ಅವಿರತದಿಂದ ನಕ್ಕುನಗಿಸುವ ಶ್ರೀಕೃಷ್ಣ ಸಂಧಾನ ನಾಟಕ
ಭಾಷಾಶುದ್ಧಿ ಇಲ್ಲದಿದ್ದರೆ, 'ಅ'ಕಾರ 'ಹ'ಕಾರದ ವ್ಯತ್ಯಾಸ ಗೊತ್ತಿಲ್ಲದಿದ್ದರೆ, ಪೌರಾಣಿಕ ನಾಟಕ ಹೇಗೆ ಆಭಾಸವಾಗುತ್ತದೆ ಎಂದು ತೋರಿಸುವ ಅಪ್ಪಟ ಹಾಸ್ಯ ಕನ್ನಡ ನಾಟಕ 'ಶ್ರೀಕೃಷ್ಣ ಸಂಧಾನ'. ನಾಟಕಕಾರ ವಿಎನ್ ಅಶ್ವತ್ಥ್ ಅವರು ರಚಿಸಿರುವ ಈ ನಾಟಕ ದಶಕಗಳ ಹಿಂದೆ ದೂರದರ್ಶನದಲ್ಲಿ ಪ್ರಸಾರವಾಗಿದ್ದಾಗ ವೀಕ್ಷಕರನ್ನು ಎದ್ದುಬಿದ್ದು ನಗುವಂತೆ ಮಾಡಿತ್ತು.
ಈಗ ಇದೇ ಹಾಸ್ಯ ನಾಟಕವನ್ನು, ವರ್ಷದುದ್ದಕ್ಕೂ ನಾನಾ ಬಗೆಯ ಕಾರ್ಯಕ್ರಮಗಳ ಮೂಲಕ ಕನ್ನಡದ ವಾತಾವರಣವನ್ನು ಹಸಿರಾಗಿಡಲು ಬದ್ಧರಾದ 'ಅವಿರತ' ಸಂಸ್ಥೆಯ ಕಟ್ಟಾಳುಗಳು, ತಾವೇ ಬಣ್ಣ ಹಚ್ಚಿಕೊಂಡು ನೋಡುಗರನ್ನು ನಗೆಗಡಲಲ್ಲಿ ತೇಲಾಡಿಸಲು ಸಿದ್ಧರಾಗಿದ್ದಾರೆ.
ಈ ಪ್ರದರ್ಶನದ ವಿಶೇಷತೆಯೆಂದರೆ, ಈ ನಾಟಕದಲ್ಲಿ ನಟಿಸುತ್ತಿರುವ ಬಹುತೇಕ ಮಂದಿ ಐಟಿಬಿಟಿನಲ್ಲಿ ಕೆಲಸ ಮಾಡುತ್ತಿರುವುದು. ಬಹುಶಃ ನಾಟಕದ ತಾಲೀಮನ್ನು ಟೆಲಿಫೋನ್ ಕಾನ್ಫೆರೆನ್ಸ್ ಮೂಲಕ ಮಾಡಿದ ಮೊದಲ ನಾಟಕ ಇದೇ ಇರಬೇಕು ಎಂಬ ಅನುಮಾನವಿದೆ. ಈ ನಾಟಕದಿಂದ ಬಂದ ಹಣವನ್ನು ಸರ್ಕಾರಿ ಶಾಲಾ ಮಕ್ಕಳಿಗಾಗಿ ಉಪಯೋಗಿಸುತ್ತಿರುವುದು ಮತ್ತೊಂದು ವಿಶೇಷ. [ತಬ್ಲಾ ನಾಣಿ ಬದುಕಿಗೆ ತಿರುವು ನೀಡಿದ ನಾಟಕ ಶ್ರೀಕೃಷ್ಣ ಸಂಧಾನ]
ಬೆಂಗಳೂರಿನ ಬಸವೇಶ್ವರನಗರದ ಕರ್ನಾಟಕ ಎಂಜಿನಿಯರ್ಸ್ ಅಕಾಡೆಮಿಯ ಪ್ರಭಾತ್ ರಂಗಮಂದಿರದಲ್ಲಿ, 2016ರ ಫೆಬ್ರವರಿ 21, ಭಾನುವಾರ ಸಂಜೆ 5ಕ್ಕೆ ಈ ನಾಟಕ ಪ್ರದರ್ಶನ ಕಾಣಲಿದೆ. ಈ ನಾಟಕದ ತಿರುಳನ್ನು ಬಲ್ಲ ಪ್ರೇಕ್ಷಕರು ಟಿಕೇಟುಗಳನ್ನು ಮುಗಿಬಿದ್ದು ಕೊಂಡಿದ್ದಾರೆ. 200 ರು.ಗಳ ಎಲ್ಲ ಟಿಕೇಟ್ ಗಳು ಸೋಲ್ಡ್ ಔಟ್! ಟಿಕೇಟ್ ಸಿಗದವರು ಮತ್ತೊಂದು ಪ್ರದರ್ಶನಕ್ಕೆ ಕಾಯಬೇಕು.
ಅವಿರತ ಕುರಿತು : 'ಅವಿರತ' ತಂಡವು ತಾಯ್ನಾಡು ಹಾಗೂ ಮಾನವೀಯತೆಗಾಗಿ ಸತತವಾಗಿ ದುಡಿಯುವ ಅದಮ್ಯ ಉತ್ಸಾಹದ ಯುವಪಡೆ ಮತ್ತು ಸಾಮಾಜಿಕ ಕಳಕಳಿಯುಳ್ಳ ಉತ್ಸಾಹಿಗಳ ತಂಡ. 'ಅವಿರತ'ದಿಂದ ಹಲವಾರು ನಾಟಕ, ಕಲಾತ್ಮಕ ಚಿತ್ರಗಳ ವಿಶೇಷ ಪ್ರದರ್ಶನ, ಸಂಗೀತ ಸಂಜೆ ಹೀಗೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜಿಸಲಾಗಿದೆ.