ಸಂಚಾರಿ ಪೊಲೀಸರ ಮೇಲೆ ಹಲ್ಲೆ ಯತ್ನ: ಆರೋಪಿಗಳಿಬ್ಬರ ಖುಲಾಸೆ
ಬೆಂಗಳೂರು, ಅ.2: ಸಂಚಾರಿ ಪೊಲೀಸರ ವೈಫಲ್ಯದಿಂದಾಗಿ ಅವರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದ ಆರೋಪಿಗಳಿಬ್ಬನ್ನು ಹೈಕೋರ್ಟ್ ಖುಲಾಸೆ ಮಾಡಿದೆ.
ಐದು ವರ್ಷಗಳ ಹಿಂದೆ ನಗರದಲ್ಲಿ ನಡೆದ ಕುಡಿದು ವಾಹನ ಚಲಾಯಿಸುತ್ತಿದ್ದವರನ್ನು ಹಿಡಿಯಲು ಮುಂದಾಗಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿಯ ಮೇಲೆ ಹಲ್ಲೆ ಪ್ರಕರಣದಲ್ಲಿ ಹೈಕೋರ್ಟ್ ಈ ಆದೇಶ ನೀಡಿದೆ.
ಆರೋಪಿಗಳ ವಿರುದ್ಧ ಕೇಸ್ ದಾಖಲಿಸುವಾಗ ಅನುಸರಿಸಬೇಕಾದ ನಿಯಮಗಳನ್ನು ಪಾಲನೆ ಮಾಡಿಲ್ಲ ಹಾಗೂ ಆರೋಪ ಸಂಬಂಧ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ ಎಂದು ಕೋರ್ಟ್ ಖುಲಾಸೆಗೆ ಕಾರಣ ನೀಡಿದೆ.
ಆರೋಪಿಗಳಾದ ಪ್ರಿಯಾಂಶು ಕುಮಾರ್ ಹಾಗೂ ಅಲೋಕ್ ಕುಮಾರ್ ಸಲ್ಲಿಸಿದ್ದ ಕ್ರಿಮಿನಲ್ ಮರುಪರಿಶೀಲನಾ ಅರ್ಜಿ ಪುರಸ್ಕರಿಸಿರುವ ಮಾಡಿರುವ ನ್ಯಾಯಮೂರ್ತಿ ಎಂ.ನವಾಜ್ ಅವರಿದ್ದ ಏಕಸದಸ್ಯಪೀಠ ಈ ಆದೇಶ ಮಾಡಿದೆ.
ಹೈಕೋರ್ಟ್ ಆದೇಶವೇನು?: ಪ್ರಕರಣದ ದೋಷಾರೋಪ ಪಟ್ಟಿಯ ಪ್ರಕಾರ, ಕುಡಿದು ವಾಹನ ಚಲಾಯಿಸುತ್ತಿದ್ದ ಆರೋಪಿಗಳನ್ನು ತಡೆದು ಪ್ರಶ್ನಿಸಿದಾಗ ಅವರು ತಮ್ಮ ಮೇಲೆ ಹಲ್ಲೆ ನಡೆಸಿದರು. ಘಟನೆ ಸಂದರ್ಭದಲ್ಲಿಸ್ಥಳದಲ್ಲಿದ್ದ ಕೆಲ ಸಾರ್ವಜನಿಕರು ಆರೋಪಿಗಳನ್ನು ವಶಕ್ಕೆ ಪಡೆಯಲು ಸಹಾಯ ಮಾಡಿದರು ಎಂದು ಎಚ್ಎಎಲ್ ಟ್ರಾಫಿಕ್ ಇನ್ಸ್ಪೆಕ್ಟರ್ ಅವರ ದೂರಿನಲ್ಲಿ ಹೇಳಲಾಗಿದೆ. ಇಬ್ಬರು ಪೊಲೀಸ್ ಕಾನ್ಸ್ಟೆಬಲ್ಗಳು ಪ್ರತ್ಯಕ್ಷದರ್ಶಿಗಳಾಗಿದ್ದಾರೆ. ಆದರೆ, ಸ್ಥಳದಲ್ಲಿದ್ದ ಸಾರ್ವಜನಿಕರ ಹೇಳಿಕೆಗಳನ್ನು ದಾಖಲಿಸಿಕೊಂಡಿಲ್ಲ. ಅವರಲ್ಲಿಯಾರೊಬ್ಬರನ್ನೂ ಪ್ರತ್ಯಕ್ಷದರ್ಶಿಗಳಾಗಿ ಗುರುತಿಸಲಾಗಿಲ್ಲಎಂದು ನ್ಯಾಯಾಲಯ ಆದೇಶದಲ್ಲಿಹೇಳಿದೆ.
