ಆಟಗಾರ್ತಿ ಮೇಲೆ ಹಲ್ಲೆ: ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್ ಬಂಧನ
ಬೆಂಗಳೂರು, ಜನವರಿ 21: ಕಬ್ಬಡ್ಡಿ ಆಟಗಾರ್ತಿ ಮೇಲೆ ಹಲ್ಲೆ ಮಾಡಿದ ಆರೋಪದಲ್ಲಿ ಅಂತರರಾಷ್ಟ್ರೀಯ ಮಟ್ಟದ ಮಾಜಿ ಕಬ್ಬಡ್ಡಿ ಆಟಗಾರ, ಅರ್ಜುನ ಪ್ರಶಸ್ತಿ ವಿಜೇತ ಬಿ.ಸಿ.ರಮೇಶ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ರಾಷ್ಟ್ರ ಮಟ್ಟದ ಕಬ್ಬಡ್ಡಿ ಆಟಗಾರ್ತಿ ಒಬ್ಬರ ಮೇಲೆ ಬಿ.ಸಿ.ರಮೇಶ್ ಇಂದು ಸಂಜೆ 7 ಗಂಟೆ ಸುಮಾರಿಗೆ ಹಲ್ಲೆ ಮಾಡಿದ್ದಾರೆ ಎಂದು ಸಂಪಂಗಿರಾಮನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಪೊಲೀಸರು ಬಿ.ಸಿ.ರಮೇಶ್ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ.
ಬಿ.ಸಿ.ರಮೇಶ್ ಅವರು ಅಂತರರಾಷ್ಟ್ರೀಯ ಮಟ್ಟದ ಆಟಗಾರರಾಗಿದ್ದರು, ಬೆಂಗಳೂರು ಬುಲ್ಸ್, ಪುನೇರಿ ಪಲ್ಟನ್ಸ್ ಮತ್ತು ಬೆಂಗಾಲ್ ವಾರಿಯರ್ಸ್ ಕಬ್ಬಡ್ಡಿ ತಂಡದ ಮುಖ್ಯ ಕೋಚ್ ಆಗಿದ್ದರು.
ಆಟಗಾರ್ತಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಬ್ಬಡ್ಡಿ ಅಸೋಸಿಯೇಷನ್ನ ಕಾರ್ಯದರ್ಶಿ ಮುನಿರಾಜು, ಷಣ್ಮುಗ, ನರಸಿಂಹ ಅವರ ಮೇಲೂ ದೂರು ದಾಖಲಾಗಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಲ್ಲೆಗೊಳಗಾದ ಆಟಗಾರ್ತಿಗೆ ತೀವ್ರ ಪೆಟ್ಟಾಗಿದೆ ಎಂದು ಸಂಬಂಧಿಗಳು ಹೇಳಿದ್ದು, ಹೊಡೆತದ ತೀವ್ರತೆಗೆ ಜ್ಞಾನ ತಪ್ಪಿದ್ದು, ಇದೀಗವಷ್ಟೆ ಸುಧಾರಿಸಿಕೊಳ್ಳುತ್ತಿದ್ದಾರೆಂದು ವೈದ್ಯರು ತಿಳಿಸಿರುವುದಾಗಿ 'ಒನ್ಇಂಡಿಯಾ ಕನ್ನಡ'ಕ್ಕೆ ಮಾಹಿತಿ ನೀಡಿದ್ದಾರೆ.
ಕಂಠೀರವ ಸ್ಟೇಡಿಯಂ ನಲ್ಲಿ ಬೆಳಿಗ್ಗೆ ತಾಲೀಮು ನಡೆಸುವಾಗ ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಭೇಟಿ ನೀಡಿದ್ದರು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹಲ್ಲೆಗೊಳಗಾದ ಆಟಗಾರ್ತಿ ಅಧಿಕಾರಿಯನ್ನು ಸಹಾಟಗಾರರಿಗೆ ಮತ್ತು ಕೋಚ್ ಗೆ ಪರಿಚಯ ಮಾಡಿಸಿದ್ದಾರೆ. ಅಧಿಕಾರಿಯು ಸ್ಪೂರ್ತಿಯ ಮಾತುಗಳನ್ನಾಡಿ ತೆರಳಿದ್ದಾರೆ.
ಆದರೆ ಸಂಜೆ ತಾಲೀಮಿನ ವೇಳೆಗೆ ಸ್ಟೇಡಿಯಂ ಗೆ ಬಂದ ಬಿ.ಸಿ.ರಮೇಶ್ ಈ ಬಗ್ಗೆ ತಕರಾರು ತೆಗೆದಿದ್ದು, ಆಟಗಾರ್ತಿಯನ್ನು ಎಲ್ಲರೆದುರು ನಿಂದಿಸಿದ್ದಾರೆ. ನಂತರ ಕಚೇರಿಗೆ ಬರಲು ಹೇಳಿದ್ದು, ಅಲ್ಲಿಯೂ ಜಗಳವಾಡಲಾಗಿ ಆಟಗಾರ್ತಿಗೆ ಹೊಡೆದಿದ್ದಾರೆ. ಸಹಾಟಗಾರ್ತಿಯರು ಹೊಡೆತ ತಿಂದ ಆಟಗಾರ್ತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಘಟನೆಯನ್ನು ಹಲ್ಲೆಗೊಳಗಾದ ಆಟಗಾರ್ತಿಯ ಸಹೋದರ ನವೀನ್ 'ಒನ್ಇಂಡಿಯಾ ಕನ್ನಡ'ಕ್ಕೆ ವಿವರಿಸಿದರು.