ರಾಮಲಿಂಗಾರೆಡ್ಡಿ ಪಿತಾಮಹ ಆಫ್ ಬೆಂಗಳೂರು: ಸಿದ್ದರಾಮಯ್ಯ
ಬೆಂಗಳೂರು, ಫೆಬ್ರವರಿ 20: 'ರಾಮಲಿಂಗಾರೆಡ್ಡಿ ಪಿತಾಮಹ ಆಫ್ ಬೆಂಗಳೂರು' ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣ್ಣಿಸಿದರು.
ವಿಧಾನಸಭೆ ಕಲಾಪದಲ್ಲಿ ಗುರುವಾರ ರಾಜ್ಯಪಾಲರ ಭಾಷಣದ ಮೇಲಿನ ಚರ್ಚೆಯ ವೇಳೆ ಮಾತನಾಡಿದ ಸಿದ್ದರಾಮಯ್ಯ ಹೇಳಿದ ಮಾತು ಸ್ವಾರಸ್ಯಕರ ಚರ್ಚೆಗೆ ಎಡೆಮಾಡಿಕೊಟ್ಟಿತು.
ವಿಧಾನಸಭೆ ಕಡತದಿಂದ ತೆಗೆದ ಚರ್ಚೆ ಯುಟ್ಯೂಬ್ನಲ್ಲಿ ಲಭ್ಯ, ಕಾಮೆಂಟ್ಸ್ ಅಸಭ್ಯ!
ಈ ಮಧ್ಯೆ ಕಾಂಗ್ರೆಸ್ನಿಂದ ಬಿಜೆಪಿಗೆ ಹಾರಿರುವ ಶಾಸಕ ಎಸ್ ಟಿ ಸೋಮಶೇಖರ್ ಅವರ ಹೆಸರನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಎಸ್.ಟಿ. ಸೋಮಶೇಖರ್ ಕೂಡ ನಮ್ಮವರೇ. ಇಲ್ಲಾ ಅಂತಾ ಹೇಳಲಿ ಎಂದು ಸಿದ್ದರಾಮಯ್ಯ ಹೇಳಿದಾಗ, 'ಹೌದು ಬೆಂಗಳೂರಿನ ಪಿತಾಮಹ ಆ ಕಡೆ ರಾಮಲಿಂಗಾರೆಡ್ಡಿ ಅವ್ರು, ಈ ಕಡೆ ಆರ್ ಅಶೋಕ. ಇಬ್ಬರು ಇದ್ದರು ನೀವು ಮೂರನೆಯವರಾಗಿ ಜಾರ್ಜ್ರನ್ನು ಮಾಡಿದಿರಿ' ಎಂದು ಸೋಮಶೇಖರ್ ಹೇಳಿದರು.
ರಾಮಲಿಂಗಾರೆಡ್ಡಿ ಸೀನಿಯರ್
ಆರ್. ಅಶೋಕ್ ಮತ್ತು ಡಾ.ಸಿ.ಎನ್. ಅಶ್ವತ್ಥ್ ನಾರಾಯಣ ಇಬ್ಬರೂ ಕೂಡ ಬೆಂಗಳೂರಿನ ಪಿತಾಮಹರು ಎಂದು ಎಸ್.ಟಿ. ಸೋಮಶೇಖರ್ ಹೇಳಿದರು.
ಆಗ ಸಿದ್ದರಾಮಯ್ಯ, 'ಇಲ್ಲ ಇಲ್ಲ ರಾಮಲಿಂಗಾರೆಡ್ಡಿ ಅವರಿಗಿಂತ ಸೀನಿಯರ್. ವೀರೇಂದ್ರ ಪಾಟೀಲರ ಕಾಲದಲ್ಲೇ ಮಿನಿಸ್ಟರ್ ಆಗಿದ್ದರು. ಹಾಗಾಗಿ ರಾಮಲಿಂಗಾರೆಡ್ಡಿ ಮಾತ್ರ ಬೆಂಗಳೂರು ಪಿತಾಮಹ ಎಂದು ಪ್ರತಿಕ್ರಿಯಿಸಿದರು.
ಸೋಮಶೇಖರ್ ಕೂಡ ಫ್ರೆಂಡ್
ಡಾ.ಸಿ.ಎನ್.ಅಶ್ವತ್ಥ ನಾರಾಯಣ ಆಪರೇಷನ್ ಕಮಲದಲ್ಲಿ ತುಂಬಾ ಓಡಾಡಿದ್ದಾರೆ. ಆದರೂ ಕೂಡ ಹೀ ಈಸ್ ಗುಡ್ ಫ್ರೆಂಡ್ ಆಫ್ ಮೈನ್ ಎಂದು ಸಿದ್ದರಾಮಯ್ಯ ಹೇಳಿದರು. ಹಾಗಾದರೆ ಎಸ್.ಟಿ. ಸೋಮಶೇಖರ್ ನಿಮ್ಮ ಫ್ರೆಂಡ್ ಅಲ್ಲವೇ ಎಂದು ಬಿಜೆಪಿ ಶಾಸಕರು ಕೆಣಕಿದಾಗ, 'ಅವರೂ ಕೂಡ ನನಗೆ ಫ್ರೆಂಡ್, ಏನೋ ಈಗ ಆ ಕಡೆ ಹೋಗಿ ಮಿನಿಸ್ಟರ್ ಆಗಿಬಿಟ್ಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.
