ಕುತೂಹಲ ಮೂಡಿಸಿದ ನಿರ್ಮಲಾನಂದ ಸ್ವಾಮೀಜಿ ಜತೆ ಅಮಿತ್ ಭೇಟಿ
ಬೆಂಗಳೂರು, ಮೇ 10: ಚುನಾವಣೆಗಾಗಿ ಬಹಿರಂಗ ಪ್ರಚಾರಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಇಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು.
ಬೆಂಗಳೂರಿನ ವಿಜಯನಗರದಲ್ಲಿರುವ ಶಾಖಾ ಮಠಕ್ಕೆ ಇಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಅಮಿತ್ ಶಾ ಒಬ್ಬರೇ ತೆರಳಿ ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ ರಾಜ್ಯದ ಯಾವುದೇ ನಾಯಕರನ್ನು ತಮ್ಮೊಂದಿಗೆ ಕರೆದೊಯ್ದಿರಲಿಲ್ಲ.
ಕುತೂಹಲ ಕೆರಳಿಸಿದ ಅಮಿತ್ ಶಾ ಆದಿಚುಂಚನಗಿರಿ ಭೇಟಿ !
ನಂತರ ಶ್ರೀಗಳು ಹಾಗೂ ಅಮಿತ್ ಶಾ ಸುಮಾರು 10 ನಿಮಿಷಕ್ಕೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಚುನವಣಾ ನೀತಿ ಸಂಹಿತೆ ಇರುವುದರಿಂದ ಅಮಿತ್ ಶಾ ಅವರು ತಮ್ಮ ಪರಿವಾರದವರನ್ನು ಜೊತೆಗೆ ಕರೆದೊಯ್ಯಲಿಲ್ಲ ಎನ್ನಲಾಗಿದೆ. ಆದರೆ, ಶ್ರೀಗಳ ಜತೆ ಏನು ಮಾತುಕತೆ ನಡೆಸಿದರು ಎಂಬುದು ಕುತೂಹಲಕಾರಿಯಾಗಿದೆ.
ಇದಾದ ಬಳಿಕ, ಈ ಬಗ್ಗೆ ಅಮಿತ್ ಶಾ ಅವರು ಈ ರೀತಿ ಟ್ವೀಟ್ ಮಾಡಿದ್ದಾರೆ.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಜಗದ್ಗುರುಗಳಾದ ಶ್ರೀ ಶ್ರೀ ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರ ಆಶೀರ್ವಾದ ದೊರೆಕಿದ್ದು ನನ್ನ ಪುಣ್ಯ. ಅನ್ನ ದಾಸೋಹಿ, ಶಿಕ್ಷಣ ಸಂತ, ನಾಥ ಪರಂಪರೆಯ 72ನೇ ಪೀಠಾಧ್ಯಕ್ಷರ ದಿವ್ಯ ಮಾರ್ಗದರ್ಶನ ನಮಗಿದೆ
ಈ ಹಿಂದೆ 2017ರ ಆಗಸ್ಟ್ ತಿಂಗಳಿನಲ್ಲಿ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಠಕ್ಕೆ ಅಮಿತ್ ಶಾ ಅವರು ಭೇಟಿ ಮಾಡಿದ್ದರು.ಅಂದುಬಿಜೆಪಿ ನಾಯಕರಾದ ಬಿಎಸ್ ಯಡಿಯೂರಪ್ಪ, ಶೋಭಾ ಕರಂದ್ಲಾಜೆ, ಕೆಎಸ್ ಈಶ್ವರಪ್ಪ, ಆರ್. ಅಶೋಕ್, ಜಗದೀಶ್ ಶೆಟ್ಟರ್, ಅಶ್ವಥ್ಥ್ ನಾರಾಯಣ್ ರಾಷ್ಟ್ರಾಧ್ಯಕ್ಷರಿಗೆ ಸಾಥ್ ನೀಡಿದ್ದರು.
ಹಳೇ ಮೈಸೂರು ವ್ಯಾಪ್ತಿಯಲ್ಲಿ ಒಕ್ಕಲಿಗ ಸಮುದಾಯ ತನ್ನದೇ ಪ್ರಾಬಲ್ಯ ಹೊಂದಿದ ದೊಡ್ಡ ಸಮುದಾಯವಾಗಿದೆ. ಈಗಾಗಲೇ ಈ ಭಾಗದಲ್ಲಿ ಬಿಜೆಪಿಯ ಇದುವರೆಗಿನ ಸಾಧನೆಯೂ ಅಷ್ಟೊಂದಾಗಿಲ್ಲ. ಈ ವ್ಯಾಪ್ತಿಯಲ್ಲಿ ಬಿಜೆಪಿ ಗೆಲುವು ಸಾಧಿಸಬೇಕಾದರೆ ಬಹಳಷ್ಟು ಶ್ರಮವನ್ನು ವಹಿಸಲೇ ಬೇಕಾಗಿದೆ. ಮಂಡ್ಯ, ಮೈಸೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ತುಮಕೂರು, ಮಂಡ್ಯ ಸೇರಿದಂತೆ ಮತ್ತಿತರ ಕ್ಷೇತ್ರಗಳತ್ತ ದೃಷ್ಠಿ ನೆಟ್ಟು ನೋಡಿದರೆ ಇಲ್ಲಿ ಬಿಜೆಪಿಯದು ಆರಕ್ಕೇರದ ಮೂರಕ್ಕಿಳಿಯದ ಸಾಧನೆ.