ಗಮನ ಬೇರಡೆ ಸೆಳೆದು ಬಿಲ್ ಕಲೆಕ್ಟರ್ ನಿಂದ 3 ಲಕ್ಷ ರೂ. ಎಗರಿಸಿದ ಕಿರಾತಕರು !
ಬೆಂಗಳೂರು, ನವೆಂಬರ್ 27: ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವರನ್ನು ಹಿಂಬಾಲಿಸಿ ಅವರ ಗಮನ ಬೇರಡೆ ಸೆಳೆದು ಹಣ ಕಸಿದುಕೊಂಡು ಹೋಗುವ ಜಾಲ ಇನ್ನೂ ಬೆಂಗಳೂರಿನಲ್ಲಿ ಸಕ್ರಿಯವಾಗಿದೆ. ಖಾಸಗಿ ಕಂಪನಿಯ ಉದ್ಯೋಗಿಯ ಗಮನ ಬೇರಡೆ ಸೆಳೆದು ಮೂರು ಲಕ್ಷ ರೂಪಾಯಿ ಹಣದ ಬ್ಯಾಗು ಎಗರಿಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಗಮನ ಬೇರಡೆ ಸೆಳೆದು ಹಣವಿದ್ದ ಬ್ಯಾಗ್ ನ್ನು ತೆಗೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಕನ್ಸ್ಟ್ರಕ್ಷನ್ ಕಂಪನಿಯಲ್ಲಿ ಕೆಲಸ ಮಾಡುವ ರಾಜಶೇಖರ್ ಹಣ ಕಳೆದುಕೊಂಡ ವ್ಯಕ್ತಿ. ಬಿಲ್ ಕಲೆಕ್ಟರ್ ಆಗಿರುವ ರಾಜಶೇಖರ್ ಮಹಾಲಕ್ಷ್ಮೀ ಲೇಔಟ್ ಜನತಾ ಕೋ ಆಪರೇಟೀವ್ ಬ್ಯಾಂಕ್ ನಲ್ಲಿ ಹಣ ಡ್ರಾ ಮಾಡಲು ಹೋಗಿದ್ದರು. ಮೂರು ಲಕ್ಷ ರೂಪಾಯಿ ಹಣ ಡ್ರಾ ಮಾಡಿಕೊಂಡು ಬ್ಯಾಗಿನಲ್ಲಿ ಇಟ್ಟುಕೊಂಡಿದ್ದಾರೆ. ಬ್ಯಾಂಕಿನಿಂದ ಹೊರ ಬಂದ ರಾಜಶೇಖರ್ ಬೈಕ್ ನಲ್ಲಿದ್ದ ಹೆಲ್ಮೆಟ್ ಹಾಕಿಕೊಳ್ಳುವ ವೇಳೆ ವ್ಯಕ್ತಿಯೊಬ್ಬ ಬಂದು ನಿಮ್ಮದು ಹಣ ಬಿದ್ದಿದೆ ನೋಡಿ ಎಂದಿದ್ದಾನೆ. ಬೈಕ್ ಸಮೀಪದಲ್ಲಿ 150 ರೂಪಾಯಿ ಹಣ ಬಿದ್ದಿರುವುದು ಗಮನಿಸಿದ ರಾಜಶೇಖರ್ ನಂದೇ ಹಣ ಇರಬಹುದು ಎಂದು ಭಾವಿಸಿ ಬ್ಯಾಗ್ ಅನ್ನು ಬೈಕ್ ಮೇಲೆ ಬಿಟ್ಟು ಹಣ ತೆಗೆದುಕೊಳ್ಳಲು ಹೋಗುತ್ತಾನೆ. ಇದೇ ವೇಳೆಗೆ ಬೇರೆ ಕಡೆಯಿಂದ ಬಂದ ವ್ಯಕ್ತಿ ಹಣವಿದ್ದ ಬ್ಯಾಗ್ ಎತ್ತಿಕೊಂಡು ಪರಾರಿಯಾಗುತ್ತಾನೆ. ಈ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ನಿಮ್ಮ ಬೈಕ್ ಕಳವಾಗಿದ್ರೆ ಇಲ್ಲಿ ಒಮ್ಮೆ ಪರೀಕ್ಷಿಸಿಕೊಳ್ಳಿ !
ಹಣವಿದ್ದ ಬ್ಯಾಗ್ ಕಳೆದುಕೊಂಡ ರಾಜಶೇಖರ್ ಗೋಳಾಡಿ ಹುಡುಕಾಡಿದರೂ ಆಸಾಮಿಗಳು ಪತ್ತೆಯಾಗಿಲ್ಲ. ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಸಂಬಂಧ ಕೇಸು ದಾಖಲಿಸಿಕೊಂಡು ಆರೋಪಿಗಳಾಗಿ ಶೋಧ ನಡೆಸುತ್ತಿದ್ದಾರೆ.
