ಆಟೋ, ಕ್ಯಾಬ್ ಚಾಲಕರು ಮಂಗಳವಾರದವರೆಗೂ ಕಾಯಲೇಬೇಕು
ಬೆಂಗಳೂರು, ಮೇ 22: ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರವಾಗಿ ರಾಜ್ಯ ಸರ್ಕಾರ 5 ರೂಪಾಯಿ ಘೋಷಣೆ ಮಾಡಿತ್ತು. ಈ ನೆರವಿಗಾಗಿ ಸೇವಾ ಸಿಂಧು ಪೋರ್ಟಲ್ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಸೂಚಿಸಿದ್ದ ಸರ್ಕಾರ, ಇದುವರೆಗೂ ಅದಕ್ಕೆ ಸಂಬಂಧಪಟ್ಟ ಸಾಫ್ಟ್ ವೇರ್ ಸಿದ್ದಪಡಿಸಿಲ್ಲ.
Recommended Video
ಇದರಿಂದ ಆಟೋ ಹಾಗು ಟ್ಯಾಕ್ಸಿ ಚಾಲಕರು ಗೊಂದಲಕ್ಕೆ ಬಿದ್ದಿದ್ದಾರೆ. ಈ ಮಧ್ಯೆ ಮಂಗಳವಾರವರೆಗೂ ಚಾಲಕರು ಕಾಯಬೇಕಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ತಿಳಿಸಿದ್ದಾರೆ.
ಆಟೋ, ಟ್ಯಾಕ್ಸಿ ಚಾಲಕರ ಜೊತೆ ಡಿಸಿಎಂ ಭೇಟಿ ಮಾಡಿದ ದಿನೇಶ್ ಗುಂಡೂರಾವ್
ಇನ್ನು ಸಾಫ್ಟ್ವೇರ್ ಅಪ್ಡೇಟ್ ಆಗಿಲ್ಲ. ಸಾಫ್ಟ್ ವೇರ್ ಅಪ್ಡೇಟ್ ಆಗಲು ಮಂಗಳವಾರದವರೆಗೂ ಕಾಯಬೇಕು, ಮುಂದಿನ ಮಂಗಳವಾರ ಪೂರ್ಣವಾಗುತ್ತೆ. ಈ ನಿಟ್ಟಿನಲ್ಲಿ ಪ್ರಕ್ರಿಯೆಗಳು ನಡೀತಿವೆ. ಆ ಬಳಿಕ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಪರಿಹಾರ ಸಿಗಲಿದೆ ಎಂದು ಆಹಾರ ಸಚಿವ ಕೆ.ಗೋಪಾಲಯ್ಯ ಮಾಹಿತಿ ನೀಡಿದ್ದಾರೆ.
ನಿನ್ನೆಯಷ್ಟೇ ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘದವರು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಸಾರಿಗೆ ಸಚಿವ ಹಾಗೂ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರನ್ನು ಭೇಟಿ ಮಾಡಿ ಮನವಿ ಮಾಡಿದ್ದರು.
''ಸರ್ಕಾರ ಚಾಲಕರಿಗೆ ಕೋವಿಡ್ ನೆರವು ಘೋಷಿಸಿದೆ. ಆದರೆ ಈ ಪರಿಹಾರದ ಹಣ ಚಾಲಕರಿಗೆ ಸಿಗುತ್ತಿಲ್ಲ. ಅನೇಕ ಕಠಿಣ ನಿಬಂಧನೆಗಳನ್ನು ಹಾಕಲಾಗಿದೆ. ಈ ರೀತಿ ಮಾಡುವುದರಿಂದ ಪ್ರಯೋಜನವಿಲ್ಲ. ಅದರ ಬದಲು ಈ ಯೋಜನೆಯನ್ನೇ ವಿತ್ ಡ್ರಾ ಮಾಡುವುದು ಒಳಿತು'' ಎಂದು ದಿನೇಶ್ ಗುಂಡೂರಾವ್ ಕಿಡಿಕಾರಿದ್ದರು.
ಆಟೋ ಚಾಲಕರ ಸಂಘದ ಅಧ್ಯಕ್ಷ ಮಂಜುನಾಥ್ ಮಾತನಾಡಿ 'ನೆರವಿನ ವಿಚಾರದಲ್ಲಿ ಚಾಲಕರಿಗೆ ಸಮಸ್ಯೆಯಾಗಿದೆ. ಚಾಲಕರ ಸಮಸ್ಯೆಗಳನ್ನ ಸವದಿಯವರಿಗೆ ತಿಳಿಸಿದ್ದೇವೆ. ಅವರು ಸಮಸ್ಯೆ ಬಗ್ಗೆ ಸರಿಪಡಿಸುವುದಾಗಿ ಹೇಳಿದ್ದಾರೆ. ಇಲ್ಲಿಯವರೆಗೆ ಸೇವಸಿಂಧು APPನಲ್ಲಿ ಅವಕಾಶವಿಲ್ಲ. ಎರಡು ದಿನಗಳಲ್ಲಿ ಮಾಡುವುದಾಗಿ ಹೇಳಿದ್ದಾರೆ' ಎಂದು ತಿಳಿಸಿದ್ದರು.