ಹೊಸ ಘಟಕ, ಪದಾಧಿಕಾರಿ ಘೋಷಣೆ, ಶೀಘ್ರವೇ ಚುನಾವಣೆ ಅಭ್ಯರ್ಥಿ ಆಯ್ಕೆ ಆರಂಭ: AAP
ದೆಹಲಿ ನಾಯಕರ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದ ಆಮ್ ಆದ್ಮಿ ಪಾರ್ಟಿ (AAP) ಬರಲಿರುವ ವಿಧಾನಸಭೆ ಚುನಾವಣೆ ಸಂಬಂಧ ರಾಜ್ಯದ ನೂತನ ಘಟಕ ಹಾಗೂ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಿಸಿದೆ. ಎಎಪಿ ಅಭ್ಯರ್ಥಿಗಳ ಆಯ್ಕೆ ಯಾವಾಗ ಎಂಬ ಮಾಹಿತಿ ಇಲ್
ಬೆಂಗಳೂರು, ಜನವರಿ 24: ದೆಹಲಿ ನಾಯಕರ ನೇತೃತ್ವದಲ್ಲಿ ಕರ್ನಾಟಕದ ಎಲ್ಲ ಘಟಕಗಳನ್ನು ವಿಸರ್ಜಿಸಿದ್ದ ಆಮ್ ಆದ್ಮಿ ಪಾರ್ಟಿ (AAP) ಬರಲಿರುವ ವಿಧಾನಸಭೆ ಚುನಾವಣೆ ಸಂಬಂಧ ರಾಜ್ಯದ ನೂತನ ಘಟಕ ಹಾಗೂ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಿಸಿದೆ. ಜೊತೆಗೆ ಫ್ರೆಬ್ರುವರಿಯಲ್ಲಿ ಚುನಾವಣೆ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸಲಿದೆ.
ಬೆಂಗಳೂರಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಎಎಪಿ ಉಸ್ತುವಾರಿ ದಿಲೀಪ್ ಪಾಂಡೆ ಈ ಬಗ್ಗೆ ಮಾಹಿತಿ ನೀಡಿದರು. ಇದು ಪದಾಧಿಕಾರಿಗಳ ಮೊದಲ ಪಟ್ಟಿಯಾಗಿದೆ ಹಾಗೂ ಮುಂದಿನ ದಿನಗಳಲ್ಲಿ ಇನ್ನಷ್ಟು ಘೋಷಣೆಗಳ ನಿರೀಕ್ಷೆ ಮಾಡಬಹುದು ಎಂದರು.
AAP VS BJP: ದೆಹಲಿ ಪಾಲಿಕೆ ಚುನಾವಣೆ ಫಲಿತಾಂಶದ ಪ್ರಮುಖ ಅಂಶಗಳು
ವಾರದ ಹಿಂದಷ್ಟೇ ಕರ್ನಾಟಕದಲ್ಲಿ ಆಮ್ ಆದ್ಮಿ ಪಾರ್ಟಿಯ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ವಿಸರ್ಜನೆ ಮಾಡಲಾಗಿತ್ತು. ಗ್ರಾಮ ಸಂಪರ್ಕ ಅಭಿಯಾನದಿಂದಾಗಿ (ಜಿಎಸ್ಎ) ಆಮ್ ಆದ್ಮಿ ಪಾರ್ಟಿಗೆ ಕನ್ನಡಿಗರಿಂದ ಅಭೂತಪೂರ್ವ ಬೆಂಬಲ ದೊರೆತಿದೆ. ಕರ್ನಾಟಕದಾದ್ಯಂತ ಸಾವಿರಾರು ಕಾರ್ಯಕರ್ತರು, ಹಿತೈಷಿಗಳು, ಬೆಂಬಲಿಗರು ಹಾಗೂ ರಾಜಕೀಯ ಹೋರಾಟಗಾರರು ನಮ್ಮ ಪಕ್ಷದಲ್ಲಿದ್ದಾರೆ ಎಂದರು.
ಮುಂಬರಲಿರುವ ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದ ಎಲ್ಲ ಜಿಲ್ಲೆ ಮತ್ತು ಕ್ಷೇತ್ರದಲ್ಲಿ ಪಕ್ಷ ಬೃಹದಾಕಾರವಾಗಿ ಬೆಳೆಯಲಿದೆ. ಪಕ್ಷಕ್ಕೆ ಸೇರ್ಪಡೆಯಾದವರು ನಾಯಕರು ಮೂರು ಸಾಂಪ್ರದಾಯಿಕ ಪಕ್ಷಗಳಿಂದ ಮೋಸ ಹೋಗಿದ್ದಾರೆ. ಬಿಜೆಪಿಯ 40 ಪರ್ಸೆಂಟ್ ಸರ್ಕಾರದಿಂದ ಬೇಸತ್ತಿದ್ದಾರೆ ಎಂದು ತಿಳಿಸಿದರು.
ಮೂರು ಪಕ್ಷದ ನಾಯಕ ಎಎಪಿ ಜತೆಗಿದ್ದಾರೆ
ಜಿಎಸ್ಎ ಭಾಗವಾಗಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮುಂತಾದ ವಿವಿಧ ರಾಜಕೀಯ ಪಕ್ಷಗಳ ಜನರು ನಮ್ಮೊಂದಿಗೆ ಕೈಜೋಡಿಸುತ್ತಿದ್ದಾರೆ. ಇವರು ಕರ್ನಾಟಕದಲ್ಲಿ ಉತ್ತಮ ಬದಲಾವಣೆ ತರವು ಹೆಬ್ಬಯಕೆ ಹೊಂದಿದ್ದಾರೆ. ಕರ್ನಾಟಕವು ಎಎಪಿ ಮೇಲೆ ವಿಶ್ವಾಸ ಇಟ್ಟುಕೊಂಡಿದೆ. ಅನೇಕ ನಾಯಕರ ಬೆಂಬಲದಿಂದಾಗಿ ಆಮ್ ಆದ್ಮಿ ಪಾರ್ಟಿಯು ವಿಜಯದತ್ತ ಸಾಗಲಿದೆ. ಇಂದು ನಾವು ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ರಚನೆ ಹಾಗೂ ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳ ಪದಾಧಿಕಾರಿಗಳನ್ನು ಘೋಷಣೆ ಮಾಡುತ್ತಿದ್ದೇವೆ. ಉಳಿದ ಬ್ಲಾಕ್ ಹಾಗೂ ಸರ್ಕಲ್ ಸಮಿತಿಗಳನ್ನು ಜಿಲ್ಲಾ ಮಟ್ಟದಲ್ಲಿ ಘೋಷಿಸಲಾಗುತ್ತದೆ ಎಂದು ಅವರು ವಿವರಿಸಿದರು.
ಸಾರ್ವಜನಿಕರೊಂದಿಗೆ ನಿರಂತರ ಸಂಪರ್ಕ ಹೊಂದಿರುವ ಹಲವು ಟಿಕೆಟ್ ಆಕಾಂಕ್ಷಿಗಳು ರಾಜ್ಯದ ಎಲ್ಲ 224 ವಿಧಾನಸಭಾ ಕ್ಷೇತ್ರಗಳಲ್ಲಿ ಎಎಪಿಗೆ ಲಭಿಸಿದ್ದಾರೆ. ಫೆಬ್ರುವರಿ ಮೊದಲ ವಾರದಲ್ಲೇ ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಆರಂಭಿಸುತ್ತೇವೆ. ಫೆಬ್ರುವರಿ ಮಧ್ಯ ಭಾಗದೊಳಗೆ ಜಿಲ್ಲೆಗಳ ಹಾಗೂ ಸರ್ಕಲ್ಗಳ ಸಂಘಟನಾ ರಚನೆಯನ್ನು ಘೋಷಿಸುತ್ತೇವೆ. ಅದೇ ವೇಳೆಗೆ ಎಎಪಿಯು ಕರ್ನಾಟಕದ ಎಲ್ಲ 58,000 ಬೂತ್ಗಳನ್ನು ತಲುಪಲಿದೆ ಎಂದು ಹೇಳಿದರು.
ಎಎಪಿಯ ರಾಜ್ಯ ಚುನಾವಣಾ ಉಸ್ತುವಾರಿ ದಿಲೀಪ್ ಪಾಂಡೆಯವರ ಜೊತೆ ರಾಜ್ಯ ಸಂಘಟನಾ ಉಸ್ತುವಾರಿ ದಾಮೋದರನ್, ರಾಜ್ಯ ಸಂಘಟನಾ ಸಹ ಉಸ್ತುವಾರಿ ಉಪೇಂದ್ರ ಗಾವಂಕರ್, ಮಾಧ್ಯಮ ಮತ್ತು ಸಂವಹನಾ ವಿಭಾಗದ ಉಸ್ತುವಾರಿ ಬ್ರಿಜೇಶ್ ಕಾಳಪ್ಪ, ಮಾಧ್ಯಮ ಉಸ್ತುವಾರಿ ಜಗದೀಶ್ ವಿ ಸದಂ ಮತ್ತಿತರರು ಉಪಸ್ಥಿತರಿದ್ದರು.