ಸಿಗದ 5,000.ರೂ ಪರಿಹಾರ: ಸಿಡಿದೆದ್ದ ಆಟೋ, ಟ್ಯಾಕ್ಸಿ ಚಾಲಕರಿಂದ ಪ್ರತಿಭಟನೆ
ಬೆಂಗಳೂರು, ಮೇ 18: ಕೊರೊನಾ ವೈರಸ್ ಸೋಂಕನ್ನು ಅನ್ನು ತಡೆಗಟ್ಟಲು ದೇಶದಾದ್ಯಂತ ಲಾಕ್ ಡೌನ್ ಘೋಷಣೆ ಆದ್ಮೇಲೆ ಸಂಕಷ್ಟಕ್ಕೆ ಸಿಲುಕಿದ್ದ ಕರ್ನಾಟಕ ರಾಜ್ಯದ ಆಟೋ ಮತ್ತು ಟ್ಯಾಕ್ಸಿ, ಕ್ಯಾಬ್ ಚಾಲಕರಿಗೆ 5 ಸಾವಿರ ರೂಪಾಯಿಯ ಪರಿಹಾರ ಕೊಡುತ್ತೇವೆ ಸಿಎಂ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದರು.
Recommended Video
ಸೇವಾ ಸಿಂಧು ಜಾಲತಾಣದ ಮೂಲಕ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ಅರ್ಜಿ ಹಾಕಿ ಹಣವನ್ನು ಪಡೆಯಬಹುದಾಗಿತ್ತು.
ಆಟೋ, ಕ್ಯಾಬ್ ಚಾಲಕರು ಸರ್ಕಾರದ 5000 ರು ಪಡೆಯುವುದು ಹೇಗೆ?
ಇದೀಗ ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ''ಸುಳ್ಳು ಘೋಷಣೆ'' ಎಂದು ಹೇಳಿ 11ನೇ ದಿನದ ತಿಥಿ ಕಾರ್ಯ ಮಾಡಿ, ಎಳ್ಳು ನೀರು ಬಿಟ್ಟು.. ಆಟೋ, ಟ್ಯಾಕ್ಸಿ ಚಾಲಕ ಆಸೋಸಿಯೇಷನ್ ವಿನೂತನವಾಗಿ ಪ್ರತಿಭಟನೆ ನಡೆಸಿದೆ.
ಪರಿಹಾರ ಸಹಾಯ ಧನ ವಿಳಂಬವಾಗುತ್ತಿರುವ ಹಿನ್ನಲೆಯಲ್ಲಿ ಸಾರಿಗೆ ಇಲಾಖೆಯ ಬೇಜವಾಬ್ದಾರಿ ವಿರುದ್ಧ ಅಸಮಾಧಾನ ಹೊರಹಾಕಿ, ಶಾಂತಿನಗರದ ಸಾರಿಗೆ ಆಯುಕ್ತರ ಕಚೇರಿಯ ಮುಂದೆ ಚಾಲಕರು ಪ್ರತಿಭಟನೆ ನಡೆಸಿದರು.
''ಚಾಲಕರಿಗೆ 5,000 ಪರಿಹಾರ ನೀಡುತ್ತವೆ ಎಂದು ಘೋಷಣೆ ಮಾಡಿ 11 ದಿನ ಕಳೆದರೂ ಪರಿಹಾರ ಧನ ಸಿಗುವ ಯಾವುದೇ ಮುನ್ಸೂಚನೆ ಕಾಣುತ್ತಿಲ್ಲ. ಸಾರಿಗೆ ಇಲಾಖೆ ದಿನೇ ದಿನೇ ಹೊಸ ಹೊಸ ಮಾನದಂಡಗಳು, ನಿಬಂಧನೆಗಳನ್ನ ಚಾಲಕರ ಮೇಲೆ ಹೇರುತ್ತಲೇ ಇದೆ. 7 ಲಕ್ಷದ 75 ಸಾವಿರ ಚಾಲಕರಿಗೆ ತಲಾ 5 ಸಾವಿರ ರೂಪಾಯಿ ನೀಡುತ್ತೇವೆ ಎಂದು ಹೇಳಿ ಈಗ ಕೇವಲ 20 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದಾರೆ. ಪರಿಹಾರ ಘೋಷಣೆ ಮಾಡುವಾಗ 370 ಕೋಟಿ ಹೇಳಿದ್ದ ಸರ್ಕಾರ ಈಗ 20 ಕೋಟಿಗೆ ಇಳಿಸಿದೆ. ಇದರಿಂದ ಪ್ರತಿ ಚಾಲಕನಿಗೆ ಕೇವಲ 40 ರೂಪಾಯಿಗಳು ಮಾತ್ರ ಬರುತ್ತದೆ. ಚಾಲಕರಿಗೆ ಈ ಹಣ ಸೇರಲೇಬಾರದೆಂದು ಸರ್ಕಾರ ಕುತಂತ್ರವನ್ನು ನಡೆಸುತ್ತಿದೆ. ಇದನ್ನು ಖಂಡಿಸುತ್ತೇವೆ ಮತ್ತು ಮುಂದಿನ ದಿನಗಳಲ್ಲಿ ಉಗ್ರ ಹೋರಾಟವನ್ನು ಮಾಡುತ್ತೇವೆ'' ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದ್ದಾರೆ.