2018ರ ಚುನಾವಣೆ: ಈ ಮೂರರಲ್ಲೊಂದು ಕ್ಷೇತ್ರದಿಂದ ಬಿಎಸ್ ವೈ ಕಣಕ್ಕೆ?
ಮುಂದಿನ ವಿಧಾನಸಭೆ ಚುನಾಣೆಯಲ್ಲಿ ಬಿಎಸ್ ವೈ ಉತ್ತರ ಕರ್ನಾಟಕದಿಂದ ಸ್ಪರ್ಧೆ. ರಾಣೆಬೆನ್ನೂರು, ತೇರದಾಳ ಅಥವಾ ಬಾದಾಮಿಯಿಂದ ಸ್ಪರ್ಧೆ ಸಾಧ್ಯತೆ.
Recommended Video
ಬೆಂಗಳೂರು, ಸೆಪ್ಟೆಂಬರ್ 18: ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಮೂಲಗಳ ಪ್ರಕಾರ, ಮುಂದಿನ ಚುನಾವಣೆಯಲ್ಲಿ ಬಿಎಸ್ ವೈ ಅವರಿಗಾಗಿ ಮೂರು ಕ್ಷೇತ್ರಗಳನ್ನು ಆರಿಸಲಾಗಿದ್ದು, ಇವುಗಳಲ್ಲೊಂದು ಕ್ಷೇತ್ರದಲ್ಲಿ ಅವರು ಕಣಕ್ಕಿಳಿಯಲಿದ್ದಾರೆಂದು ಹೇಳಲಾಗಿದೆ.
ಈವರೆಗೆ ಶಿಕಾರಿಪುರದಲ್ಲಿ ಸ್ಪರ್ಧಿಸುತ್ತಿದ್ದ ಅವರನ್ನು ಈ ಬಾರಿ ಉತ್ತರ ಕರ್ನಾಟಕದಿಂದ ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಹಾವೇರಿಯ ರಾಣೆಬೆನ್ನೂರು, ಬಾಗಲಕೋಟೆ ಜಿಲ್ಲೆಯ ತೇರದಾಳ ಹಾಗೂ ಬಾದಾಮಿಯಿಂದ ಅವರನ್ನು ಕಣಕ್ಕಿಳಿಸಲು ಆಲೋಚಿಸಲಾಗಿದೆ.
ಈ ಬಗ್ಗೆ ಬಿಎಸ್ ವೈ ಸಹ ಸುಳಿವನ್ನು ನೀಡಿದ್ದಾರೆ. ತಾವು ವಿಧಾನಸಭೆ ಕ್ಷೇತ್ರವನ್ನು ಬದಲಾಯಿಸಲು ನಿರ್ಧರಿಸಿದ್ದು, ಈ ಬಾರಿ ಉತ್ತರ ಕರ್ನಾಟಕದಿಂದ ಸ್ಪರ್ಧೆಗಿಳಿಯುವ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
ಈ ನಿರ್ಧಾರವನ್ನು ಖುದ್ದು ಬಿಜೆಪಿ ಥಿಂಕ್ ಟ್ಯಾಂಕ್ ಕೈಗೊಂಡಿದೆ ಎಂದು ಹೇಳಿದ ಅವರು, ಉತ್ತರ ಕರ್ನಾಟಕದಿಂದ ತಾವು ಸ್ಪರ್ಧಿಸಿದರೆ, ಅದರ ಪ್ರಭಾವದಿಂದ ಆ ಭಾಗದಲ್ಲಿ ಬಿಜೆಪಿಗೆ ಹೆಚ್ಚು ಸ್ಥಾನಗಳು ಲಭ್ಯವಾಗುವ ಅವಕಾಶಗಳಿವೆ ಎಂಬ ಕಾರಣಕ್ಕಾಗಿ ತಮ್ಮನ್ನು ಉತ್ತರ ಕರ್ನಾಟಕದಿಂದ ಸ್ಪರ್ಧಿಸುವಂತೆ ಮಾಡಲು ಬಿಜೆಪಿ ಆಲೋಚಿಸಿದೆ ಎಂದು ತಿಳಿಸಿದರು.
1983ರಿಂದಲೂ ಯಡಿಯೂರಪ್ಪ ಅವರು ಶಿಕಾರಿಪುರದಿಂದಲೇ ವಿಧಾನಸಭೆಗೆ ಸ್ಪರ್ಧಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದಾರೆ.