ಇದು ನಮ್ಮ ಸೇನೆಯ ಬಲ ಹೆಚ್ಚಿಸಲಿದೆ: ಸಿಎಂ ಯಡಿಯೂರಪ್ಪ
ಬೆಂಗಳೂರು, ಅ. 03: ವಿಶ್ವದ ಅತಿ ಉದ್ದದ ಹಾಗೂ ಅತೀ ಎತ್ತರ ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಅಟಲ್ ಸುರಂಗ ಮಾರ್ಗವನ್ನು ಪ್ರಧಾನಿ ನರೇಂದ್ರಮೋದಿ ಅವರು ಇಂದು ಲೋಕಾರ್ಪಣೆ ಮಾಡಿರುವುದು ಭಾರತದ ಘನತೆ, ಕೀರ್ತಿ ಮತ್ತು ಸಾಮರ್ಥ್ಯವನ್ನು ಹೆಚ್ಚಿಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಲಡಾಖ್ನಲ್ಲಿ ಭಾರತ ಮತ್ತು ಚೀನಾ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಈ ಸಮಯದಲ್ಲಿ ಈ ಸುರಂಗ ಮಾರ್ಗ ಭಾರತೀಯ ಸೇನೆಗೆ ಅಪಾರ ಸಹಾಯ ಮಾಡಲಿದೆ ಎಂದು ಸಿಎಂ ಯಡಿಯೂರಪ್ಪ ಅಭಿಪ್ರಾಯಪಟ್ಟಿದ್ದಾರೆ.
ಮನಾಲಿಯನ್ನು ಲೇಹ್ಗೆ ಸಂಪರ್ಕಿಸುವ 9.02 ಕಿ.ಮೀ ಉದ್ದದ ಅಟಲ್ ಸುರಂಗವು ವಿಶ್ವದ ಅತಿ ಉದ್ದದ ಹೆದ್ದಾರಿ ಸುರಂಗವಾಗಿದೆ. ಈ ಮಾರ್ಗ ಮನಾಲಿ-ಲೇಹ್ ನಡುವಿನ ದೂರವನ್ನು 46 ಕಿ.ಮೀ ನಷ್ಟು ಕಡಿತಗೊಳಿಸುವ ಜತೆಗೆ, ನಾಲ್ಕರಿಂದ ಐದು ಗಂಟೆಗಳವರೆಗೆ ಪ್ರಯಾಣದ ಅವಧಿಯನ್ನು ಕಡಿತಗೊಳಿಸಲಿದೆ.
ಭಾರತೀಯ ಸೇನೆಗೆ ವ್ಯೂಹಾತ್ಮಕವಾಗಿಯು ಅತ್ಯಂತ ಉಪಯುಕ್ತವಾಗಿರುವ ಹೆದ್ದಾರಿ ಇದಾಗಿದೆ. ವರ್ಷಪೂರ್ತಿ ಸಂಚಾರಕ್ಕೆ ಲಭ್ಯವಾಗಲಿರುವ ಸುರಂಗ ಮಾರ್ಗ ಸೇನೆಯ ಬಲ ಮತ್ತು ಶಕ್ತಿಯನ್ನು ಹೆಚ್ಚಿಸಲಿದ್ದು, ತನ್ಮೂಲಕ ದೇಶದ ಭದ್ರತೆಗೂ ಲಾಭದಾಯಕವಾಗಿ ಪರಿಣಮಿಸಲಿದೆ ಎಂದಿದ್ದಾರೆ.