ಕರ್ನಾಟಕಕ್ಕೆ ಆಯುಧ ಪೂಜೆಯ ಹಸಿರು ತೋರಣ
ಬೆಂಗಳೂರು, ಅ.13 : ನವರಾತ್ರಿಯ ಒಂಭತ್ತನೇ ದಿನ ಮಹಾನವಮಿಯಂದು ಕರ್ನಾಟಕದ ತುಂಬಾ ಆಯುಧ ಪೂಜೆ ಸಡಗರ. ಜನರು ತಮ್ಮ ವಾಹನಗಳನ್ನು ತೊಳೆದು ಸಿಂಗಾರಗೊಳಿಸಿ, ಪೂಜೆ ಸಲ್ಲಿಸುತ್ತಿದ್ದಾರೆ. ಮೈಸೂರಿನಲ್ಲೂ ರಾಜರು ಬಳಸುತ್ತಿದ್ದ ಆಯುಧಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕರ್ನಾಟಕ ಆಯುಧ ಪೂಜೆ ಸಡಗರದಲ್ಲಿ ಮುಳುಗಿದೆ.
ಶನಿವಾರದಿಂದಲೇ ಜನರು ಮಾರುಕಟ್ಟೆಗಳಿಗೆ ತೆರಳಿ ಹಬ್ಬಕ್ಕೆ ಅಗತ್ಯವಾದ ಹೂವು, ಬಾಳೆಕಂದು, ಹಣ್ಣು, ಕಾರ-ಮಂಡಕ್ಕಿ, ಬೂದಕುಂಬಳಕಾಯಿ, ನಿಂಬೆಹಣ್ಣು, ಸಿಹಿ ತಿಂಡಿಗಳನ್ನು ಖರೀದಿಸಿ ತಂದಿದ್ದರು. ಭಾನುವಾರ ಬೆಳಗ್ಗೆಯಿಂದಲೇ ಸಂಭ್ರಮದಿಂದ ಆಯುಧ ಪೂಜೆಯಲ್ಲಿ ತೊಡಗಿದ್ದಾರೆ.
ಬೆಂಗಳೂರಿನ ರಸ್ತೆಗಳಲ್ಲಿ ಭಾನುವಾರ ಆಯುಧಪೂಜೆಯಿಂದ ಅಲಂಕೃತಗೊಂಡ ವಾಹನಗಳೇ ಕಾಣುತ್ತಿವೆ. ಬಿಎಂಟಿಸಿ ಬಸ್ ಗಳಿಗೂ ಪೂಜೆ ಸಲ್ಲಿಸಲಾಗಿದ್ದು, ಅಲಂಕಾರಗೊಂಡ ಬಸ್ ಗಳು ರಸ್ತೆಗಿಳಿದು ಪ್ರಯಾಣಿಕರನ್ನು ತಲುಪಿಸುವ ಕಾರ್ಯದಲ್ಲಿ ತೊಡಗಿವೆ.
ಮೈಸೂರಿನಲ್ಲೂ ಆಯುಧ ಪೂಜೆಯ ಸಂಭ್ರಮ ಜೋರಾಗಿದೆ. ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ರಾಜರು ಬಳಸುತ್ತಿದ್ದ ಆಯುಧಗಳಿಗೆ ಪೂಜೆ ಸಲ್ಲಿಸಿದರು. ಜನರು ತಾವು ವರ್ಷಪೂರ್ತಿ ಬಳಸುವ ವಾಹನಗಳಿಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.
ಆಯುಧ ಪೂಜೆಗೆ ಬಳಸುವ ಬೂದು ಕುಂಬಳಕಾಯಿ, ಸೇವಂತಿಗೆ ಹೂವು, ಚೆಂಡುಮಲ್ಲಿಗೆ, ನಿಂಬೆ ಹಣ್ಣು, ಬಾಳೆಕಂದುಗಳ ಬೆಲೆ ಗಗನಕ್ಕೇರಿದೆ. ಬೂದುಕುಂಬಳಕಾಯಿ ಒಂದಕ್ಕೆ ಗಾತ್ರಕ್ಕೆ ಅನುಗುಣವಾಗಿ 60 ರೂ.ಗಳಿಂದ 150 ರೂ.ವರೆಗೂ ಮಾರಾಟ ವಾಗುತ್ತಿದೆ.
ಭಾನುವಾರ ನವರಾತ್ರಿಯ ಒಂಭತ್ತನೇ ದಿನವಾಗಿದ್ದು, ಸೋಮವಾರ ನವರಾತ್ರಿ ಆಚರಣೆ ನಡೆಯಲಿದೆ. ಮೈಸೂರಿನಲ್ಲಿ ವಿಶ್ವಪ್ರಸಿದ್ಧವಾದ ಜಂಬೂ ಸವಾರಿ ನಡೆಯಲಿದ್ದು, ಲಕ್ಷಾಂತರ ಪ್ರವಾಸಿಗರು ಭಾಗವಹಿಸಲಿದ್ದಾರೆ. ಈ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ಅಧಿಕೃತ ತೆರೆ ಬೀಳಲಿದೆ.