ಮಂಗಳೂರು ಗೋಲಿಬಾರ್ ಬಗ್ಗೆ ಖಾದರ್ ಭಾಷಣ: ಕೆರಳಿದ ಬಿಜೆಪಿ ಶಾಸಕರು
ಕೋಪದಿಂದ ಕುಳಿತ ಸಿದ್ದರಾಮಯ್ಯ
ಅರ್ಧ ಕ್ಯಾಬಿನೆಟ್ ನಿಮ್ಮದೇ ಬಿಡಿ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು. ಅದು ಸಂಪೂರ್ಣವಾಗಿ ಕೇಳದೆ ಸಿದ್ದರಾಮಯ್ಯ ಕೋಪಗೊಂಡು, ನಾನು ಮಾತನಾಡುವುದಿಲ್ಲ ಎಂದು ಕುಳಿತುಕೊಂಡರು.
ಕೂಡಲೇ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದ ಸಚಿವ ವಿ. ಸೋಮಣ್ಣ, ಅವರು ನಿಮ್ಮನ್ನು ಕಾಂಪ್ಲಿಮೆಂಟ್ ಮಾಡುತ್ತಿದ್ದಾರೆ ಎಂದು ಸಮಾಧಾನ ಪಡಿಸಿದರು.
ಈ ಚರ್ಚೆಯ ಮಧ್ಯೆ ಟೈಮ್ ಆಯ್ತು ಮುಗಿಸಿ ಎಂದು ಸಿ.ಸಿ ಪಾಟೀಲ್ ಹೇಳಿದರು. ಸಿದ್ದರಾಮಯ್ಯ ಅವರೇ ನಿಮಗೆ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ, ಸಿಟ್ಟು ಏಕೆ ಮಾಡಿಕೊಳ್ತಿರಾ ಎಂದು ಶೆಟ್ಟರ್ ಹೇಳಿದರು. ಅರ್ಧ ಕ್ಯಾಬಿನೆಟ್ ನಂದಾ? ಓಕೆ ಥ್ಯಾಂಕ್ಯೂ ಎಂದು ಸಿದ್ದರಾಮಯ್ಯ ಮಾತು ಮುಂದುವರಿಸಿದರು.
ಅನೈತಿಕವಾಗಿ ಬಂದಿರುವ ಕೂಸು
ಈ ಸರ್ಕಾರ ಜನರ ಆಶೀರ್ವಾದದಿಂದ ಬಂದಿಲ್ಲ, ಆಪರೇಷನ್ ಕಮಲದಿಂದ ಬಂದಿದ್ದು. ಆಪರೇಷನ್ ಕಮಲದ ಮೂಲಕ ಅನೈತಿಕವಾಗಿ ಬಂದಿರುವ ಕೂಸು ಈ ಸರ್ಕಾರ. ಕಾಂಗ್ರೆಸ್ ಮತ್ತು ಜೆಡಿಎಸ್ ನಿಂದ 17 ಶಾಸಕರನ್ನು ಆಪರೇಷನ್ ಕಮಲದ ಮೂಲಕ ಸೆಳೆದುಕೊಂಡಿದ್ದಾರೆ. ಇಲ್ಲವಾದರೆ ಯಡಿಯೂರಪ್ಪ ಮತ್ತೆ ಅಲ್ಪಾವಧಿ ಮುಖ್ಯಮಂತ್ರಿಯಾಗಿ ದಾಖಲೆ ಮಾಡುತ್ತಿದ್ದರು ಎಂದು ಸಿದ್ದರಾಮಯ್ಯ ಹೇಳಿದರು.
ಕುಮಾರಸ್ವಾಮಿ ಬಿಚ್ಚಿಟ್ಟ ಮಂಗಳೂರು ಗೋಲಿಬಾರ್ ನ ಇನ್ನೊಂದು ಮುಖ
ಯಡಿಯೂರಪ್ಪ ಇಂದು ಮುಖ್ಯಮಂತ್ರಿಯಾಗಲು ಜನಾದೇಶ ಕಾರಣವಲ್ಲ. 17 ಶಾಸಕರು ರಾಜೀನಾಮೆ ಕೊಟ್ಟ ಕಾರಣದಿಂದ ಬಿಜೆಪಿ ಸರ್ಕಾರ ಬಂದಿದೆ. ಹಾಗಾಗಿ ಬಿಜೆಪಿಯವರು ಜನಾದೇಶದಿಂದ ಬಂದಿದ್ದೇವೆ ಎನ್ನಬಾರದು, ಆಪರೇಷನ್ ಕಮಲದಿಂದ ಬಂದಿದ್ದೇವೆ ಎನ್ನಬೇಕು ಎಂದರು.
ನೀವು ಸೀನಿಯರ್, ಮುಂದೆ ಕೂರಬೇಕು
ತಮಗೆ ಮಾತನಾಡಲು ಅವಕಾಶ ಮಾಡಿಕೊಡುತ್ತಿಲ್ಲ ಎಂದು ಬಿಜೆಪಿಯ ಬಸನಗೌಡ ಪಾಟೀಲ್ ಯತ್ನಾಳ್ ಗೊಣಗಾಡಿದರು. ನೀವು ಸೀನಿಯರ್, ಆದರೆ ನೀವು ಮುಂದೆ ಬರಬೇಕು ಎಂದರೆ ಮುಂದಿನ ಸಾಲಿನಲ್ಲಿ ಕೂತಿರುವ ಸಚಿವರಲ್ಲಿ ಕೆಲವರು ತ್ಯಾಗ ಮಾಡಿ ನಿಮಗೆ ಜಾಗ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಕಾಲೆಳೆದರು. ಅದಕ್ಕೆ ಬಸನಗೌಡ ಪಾಟೀಲ್ ಯತ್ನಾಳ್ ಮುಗುಳ್ನಕ್ಕು ಕುಳಿತರು.