ಎಚ್ಚರಿಕೆ: ಸಾಮಾನ್ಯವಾಗಿ ಗಮನ ಬೇರಡೆ ಸೆಳೆದು ಹಣ ಹೊಡೆಯುವ ಗ್ಯಾಂಗ್ ಜನ ವಸತಿ ಪ್ರದೇಶದಲ್ಲಿ ಇರುವ ಬ್ಯಾಂಕ್ ಗಳನ್ನೇ ಟಾರ್ಗೆಟ್ ಮಾಡುತ್ತಾರೆ. ಹೆಚ್ಚು ಹಣ ಬ್ಯಾಂಕ್ ನಲ್ಲಿ ಡ್ರಾ ಮಾಡುವರನ್ನೇ ಟಾರ್ಗೆಟ್ ಮಾಡುತ್ತಾರೆ. ರಸ್ತೆ ಬದಿಯಲ್ಲಿ ಹಣ ಬಿಸಾಕಿ, ನಿಮ್ಮ ಹಣ ಬಿದ್ದಿದೆ ನೋಡಿ ಎಂದು ಯಾಮಾರಿಸುತ್ತಾರೆ. ಇಲ್ಲವೇ ಮೈಮೇಲೆ ಗಲೀಜು ಎಸೆದು, ನಿಮ್ಮ ಅಂಗಿ ಮೇಲೆ ಏನೋ ಬಿದ್ದಿದೆ ನೋಡಿ ಎಂದು ಗಮನ ಬೇರಡೆ ಸೆಳೆಯುತ್ತಾರೆ.
ಅಂಗಿ ಮೇಲಿನ ಗಲೀಜು ಒರೆಸಿಕೊಳ್ಳಲು ನೀರು ಕೊಡುವ ಸೋಗಿನಲ್ಲಿ ಒಬ್ಬ ಮುಂದಾದರೆ ಮತ್ತೊಬ್ಬ ಬ್ಯಾಗ್ ಕಸಿದು ಪರಾರಿಯಾಗುತ್ತಾರೆ. ಅಪ್ಪಿ ತಪ್ಪಿ ಒಬ್ಬ ಏನಾದರೂ ಸಿಕ್ಕಿಬಿದ್ದರೆ, ಇಡೀ ಗ್ಯಾಂಗ್ ಸಿಕ್ಕಿಬಿದ್ದವನಿಗೆ ಥಳಿಸುವ ನೆಪದಲ್ಲಿ ಹಿಡಿದುಕೊಂಡು ಆತನನ್ನು ಬಿಡಿಸಿ ಕಳಿಸುತ್ತಾರೆ. ಪೊಲೀಸರು ಬಂದು ಸಿಕ್ಕಿಬಿದ್ದರೂ ಒಬ್ಬ ಮಾತ್ರ ತಪ್ಪೊಪ್ಪಿಕೊಂಡು ಇಡೀ ಗ್ಯಾಂಗ್ ತಪ್ಪಿಸಿಕೊಳ್ಳುತ್ತದೆ. ಈ ರೀತಿಯ ಗ್ಯಾಂಗ್ ಗಳು ಬೆಂಗಳೂರಿನ ಮೆಜೆಸ್ಟಿಕ್, ಮಲ್ಲೇಶ್ವರಂ, ಚಿಕ್ಕಪೇಟೆ, ಕೆ.ಆರ್. ಮಾರ್ಕೆಟ್ ಜನ ಸಂದಣಿ ಇರುವ ಕಡೆ ಸಕ್ರಿಯವಾಗಿರುತ್ತದೆ.
ದಾರಿಯಲ್ಲಿ ಹಣ ಬಿದ್ದಿದೆ ನೋಡಿ ಎಂದು ಯಾರಾದರೂ ಹೇಳಿದರೂ ಅದರ ಕಡೆ ಗಮನ ಕೊಡಬಾರದು. ಗಮನ ಬೇರಡೆ ಸೆಳೆದು ಹಣ ದೋಚಲು ಕಿರಾಕತರು ಈ ರೀತಿ ನಾಟಕ ಮಾಡುತ್ತಾರೆ. ಅಂತಹ ಸಂದರ್ಭಗಳು ಬಂದರೂ ಯಾರೂ ಕಿವಿಕೊಡಬಾರದು. ಹತ್ತು ರೂಪಾಯಿ ಆಸೆಗೆ ಬಿದ್ದು ಹಣ ಕಳೆದುಕೊಳ್ಳಬಾರದು. ಇಂತಹ ಪ್ರಕರಣಗಳಲ್ಲಿ ಆರೋಪಿಗಳು ಬಂಧನಕ್ಕೆ ಒಳಗಾದರೂ ಜಾಮೀನು ಮೇಲೆ ಬಂದು ಅದೇ ಕೃತ್ಯ ಎಸಗುತ್ತಾರೆ. ಜನರು ಮೊದಲು ಜಾಗೃತರಾಗಿರಬೇಕು ಎಂದು ನಿವೃತ್ತ ಪೊಲೀಸ್ ಅಧಿಕಾರಿ ಕಿವಿಮಾತು ಹೇಳಿದ್ದಾರೆ.