ಸರ್ಕಾರಿ ಆಸ್ತಿ ಹಾನಿ, ಉ.ಪ್ರದೇಶ ಮಾದರಿ ದಂಡಕ್ಕೆ ಚಿಂತನೆ: ಆರ್.ಅಶೋಕ್
ಬೆಂಗಳೂರು, ಡಿಸೆಂಬರ್ 27: ಪ್ರತಿಭಟನೆ ಸಮಯದಲ್ಲಿ ಸರ್ಕಾರಿ ಆಸ್ತಿ-ಪಾಸ್ತಿ ಹಾನಿ ಮಾಡಿದವರಿಗೆ ಉತ್ತರ ಪ್ರದೇಶ ಮಾದರಿಯಲ್ಲಿ ದಂಡ ವಿಧಿಸುವ ಚಿಂತನೆ ನಡೆಸಲಾಗುತ್ತಿದೆಯೆಂದು ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆರ್.ಅಶೋಕ್, 'ಪ್ರತಿಭಟನೆ ಹೆಸರಲ್ಲಿ ಆಸ್ತಿ ಹಾನಿ ಮಾಡಿದ್ದನ್ನು ನೋಡಿಕೊಂಡು ಸುಮ್ಮನಿರಲು ಸಾಧ್ಯವಿಲ್ಲ' ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
'ಉತ್ತರ ಪ್ರದೇಶದಲ್ಲಿ ಸಿಎಎ ವಿರುದ್ಧ ಪ್ರತಿಭಟಿಸಿ ಆಸ್ತಿ-ಪಾಸ್ತಿ ಹಾನಿ ಮಾಡಿದವರನ್ನು ಗುರುತಿಸಿ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಕಾರ್ಯ ಮಾಡಲಾಗುತ್ತಿದೆ, ಅದೇ ಮಾದರಿಯಲ್ಲಿ ನಮ್ಮ ರಾಜ್ಯದಲ್ಲೂ ಆಗಬೇಕು, ತಪ್ಪು ಮಾಡಿದವರು ಶಿಕ್ಷೆ ಅನುಭವಿಸಬೇಕು' ಎಂದು ಅಶೋಕ್ ಹೇಳಿದ್ದಾರೆ.
'ಈ ಸಂಬಂಧ ಕಾನೂನು ರೂಪಿಸಲು ಗೃಹ ಸಚಿವರಿಗೆ ಮನವಿ ಮಾಡುತ್ತೇನೆ, ಮಂಗಳೂರು ಗಲಭೆ ಪೂರ್ವ ನಿಯೋಜಿತ ಎಂಬುದು ಸಿಸಿಟಿವಿ ಕ್ಯಾಮೆರಾಗಳ ದೃಶ್ಯದಿಂದ ಗೊತ್ತಾಗಿದೆ, ಗಲಭೆಕೋರರ ವಿರುದ್ಧ ಕ್ರಮ ಕೈಗೊಳ್ಳಬೇಕು, ತಪ್ಪು ಮಾಡಿದವರಿಗೆ ಶಿಕ್ಷೆ ಆಗಬೇಕು' ಎಂದರು.
ಅಶೋಕ್ ಮಾತಿಗೆ ಸಹಮತ ವ್ಯಕ್ತಪಡಿಸಿರುವ ಸಚಿವ ಸಿ.ಟಿ.ರವಿ, 'ಗಲಭೆ ಮಾಡಿವರಿಂದಲೇ ಹಣ ವಸೂಲಿ ಮಾಡಬೇಕು, ಉತ್ತರ ಪ್ರದೇಶ ಮಾದರಿ ಇಲ್ಲಿಯೂ ಅನುಸರಿಸುವಂತೆ ಸಿಎಂ ಗೆ ಮನವಿ ಮಾಡುತ್ತೇನೆ' ಎಂದಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ಉತ್ತರ ಪ್ರದೇಶದಲ್ಲಿ ತೀವ್ರವಾಗಿದ್ದು, ಪ್ರತಿಭಟನೆಯಲ್ಲಿ ಸರ್ಕಾರಿ ಆಸ್ತಿ ಹಾನಿ ಮಾಡಿದವರಿಗೆ ಸರ್ಕಾರ ನೊಟೀಸ್ ನೀಡಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುತ್ತಿದೆ. 14 ಲಕ್ಷ ದಂಡವನ್ನೂ ವಿಧಿಸಿದೆ.