ರ್ಯಾಪಿಡೋ ಬೈಕ್ ಸವಾರರು ಮತ್ತು ಆಟೋ ಚಾಲಕರ ನಡುವೆ ಜಟಾಪಟಿ
ಬೆಂಗಳೂರು, ಜ. 20: ದ್ವಿಚಕ್ರ ವಾಹನದಿಂದ ಪ್ರಯಾಣ ಸೇವೆ ಒದಗಿಸಲು ಅವಕಾಶವಿಲ್ಲದಿದ್ದರೂ ಬೆಂಗಳೂರು ನಗರದಲ್ಲಿ ರ್ಯಾಪಿಡೋ ಬೈಕ್ ಸೇವೆಗೆ ಅವಕಾಶ ಕಲ್ಪಿಸಿಕೊಟ್ಟಿರುವ ಸಾರಿಗೆ ಅಧಿಕಾರಿಗಳ ವಿರುದ್ಧ ಆಟೋ ಚಾಲಕರು ತಿರುಗಿ ಬಿದ್ದಿದ್ದಾರೆ. ರ್ಯಾಪಿಡೋ ಬೈಕ್ ಸೇವೆಯಿಂದ ಆಟೋ ಚಾಲಕರು ಬೀದಿಗೆ ಬಿದ್ದಿದ್ದೇವೆ. ನಮ್ಮ ಆಟೋಗಳನ್ನು ವೈಟ್ ಬೋರ್ಡ್ಗಳನ್ನಾಗಿ ಪರಿವರ್ತನೆ ಮಾಡಿಕೊಡಿ ಎಂದು ಗಾಂಧಿಗಿರಿ ಹೋರಾಟ ಆರಂಭಿಸಿದ್ದಾರೆ.
ಬೆಂಗಳೂರಿನಲ್ಲಿ ಆಟೋ ಚಾಲಕರ ಮೇಳೆ ಹೊಟ್ಟೆ ಹೊಡೆದು ಕಡಿಮೆ ಬೆಲೆಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣ ಸೇವೆ ಒದಗಿಸುತ್ತಿರುವ ರ್ಯಾಪಿಡೋ ಬೈಕ್ಗಳನ್ನು ನಿಲ್ಲಿಸಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ವೈಟ್ ಬೋರ್ಡ್ ವಾಹನಗಳಲ್ಲಿ ಅದೇಗೆ ಕಮರ್ಷಿಯಲ್ ಸೇವೆ ನೀಡುತ್ತಿದ್ದಾರೆ ತನಿಖೆ ನಡೆಸಿ ಎಂದು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಮುಂದೆ 20 ಕ್ಕೂ ಹೆಚ್ಚು ಆಟೋ ಚಾಲಕರು ಜಮಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
ಇದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿರುವ ರ್ಯಾಪಿಡೋ ಬೈಕ್ ಸವಾರರು, ನಮಗೆ ಸೇವೆ ಮಾಡಲು ಆಪ್ನಲ್ಲಿ ಅವಕಾಶ ಕೊಟ್ಟಿದ್ದಾರೆ. ಅದಕ್ಕೆ ನಾವು ಮಾಡುತ್ತಿದ್ದೇವೆ. ಇದರ ಬಗ್ಗೆ ತಕರಾರು ಇದ್ದರೆ ರ್ಯಾಪಿಡೋ ಬೈಕ್ ಸೇವೆ ಒದಗಿಸುತ್ತಿರುವ ಆಪ್ ಮತ್ತು ಕಂಪನಿ ವಿರುದ್ಧ ಆಟೋ ಚಾಲಕರು ಹೋರಾಟ ಮಾಡಲಿ. ನಮ್ಮ ಬೈಕ್ ನಿಲ್ಲಿಸಿ ನಮ್ಮ ಹೊಟ್ಟೆ ಮೇಲೆ ಯಾಕೆ ಹೊಡೆಯುತ್ತೀರಿ ಎಂದು ರ್ಯಾಪಿಡೋ ಬೈಕ್ ಸವಾರರು ಪ್ರಶ್ನಿಸಿದ್ದಾರೆ.
ಆಟೋ ಚಾಲಕರ ಮತ್ತು ರ್ಯಾಪಿಡೋ ಬೈಕ್ ಸವಾರರ ನಡುವೆ ಜಟಾಪಟಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶಿಸಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಸಂಚಾರ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೈಕ್ಗಳನ್ನು ವಾಣಿಜ್ಯ ಬಳಕೆಗೆ ನಿಯಮದಲ್ಲಿ ಅವಕಾಶವಿಲ್ಲ. ಹೀಗಾಗಿ ಈ ಹಿಂದೆಯೇ ನಾವು ಹೋರಾಟ ಮಾಡಿ ಬೈಕ್ ಸೇವೆಯನ್ನು ಸ್ಥಗಿತಗೊಳಿಸಿದ್ದೆವು. ಇದೀಗ ಮತ್ತೆ ಅದೇಗೆ ಅವಕಾಶ ಕೊಟ್ಟಿದ್ದಾರೆ. ನಿಯಮದಲ್ಲಿ ಅವಕಾಶ ಇಲ್ಲದಿದ್ದರೂ ಯಾಕೆ ಅನುಮತಿ ಕೊಟ್ಟರು? ಇದರಿಂದ ಆಟೋ ಚಾಲಕರು ಬೀದಿಗೆ ಬೀಳಬೇಕಾದ ಪರಿಸ್ಥಿತಿ ಎದುರಾಗಿದೆ. ನಾವು ಯಾಕೆ ಯಲ್ಲೋ ಬೋರ್ಡ್ ಮಾಡಿಸಿ ತೆರಿಗೆ ಪಾವತಿಸಬೇಕು. ನಮಗೂ ವೈಟ್ ಬೋರ್ಡ್ಗೆ ಅವಕಾಶ ಕೊಡಲಿ. ನಾವೂ ಪ್ರಯಾಣ ವೆಚ್ಚ ಕಡಿಮೆ ಮಾಡಿ ಬದುಕಿಕೊಳ್ಳುತ್ತೇವೆ ಎಂದು ಆಟೋ ಚಾಲಕರು ಆಗ್ರಹಿಸಿದ್ದಾರೆ.
Recommended Video
ಸಂಚಾರ ಪೊಲೀಸರು ಮಧ್ಯ ಪ್ರವೇಶಿಸಿ, ನಿಯಮ ಬಾಹಿರವಾಗಿ ಬೈಕ್ಗಳಿಂದ ಸೇವೆ ಒದಗಿಸುತ್ತಿದ್ದರೆ ದೂರು ಕೊಡಿ. ತಪ್ಪಿದ್ದರೆ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಕೊರೊನಾ ನಿಯಮ ಉಲ್ಲಂಘನೆ ಮಾಡಿ ಎಲ್ಲರೂ ಒಂದಡೆ ಸೇರಿ ಪ್ರತಿಭಟನೆ ನಡೆಸಿದರೆ ನಿಮ್ಮ ವಿರುದ್ಧ ಕೇಸು ದಾಖಲಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಆಟೋ ಚಾಲಕರು ವಾಪಸು ತೆರಳಿದ್ದು, ಸಾರಿಗೆ ಇಲಾಖೆ ಅಧಿಕಾರಿಗಳಿಗೆ ದೂರು ನೀಡಲು ಮುಂದಾಗಿದ್ದಾರೆ.