ಕತಾರ್ ನಲ್ಲಿ ಸಿಲುಕಿದ 4,000 ಕನ್ನಡಿಗರನ್ನು ಕರೆತರುವುದಕ್ಕಿಲ್ವಾ ವ್ಯವಸ್ಥೆ?
ಬೆಂಗಳೂರು, ಜೂನ್.06: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ಭೀತಿ ಹಾಗೂ ಲಾಕ್ ಡೌನ್ ನಿಂದ ಅಂತಾರಾಷ್ಟ್ರೀಯ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಕತಾರ್ ನಲ್ಲಿ ದುಡಿಮೆಗೆ ತೆರಳಿದ 4,000ಕ್ಕೂ ಅಧಿಕ ಕನ್ನಡಿಗರು ತವರಿಗೆ ವಾಪಸ್ ಬರಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
Recommended Video
ಕತಾರ್ ರಾಜಧಾನಿ ದೋಹಾ ನಗರದ ಮಾಲ್ ನಲ್ಲಿ ಕೆಲಸ ಮಾಡುತ್ತಿರುವ ತಮ್ಮ ಪುತ್ರನ ಆಗಮನದ ನಿರೀಕ್ಷೆಯಲ್ಲಿ ತಂದೆ ಕಾದು ಕುಳಿತಿದ್ದಾರೆ. ಲಾಕ್ ಡೌನ್ ನಿಂದಾಗಿ ವಿಶ್ವದ ಹಲವಾರು ರಾಷ್ಟ್ರಗಳಲ್ಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಹೀಗೆ ಸಂಕಷ್ಟದಲ್ಲಿ ಇರುವವರನ್ನು ತವರಿಗೆ ವಾಪಸ್ ಕರೆ ತರುವುದಕ್ಕೆ ಕನ್ನಡ ಸಂಘಗಳು ಯೋಜನೆ ರೂಪಿಸುತ್ತಿವೆ.
15 ದಿನದಲ್ಲಿ ವಲಸೆ ಕಾರ್ಮಿಕರನ್ನು ಊರುಗಳಿಗೆ ಕಳುಹಿಸಬೇಕು- ಸುಪ್ರೀಂಕೋರ್ಟ್
ಕತಾರ್ ರಾಷ್ಟ್ರ ಒಂದರಲ್ಲೇ 30,000ಕ್ಕೂ ಅಧಿಕ ಕನ್ನಡಿಗರಿದ್ದು, ಅದೆಷ್ಟೋ ಮಂದಿ ಲಾಕ್ ಡೌನ್ ನಿಂದಾಗಿ ಉದ್ಯೋಗ ಕಳೆದುಕೊಂಡಿದ್ದಾರೆ. ವ್ಯಾಪಾರ-ವಹಿವಾಟು ಇಲ್ಲದೇ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಪೈಕಿ ಮಹಿಳೆಯರು, ಮಕ್ಕಳು, ಗರ್ಭಿಣಿಯರು ಹಾಗೂ ಹಿರಿಯ ವಯಸ್ಸಿನವರೂ ಇದ್ದಾರೆ.
ಮೇ.22ರಂದು ದೋಹಾ ಟು ಬೆಂಗಳೂರು ವಿಮಾನ:
ಕತಾರ್ ರಾಜಧಾನಿ ದೋಹಾದಲ್ಲಿರುವ ಕನ್ನಡ ಸಂಘವು ಕನ್ನಡಿಗರನ್ನು ತವರಿಗೆ ಕರೆಸಿಕೊಳ್ಳುವ ವ್ಯವಸ್ಥೆ ಕಲ್ಪಿಸುವಂತೆ ಕರ್ನಾಟಕ ಸರ್ಕಾರಕ್ಕೆ ಮನವಿ ಸಲ್ಲಿಸಿತು. ಕಳೆದ ಮೇ.22ರಂದು ಕೇಂದ್ರ ಸರ್ಕಾರದ ವಂದೇ ಭಾರತ್ ಮಿಷನ್ ಎರಡನೇ ಹಂತದ ಅಡಿಯಲ್ಲಿ ಮೊದಲ ಬಾರಿಗೆ ಕತಾರ್ ರಾಜಧಾನಿ ದೋಹಾದಿಂದ ಬೆಂಗಳೂರಿಗೆ 182 ಮಂದಿ ಕನ್ನಡಿಗರನ್ನು ಕರೆದುಕೊಂಡು ಬರಲಾಯಿತು.
