ನಲಪಾಡ್ ಗ್ಯಾಂಗ್ ದಾಳಿ ಕೇಸ್: ಇನ್ಸ್ ಪೆಕ್ಟರ್ ವಿಜಯ್ ಅಮಾನತು
ಬೆಂಗಳೂರು, ಫೆಬ್ರವರಿ 19: ಶಾಂತಿನಗರ ಕ್ಷೇತ್ರದ ಶಾಸಕ ಎನ್.ಎ ಹ್ಯಾರೀಸ್ ಅವರ ಪುತ್ರ ಮೊಹಮ್ಮದ್ ನಲಪಾಡ್ ವಿರುದ್ಧ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿದ ಪ್ರಕರಣ ಈಗ ಸಿಸಿಬಿ ಪೊಲೀಸರಿಗೆ ವರ್ಗವಾಗಿದೆ. ಮೂರು ತಂಡಗಳನ್ನು ರಚಿಸಿರುವ ಸಿಸಿಬಿ ಪೊಲೀಸರು, ಆರೋಪಿ ಹುಡುಕಾಟದಲ್ಲಿ ತೊಡಗಿದ್ದಾರೆ.
ಪ್ರಕರಣದ ಮೊದಲ ಆರೋಪಿ ಮೊಹಮ್ಮದ್ ರನ್ನು ಬಂಧಿಸಲು ವಿಫಲರಾದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ವಿಜಯ್ ಹಡಗಲಿ ಹಾಗೂ ಎಸಿಪಿ ಮಂಜುನಾಥ್ ಅವರನ್ನು ಕಮೀಷನರ್ ಕಚೇರಿಗೆ ವರ್ಗಾವಣೆಗೊಳಿಸಲಾಗಿದೆ. ಈ ಪ್ರಕರಣದ ತನಿಖೆಯನ್ನು ಸಿಸಿಬಿ ವಿಭಾಗಕ್ಕೆ ವರ್ಗಾಯಿಸಿ ನಗರ ಪೊಲೀಸ್ ಆಯುಕ್ತ ಟಿ ಸುನೀಲ್ ಕುಮಾರ್ ಅವರು ಆದೇಶಿಸಿದ್ದಾರೆ.
ಮಹಮ್ಮದ್ ನಲಪಾಡ್ ಮತ್ತು ಆತನ ಸ್ನೇಹಿತರು ಕ್ಷುಲ್ಲಕ ಕಾರಣಕ್ಕೆ 24 ವರ್ಷ ವಯಸ್ಸಿನ ವಿದ್ವತ್ ಎಂಬಾತನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು.
ನಲಪಾಡ್ ಗ್ಯಾಂಗಿನ ಐವರನ್ನು ಬಂಧಿಸಿದ ಪೊಲೀಸರು
ಗೃಹಸಚಿವರು ನೀಡಿದ್ದ ಡೆಡ್ ಲೈನ್ : ಈ ಪ್ರಕರಣದ ಪ್ರಮುಖ ಆರೋಪಿ ಶಾಸಕರ ಪುತ್ರ ಮೊಹಮ್ಮದ್ ನನ್ನು ಭಾನುವಾರ ರಾತ್ರಿ 8 ಗಂಟೆ ಒಳಗಾಗಿ ಬಂಧಿಸಬೇಕು, ಇಲ್ಲದಿದ್ದರೆ, ತನಿಖಾಧಿಕಾರಿಗಳನ್ನು ಅಮಾನತುಗೊಳಿಸಲಾಗುತ್ತದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಡೆಡ್ಲೈನ್ ನೀಡಿದ್ದರು. ಹೀಗಾಗಿ ಇನ್ಸ್ ಪೆಕ್ಟರ್ ವಿಜಯ್ ಅಮಾನತುಗೊಂಡಿದ್ದಾರೆ.
ಹ್ಯಾರೀಸ್ ಪುತ್ರನಿಂದ ಹಲ್ಲೆ : ಯಾರು, ಏನು ಹೇಳಿದರು?
ಆರೋಪಗಳು: ಈ ಮೊಹಮ್ಮದ್ ನಲಪಾಡ್ ಆರೋಪಿ ನಂ 1 ಆಗಿದ್ದಾರೆ. ಐಪಿಸಿ ಸೆಕ್ಷನ್ 341, 326, 504, 143, 147, 144, 149, 141, 506 ಸೆಕ್ಷನ್ಗಳಡಿ ಪ್ರಕರಣ ದಾಖಲಿಸಲಾಗಿದೆ. ಸೆಕ್ಷನ್ 307(ಕೊಲೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸುವಂತೆ ವಿದ್ವತ್ ಅವರ ತಂದೆ ಲೋಕನಾಥ್ ಅವರು ಮನವಿ ಮಾಡಿದ್ದಾರೆ. ಈ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದರೆ, ಅದು ಜಾಮೀನು ರಹಿತ ಕೇಸ್ ಆಗುತ್ತಿತ್ತು. ಆದರೆ, ಉದ್ದೇಶಪೂರ್ವಕವಾಗಿ ಈ ಸೆಕ್ಷನ್ ಹಾಕಿಲ್ಲ ಎಂದು ಆರೋಪಿಸಿದ್ದಾರೆ.