆಯುರ್ವೇದ ಪದ್ಧತಿಯಲ್ಲಿ ವಿವಿಧ ಪ್ರಕಾರದ ಚಿಕಿತ್ಸೆ ನೀಡಲಾಗುತ್ತದೆ. ಪಥ್ಯ, ಜೀವನಪದ್ಧತಿ, ಔಷಧಿಗಳು ಮತ್ತು ರೋಗದ ವಿವಿಧ ಹಂತಗಳಿಗೆ ವಿವಿಧ ರೀತಿಯ ಚಿಕಿತ್ಸೆಗಳು ಆಯುರ್ವೇದದ ಪ್ರಮುಖ ಪ್ರಕಾರಗಳು. [10 ಸಾವಿರ ಜನರಿಗೆ ಅಂಟಿದೆ ಎಬೋಲಾ]
ಒಗರು ಔಷಧಿ ಚಿಕಿತ್ಸೆ : ಒಗರು ಆಹಾರದಿಂದ ತಯಾರಿಸಿದ ವಸ್ತುಗಳು ಮಧ್ಯಮ ಹಂತದಲ್ಲಿರುವ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡಬಲ್ಲವು. ಅಂಜೂರದ ಹಣ್ಣು, ಬಿಳಿ ಮೆಣಸಿನಕಾಯಿ, ಕುಂಬಳಕಾಯಿ, ನೇರಳೆ ಹಣ್ಣು, ಆಕ್ರೋಡು, ಒಣ ಮಾವಿನ ಬೀಜ, ಹಸಿರು ಎಲೆಗಳ ತರಕಾರಿ, ಬಿದಿರಿನ ಚಿಗುರು, ಕಮಲ ಹೂವಿನ ಕಾಂಡ ಮುಂತಾದವುಗಳಲ್ಲಿ ಲಭ್ಯವಿದೆ. ಇವನ್ನು ದ್ರವರೂಪಕ್ಕೆ ಪರಿವರ್ತಿಸಿ ರೋಗಿಗೆ ನೀಡಬಹುದೆಂದು ಅನೇಕ ಆಯುರ್ವೇದ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.