ಎವಿ ಆಸ್ಪತ್ರೆ ಲಸಿಕೆ ಕರ್ಮಕಾಂಡ ಬಯಲಿಗೆ ಎಳೆದ ವೆಂಕಟೇಶ್ಗೆ ಕಿರುಕುಳ!
ಬೆಂಗಳೂರು, ಜೂ. 04: ಎ.ವಿ. ಮಲ್ಟಿಸ್ಪೆಷಾಲಿಟಿ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಮಾರಾಟ, ಕಮೀಷನ್ ದಂಧೆ ಪ್ರಕರಣವನ್ನು ಬಯಲಿಗೆ ಎಳೆದ ಸಾಮಾಜಿಕ ಕಾರ್ಯಕರ್ತ ಎಚ್. ಎಂ. ವೆಂಕಟೇಶ್ ಗೆ ಗಿರಿನಗರ ಪೊಲೀಸರು ವಿನಾಕಾರಣ ಕಿರುಕುಳ ನೀಡುತ್ತಿರುವ ಗಂಭೀರ ಆರೋಪ ಕೇಳಿ ಬಂದಿದೆ. ಈ ಕುರಿತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ವೆಂಕಟೇಶ್ ನೀಡಿರುವ ದೂರಿನಲ್ಲಿ ಉಲ್ಲೇಖವಾಗಿದೆ.
ಹೊಸಕೆರೆಹಳ್ಳಿಯಲ್ಲಿರುವ ಎ.ವಿ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕೆ ಲಭ್ಯತೆ, ಕಮೀಷನ್ ದಂಧೆ ಕುರಿತು ಆಸ್ಪತ್ರೆ ಸಿಬ್ಬಂದಿ ಮಾತನಾಡಿದ್ದ ಅಡಿಯೋ ತುಣುಕು ಮಾಧ್ಯಮಗಳಲ್ಲಿ ಭಾರೀ ಚರ್ಚೆಗೆ ನಾಂದಿ ಹಾಡಿತ್ತು. ಬಿಬಿವತಿಯಿಂದ ಲಸಿಕೆ ಪಡೆದುಕೊಂಡಿದ್ದು, ಶಾಸಕ ರವಿಸುಬ್ರಮಣ್ಯ ಅವರಿಗೆ ಕಮೀಷನ್ ನೀಡುತ್ತೇವೆ ಎಂದು ಎವಿ ಆಸ್ಪತ್ರೆಯ ಸಿಬ್ಬಂದಿ ಆಡಿದ್ದ ಮಾತು ಭಾರೀ ಸಂಚಲನ ಮೂಡಿಸಿತ್ತು.ಇದ ಮಾಧ್ಯಮಗಲ್ಲಿ ವರದಿಯಾಗುತ್ತಿದ್ದಂತೆ ಖಾಸಗಿ ಆಸ್ಪತ್ರೆಯ ಕೊರೊನಾ ಲಸಿಕೆ ಕಮೀಷನ್ ದಂಧೆ ಕುರಿತು ತನಿಖೆ ನಡೆಸುವಂತೆ ಕೋರಿ ಗಿರಿನಗರ ಪೊಲೀಸರಿಗೆ ಮೇ. 29 ರಂದು ದೂರು ನೀಡಿದ್ದರು. ಅಲ್ಲದೇ ಪೊಲೀಸ್ ಆಯುಕ್ತರಿಗೆ, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ದೂರನ್ನು ರವಾನಿಸಿದ್ದರು.