ದೋಹಾದ ರಾಯಭಾರಿ ಕಚೇರಿಯಲ್ಲಿ 4,000 ಕನ್ನಡಿಗರು ತವರಿಗೆ ವಾಪಸ್ಸಾಗಲು ಹೆಸರು ನೋಂದಾಯಿಸಿಕೊಂಡಿದ್ದರು. ಈ ಹಿನ್ನೆಲೆ ಮತ್ತಷ್ಟು ವಿಶೇಷ ವಿಮಾನಗಳನ್ನು ಕಳುಹಿಸುವಂತೆ ಮನವಿ ಮಾಡಿದರೂ ವಂದೇ ಭಾರತ್ ಮಿಷನ್ 3ನೇ ಹಂತದ ಅಡಿಯಲ್ಲಿ ಕರ್ನಾಟಕಕ್ಕೆ ಯಾವುದೇ ವಿಮಾನಗಳ ವ್ಯವಸ್ಥೆ ಕಲ್ಪಿಸಿರಲಿಲ್ಲ.
ಕತಾರ್ ನಲ್ಲಿರುವ ಕರ್ನಾಟಕ ಸಂಘದ ಅಧ್ಯಕ್ಷ ನಾಗೇಶ್ ರಾವ್ ಈ ಕುರಿತು ಸಾಕಷ್ಟು ಬಾರಿ ಸರ್ಕಾರಕ್ಕೆ ಮನವಿ ಮಾಡಿಕೊಂಡರು. ಕತಾರ್ ನಲ್ಲಿ ಸಿಲುಕಿರುವರನ್ನು ಕರೆ ತರುವುದಕ್ಕಾಗಿ ಮಂಗಳೂರು ಮತ್ತು ಬೆಂಗಳೂರಿಗೆ ವಿಮಾನಗಳ ವ್ಯವಸ್ಥೆಗೆ ಕಲ್ಪಿಸಬೇಕಿದೆ. ಡಯಾಲಿಸಿಸ್ ರೋಗಿಗಳು, ಗರ್ಭಿಣಿಯರು ಮತ್ತು ಮಕ್ಕಳನ್ನು ಕರೆ ತರುವುದಕ್ಕೆ ಮೊದಲ ಆದ್ಯತೆ ನೀಡಬೇಕಿದೆ.
ಭಾರತಕ್ಕೆ ತೆರಳಲು ಆಗದೇ ಕತಾರ್ ನಲ್ಲಿ ಸಿಲುಕಿರುವವರಿಗೆ ನಾವು ಮೌಖಿಕ ಭರವಸೆ ನೀಡಬಹುದು. ಕಳೆದ ಆರು ವಾರಗಳಿಂದಲೂ ಸಂಕಷ್ಟದಲ್ಲಿ ಇರುವ ಕನ್ನಡಿಗರಿಗೆ ಆಹಾರ, ವೈದ್ಯಕೀಯ ಸೌಲಭ್ಯ ಹಾಗೂ ಆರ್ಥಿಕ ಸಹಾಯವನ್ನು ಮಾಡಲಾಗುತ್ತಿದೆ. ಇದಕ್ಕಿಂತಲೂ ಹೆಚ್ಚಾಗಿ ದೀರ್ಘಾವಧಿಯವರೆಗೂ ನೆರವು ನೀಡುವ ಸಾಮರ್ಥ್ಯ ನಮ್ಮಲ್ಲೂ ಕೂಡಾ ಇಲ್ಲ ಎಂದು ಕತಾರ್ ನಲ್ಲಿರುವ ಕನ್ನಡಿಗರ ಸಂಘದ ಅಧ್ಯಕ್ಷ ನಾಗೇಶ್ ರಾವ್ ತಿಳಿಸಿದ್ದಾರೆ.