ವಿಶ್ವ ತಂಬಾಕು ರಹಿತ ದಿನ: ತಂಬಾಕು ಬಿಡಿ ಆರೋಗ್ಯದತ್ತ ಗಮನ ನೀಡಿ
ಬೆಂಗಳೂರು, ಮೇ 29: ವಿಶ್ವತಂಬಾಕು ರಹಿತ ದಿನದ ಅಂಗವಾಗಿ ತಂಬಾಕು ಬಳಕೆ ನಿಯಂತ್ರಣ ಕಾನೂನುಗಳನ್ನು ಜಾರಿಗೊಳಿಸಲು ಕಠಿಣ ಕ್ರಮಗಳು ಮತ್ತು ಸಾಮಾನ್ಯ ಜನತೆಯಲ್ಲಿ ತಂಬಾಕು ಬಳಕೆ ದುಷ್ಪರಿಣಾಮಗಳ ಕುರಿತು ತೀವ್ರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ.
ರಾಜ್ಯ ತಂಬಾಕು ನಿಯಂತ್ರಣ ಕೋಶ ಹಾಗೂ ತಂಬಾಕು ಮುಕ್ತ ಕರ್ನಾಟಕ ಒಕ್ಕೂಟ - ತಂಬಾಕು ಬಳಕೆ ನಿಯಂತ್ರಣಕ್ಕಾಗಿ ಕೈ ಜೋಡಿಸಿರುವ ಆರೋಗ್ಯ ತಜ್ಞರು ಮತ್ತು ಇನ್ನಿತರ ನಾಗರಿಕರ, ಸಂಸ್ಥೆಗಳ ಸಮೂಹ ಸಭೆ ನಡೆಸಿ ಕೆಲವು ಜಾಗೃತಿ ಕಾರ್ಯಕ್ರಮಗಳ ಕುರಿತು ಚರ್ಚಿಸಿದೆ. ವಿಶ್ವ ತಂಬಾಕು ವಿರೋಧಿ ದಿನದ ಘೋಷವಾಕ್ಯ "ತಂಬಾಕು ಬಳಕೆ ಹೃದಯಕ್ಕೆ ಹಾನಿ ಎಂದಾಗಿದ್ದು, ತಂಬಾಕು ಬಳಕೆ ಹೃದಯದ ಮೇಲೆ ಬೀರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸಲಿದೆ.
ತಂಬಾಕು ಬದುಕು ತಂಬಿಸುವ ಮುನ್ನ ಜಾಗೃತರಾಗಿ...
ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ(ಮೆಡಿಕಲ್) ಉಪನಿರ್ದೇಶಕರಾದ ಡಾ. ಸೆಲ್ವರಾಜ್ ಅವರು, ಜಾಗತಿಕ ವಯಸ್ಕ ತಂಬಾಕು ಬಳಕೆ ಸಮೀಕ್ಷೆ-2 (ಗ್ಲೋಬಲ್ ಅಡಲ್ಟ್ ಟೋಬಾಕೋ ಸರ್ವೆ - ಗ್ಯಾಟ್ಸ್-2) ರ ಪ್ರಕಾರ ರಾಜ್ಯದಲ್ಲಿ ತಂಬಾಕು ಬಳಕೆ ಗ್ಯಾಟ್ಸ್ - 1 ಕ್ಕೆ ಹೋಲಿಸಿದಲ್ಲಿ ಶೇಕಡಾ 5.4 ರಷ್ಟು (ಶೇಕಡಾ 28.2 ರಿಂದ ಶೇಕಡಾ 22.8 ಕ್ಕೆ) ಇಳಿಕೆಯಾಗಿದೆ.
ಇದರಿಂದ ನಾವು ಸರಿಯಾದ ದಿಶೆಯಲ್ಲಿ ಕಾರ್ಯಪ್ರವೃತ್ತರಾಗಿದ್ದೇವೆಂದು ಮತ್ತು ಸಕಾರಾತ್ಮಕ ಫಲಿತಾಂಶಗಳನ್ನು ಪಡೆಯುತ್ತಿದ್ದೇವೆಂದು ತಿಳಿಯುತ್ತದೆ. ನಾವು ಇದುವರೆಗೂ ಸಾಧಿಸಿರುವಪ್ರಗತಿಯುತೃಪ್ತಿದಾಯಕವಾಗಿದ್ದು, ಈ ದಿಸೆಯಲ್ಲಿ ಇನ್ನೂ ಹೆಚ್ಚು ಶ್ರಮವಹಿಸಿ, ತಂಬಾಕು ಬಳಕೆ ನಿಯಂತ್ರಣ ಕಾಯ್ದೆಯ ಕಠಿಣ ಜಾರಿಗೆ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹೇಳಿದರು.
ತಂಬಾಕು ನಿಷೇಧ ದಿನ: ಕಿದ್ವಾಯಿ ಆಸ್ಪತ್ರೆಯಲ್ಲಿ ಜಾದೂ ಪ್ರದರ್ಶನ
ಈ ವರ್ಷ ಹಲವಾರು ಹೃದಯರೋಗ ತಜ್ಞರು ಮತ್ತು ಆರೋಗ್ಯ ಸಂಸ್ಥೆಗಳ ಸಹಯೋಗದೊಂದಿಗೆ ಮೇ 31 ರಂದು ವಾಕಥಾನ್ ಆಯೋಜಿಸಿದ್ದೇವೆ. ತಂಬಾಕು ಬಳಕೆಯಿಂದ ಆರೋಗ್ಯದ ಮೇಲಾಗುವ, ವಿಶೇಷವಾಗಿ ಹೃದಯದ ಮೇಲಾಗುವ ದುಷ್ಪರಿಣಾಮಗಳ ಕುರಿತು ಜಾಗೃತಿ ಮೂಡಿಸುವುದು ಈ ವಾಕಥಾನ್ ನ ಪ್ರಮುಖ ಉದ್ದೇಶ. ರಾಜ್ಯ ತಂಬಾಕು ನಿಯಂತ್ರಣ ಕೋಶದೊಂದಿಗೆ ಸಹಯೋಗ ಹೊಂದಿರುವ ಆರೋಗ್ಯ ತಜ್ಞರು ಮತ್ತು ಸಂಸ್ಥೆಗಳು ಈ ವಾಕಥಾನ್ ನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವರೆಂದು ನಿರೀಕ್ಷಿಸಲಾಗಿದೆ ಎಂದರು.
ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕಾಗಿ ಕರ್ನಾಟಕ ಸರ್ಕಾರ ಸ್ಥಾಪಿಸಿರುವ ಕೋಶದ ಸದಸ್ಯರಾಗಿರುವ ಡಾ. ಬಿ.ಎಸ್. ತ್ರಿವೇಣಿ ಅವರು ಹೇಳುವಂತೆ: "ತಂಬಾಕು ಮತ್ತು ತಂಬಾಕು ಉತ್ಪನ್ನಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸುವ ಸಲುವಾಗಿ ಮತ್ತು ತಂಬಾಕು ವ್ಯಸನಕ್ಕೆ ಒಳಗಾಗಿರುವವರು ಅದರಿಂದ ಹೊರಬರಲು ಸಹಾಯ ಮಾಡಲು ಉದ್ದೇಶದಿಂದ ವಿಶ್ವ ಆರೋಗ್ಯ ದಿನವನ್ನು ಪ್ರತಿವರ್ಷ ಆಚರಿಸಲಾಗುತ್ತದೆ.
ದುರದೃಷ್ಟವಶಾತ್, ಹೃದಯದ ಬೇನೆಗಳಿಗೆ ಎರಡನೇ ಪ್ರಮುಖ ಕಾರಣವಾದ ತಂಬಾಕು ಬಳಕೆ ವಿರುದ್ಧ ಸಾರ್ವಜನಿಕ ಜಾಗೃತಿ ಬಹಳ ಕಡಿಮೆಯಿದ್ದು, ತಂಬಾಕನ್ನು ನೇರವಾಗಿ ಮತ್ತು ಪರೋಕ್ಷವಾಗಿ ಸೇವಿಸುವುದರಿಂದ ಉಂಟಾಗುವ ದುಷ್ಪರಿಣಾಮಗಳನ್ನು ನಿಯಂತ್ರಿಸಲು ಸರ್ಕಾರ ಸ್ಪಷ್ಟ ಮತ್ತು ಕಠಿಣ ನೀತಿಯನ್ನು ರೂಪಿಸಬೇಕಾಗಿದೆ.
ಕರ್ನಾಟಕ ಸರ್ಕಾರ ಸಾಂಕ್ರಾಮಿಕವಲ್ಲದ ರೋಗಗಳ ನಿಯಂತ್ರಣಕ್ಕೆ ಟಾಸ್ಕ್ ಫೋರ್ಸ್ ಸ್ಥಾಪಿಸಿದ್ದು, ಹೃದಯಬೇನೆ ಈ ರೋಗಗಳಲ್ಲೊಂದಾಗಿದೆ. ಪ್ರಥಮವಾಗಿ ಬೆಂಗಳೂರನ್ನು ಧೂಮಪಾನ-ರಹಿತವನ್ನಾಗಿ ಮಾಡಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.