ವೆಂಕಟೇಶ್ ನೀಡಿರುವ ದೂರಿನ ಸಂಬಂಧ ಗಿರಿನಗರ ಪೊಲೀಸರು ಈವರೆಗೂ ಯಾವುದೇ ಕ್ರಮ ಜರುಗಿಸಿಲ್ಲ. ಆದರೆ, ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಅವರು ನೀಡಿರುವ ದೂರನ್ನು ಮುಂದಿಟ್ಟುಕೊಂಡು ಪೊಲೀಸ್ ನೋಟಿಸ್ ನೀಡುವ ಮೂಲಕ ವೆಂಕಟೇಶ್ ಅವರಿಗೆ ವಿನಾಕಾರಣ ಕಿರುಕುಳ ನೀಡುತ್ತಿದ್ದಾರೆ. ಪ್ರಭಾವಕ್ಕೆ ಮಣಿದು ಪೊಲೀಸರು ಹಿರಿಯ ನಾಗರಿಕನಾದ ನನಗೆ ಕಿರುಕುಳ ನೀಡುತ್ತಿದ್ದಾರೆ. ಕೊರೊನಾ ಲಾಕ್ ಡೌನ್ ನಿಯಮದಲ್ಲಿ ಠಾಣೆಗೆ ಬರುವುದಿಲ್ಲ ಎಂದರೂ ಖಾಸಗಿ ವಾಹನದಲ್ಲಿ ಪೊಲೀಸರನ್ನು ಮನೆ ಸಮೀಪ ಕಳಿಸುತ್ತಿದ್ದಾರೆ. ನಿಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದಲ್ಲಿ ವಿಚಾರಣೆಗೆ ಬನ್ನಿ ಎಂದು ಪದೇ ಪದೇ ಕರೆದು ವಿಚಾಣೆ ನೆಪದಲ್ಲಿ ಹಿಂಸೆ ನೀಡುತ್ತಿದ್ದಾರೆ ಎಂದು ವೆಂಕಟೇಶ್ ಒನ್ ಇಂಡಿಯಾ ಕನ್ನಡಕ್ಕೆ ಸ್ಪಷ್ಟ ಪಡಿಸಿದ್ದಾರೆ.
ಕೊರೊನಾ ಸೋಂಕು
ಕೊರೊನಾ ಸೋಂಕು ಕುರಿತು ಸರ್ಕಾರ, ವ್ಯವಸ್ಥೆಯ ಲೋಪಗಳನ್ನು ಬಹಿರಂಗ ಪಡಿಸುವ ಮಾಧ್ಯಮ ಹಾಗೂ ಸಮಾಜಿಕ ಜಾಲ ತಾಣಗಳ ಮೇಲೆ ಸುಖಾ ಸುಮ್ಮನೆ ಕ್ರಮ ಜರುಗಿಸುಂತಿಲ್ಲ. ಬದಲಿಗೆ ಅವನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಪಡಿಸಬೇಕು. ತಪ್ಪಿದರೆ ನ್ಯಾಯಾಂಗ ನಿಂದನೆ ಪ್ರಕರಣ ಎದುರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಇದರ ಬಗ್ಗೆ ಅರಿವು ಇದ್ದರೂ ಹಿರಿಯ ನಾಗರಿಕನಾಗಿರುವ ವೆಂಕಟೇಶ್ ಅವರಿಗೆ ವಿಚಾರಣೆ ನೆಪದಲ್ಲಿ ಗಿರಿನಗರ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗಿದೆ.
ಲಸಿಕೆಯನ್ನು ಹೆಚ್ಚಿನ ಬೆಲೆಗೆ ಮಾರಾಟ
ನಾನು ಕೊಟ್ಟಿರುವ ದೂರಿನಲ್ಲಿ ಆರೋಪಿಗಳು ಯಾರಿದ್ದಾರೆ. ಲಸಿಕೆಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವ ಹಿನ್ನೆಲೆ ಕುರಿತು ತನಿಖೆ ನಡೆಸಬೇಕು. ಯಾರ ಪ್ರಭಾವಕ್ಕೆ ಒಳಗಾಗಿದ್ದಾರೋ ಗೊತ್ತಿಲ್ಲ. ಗಿರಿನಗರ ಪೊಲೀಸರು ನನ್ನ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಮಾತ್ರವಲ್ಲ ವಿಚಾರಣೆ ಹೆಸರಿನಲ್ಲಿ ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ನಾನ ಯಾರ ವಿರುದ್ಧವೂ ಟಾರ್ಗೆಟ್ ಮಾಡಿಲ್ಲ. ಕೊರೊನಾ ಲಸಿಕೆಯಲ್ಲಿ ಆಗುತ್ತಿರುವ ಅನ್ಯಾಯನ್ನು ಸರಿಪಡಿಸಲಿ ಎಂದು ದೂರು ನೀಡಿದ್ದೇನೆ. ಅದನ್ನು ತನಿಖೆ ಮಾಡುವುದು ಬಿಟ್ಟು, ನನ್ನ ವಿರುದ್ಧ ಮಸಲತ್ತು ಮಾಡುತ್ತಿರುವುದು ಎಷ್ಟು ಸರಿ ಎಂದು ವೆಂಕಟೇಶ್ ಪ್ರಶ್ನೆ ಮಾಡಿದ್ದಾರೆ.
ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಿ
ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ನಾನು ನೀಡಿರುವ ದೂರಿನ ಸಂಬಂಧ ಎಫ್ಐಆರ್ ದಾಖಲಿಸಿ ತನಿಖೆ ನಡೆಸಲಿ. ಬಿಬಿಎಂಪಿಯ ಯಾವ ಸಿಬ್ಬಂದಿಗೆ ಕಮೀಷನ್ ಕೊಟ್ಟು ಲಸಿಕೆ ತಂದಿದ್ದಾರೆ ಎಂಬುದನ್ನು ಪೊಲೀಸರು ಹೊರಗೆ ತರಬೇಕು. ಇದರಲ್ಲಿ ಉಲ್ಲೇಖವಾಗಿರುವ ಶಾಸಕ ರವಿಸುಬ್ರಮಣ್ಯ ಪಾತ್ರದ ಬಗ್ಗೆಯೂ ತನಿಖೆಯಾಗಲಿ. ಅದನ್ನು ಸರ್ಕಾರದ ಅವ್ಯವಸ್ಥೆಯನ್ನು ಪ್ರಶ್ನಿಸಿದ ಮಾತ್ರಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ಈ ಮೂಲಕ ಕಿರುಕುಳ ನೀಡುತ್ತಿದ್ದು, ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಹಾಗೂ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದೇನೆ. ಇಷ್ಟಾಗಿಯೂ ನನಗೆ ವಿಚಾರಣೆ ನೆಪದಲ್ಲಿ ಕಿರಕುಳ ನೀಡಿದರೆ, ನ್ಯಾಯಾಂಗ ನಿಂದನೆ ಅರ್ಜಿ ಸಲ್ಲಿಸುತ್ತೇನೆ ಎಂದು ವೆಂಕಟೇಶ್ ತಿಳಿಸಿದ್ದಾರೆ.
ಎವಿ ಆಸ್ಪತ್ರೆ ಲಸಿಕೆ ಕರ್ಮಕಾಂಡ ಬಯಲಿಗೆ ಎಳೆದ ವೆಂಕಟೇಶ್ಗೆ ಕಿರುಕುಳ!
ಇನ್ನು ಗಿರಿನಗರ ಪೊಲೀಸರು ಮಾತ್ರವಲ್ಲದೇ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆ ಪೊಲೀಸರು ಕೂಡ ವಿಚಾರಣೆಗೆ ಹಾಜರಾಗುವಂತೆ ವೆಂಕಟೇಶ್ ಅವರಿಗೆ ದೂರು ನೀಡಿದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೊಬ್ಬರು ದೂರು ನೀಡಿರುವ ಸಂಬಂಧ ಕುಮಾರಸ್ವಾಮಿ ಲೇಔಟ್ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಎ.ವಿ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೊರೊನಾ ವ್ಯಾಕ್ಸಿನ್ ಲಸಿಕೆ 900 ರೂ.ಗೆ ಮಾರಾಟ ಮಾಡುತ್ತಿರುವ ಬಗ್ಗೆ ವೆಂಕಟೇಶ್ ಪ್ರಶ್ನಿಸಿದ್ದರು. ಈ ಕುರಿತ ಅಡಿಯೋ ತುಣುಕು ರಾಜ್ಯದಲ್ಲಿ ಸಂಚಲನ ಮೂಡಿಸಿತ್ತು. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಗದ ಲಸಿಕೆ ಖಾಸಗಿ ಆಸ್ಪತ್ರೆಯಲ್ಲಿ ದುಬಾರಿ ಬೆಲೆಗೆ ಸಿಗುತ್ತಿರುವ ಬಗ್ಗೆ ಪ್ರಶ್ನಿಸಿದ್ದ ವೆಂಕಟೇಶ್ ಅವರು ಖಾಸಗಿ ಆಸ್ಪತ್ರೆ ಲಸಿಕೆ ದಂಧೆ ಕುರಿತ ಅಡಿಯೋ ಬಿಡುಗಡೆ ಮಾಡಿ ದೂರು ನೀಡಿದ್ದರು.
Recommended Video