ಸಂಚಾರಿ ವಿಭಾಗದ ಹೆಚ್ಚುವರಿ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಕಾರ, ಮದ್ಯಪಾನ ಮಾಡಿ ವಾಹನ ಚಲಾಯಿಸಿದ ಪ್ರಕರಣಗಳಲ್ಲಿಪೊಲೀಸರು ದಂಡ ವಸೂಲಿ ಮಾಡಲು ಅವಕಾಶವಿಲ್ಲ. ದಂಡವನ್ನು ನ್ಯಾಯಾಲಯದಲ್ಲಿ ಮಾತ್ರ ಪಾವತಿ ಮಾಡಬೇಕು. ಆದರೆ, ಈ ಪ್ರಕರಣದಲ್ಲಿಪೊಲೀಸರು ಅರ್ಜಿದಾರರಿಂದ ದಂಡ ವಸೂಲಿಗೆ ಮುಂದಾಗಿದ್ದರು ಎನ್ನುವುದು ತಿಳಿದು ಬಂದಿದೆ. ಜತೆಗೆ, ತಪಾಸಣೆಯ ಸಂದರ್ಭದಲ್ಲಿ ವಿಡಿಯೋಗ್ರಫಿ ಮಾಡಬೇಕು ಎಂದು ಸುತ್ತೋಲೆಯಲ್ಲಿ ಹೇಳಲಾಗಿದೆ.
ಆದರೆ, ಈ ಯಾವ ನಿಯಮಗಳನ್ನೂ ಪಾಲನೆ ಮಾಡಲಾಗಿಲ್ಲ. ಅರ್ಜಿದಾರರು ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲಎಂದು ಅಭಿಪ್ರಾಯಪಟ್ಟಿರುವ ಪೀಠ, ಅರ್ಜಿದಾರರನ್ನು ಪ್ರಕರಣದಿಂದ ಬಿಡುಗಡೆಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಎಚ್ಎಎಲ್ ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್, 2017ರ ಏ.9 ರಂದು ರಾತ್ರಿ ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ದೊಡ್ಡನೆಕ್ಕುಂದಿಯಲ್ಲಿ ಕೆಲ ವ್ಯಕ್ತಿಗಳು ಕಾರೊಂದನ್ನು ಜಖಂಗೊಳಿಸಿದ್ದರು. ಮಾಹಿತಿ ತಿಳಿದ ತಕ್ಷಣ ಅವರು ಸ್ಥಳಕ್ಕೆ ತೆರಳಿದ್ದೆ. ಆದರೆ, ಅಲ್ಲಿಯಾರೂ ಸಿಕ್ಕಿರಲಿಲ್ಲ.
ಬೆಳಗಿನ ಜಾವ 3 ಗಂಟೆ ಸಂದರ್ಭದಲ್ಲಿ ಅಲೋಕ್ ಕುಮಾರ್ ದ್ವಿಚಕ್ರವಾಹನದಲ್ಲಿ ಸಂಶಯಾಸ್ಪಾದವಾಗಿ ಹೋಗುತ್ತಿದ್ದುದನ್ನು ಗಮನಿಸಿ, ಆತನ ಬಗ್ಗೆ ವಿಚಾರಿಸುತ್ತಿದ್ದೆ. ಆಗ ಅಲೋಕ್ ತನ್ನ ಸ್ನೇಹಿತ ಪ್ರಿಯಾಂಶು ಕುಮಾರ್ನನ್ನು ಸ್ಥಳಕ್ಕೆ ಕರೆಸಿದ್ದ. ಮದ್ಯಪಾನ ಮಾಡಿದ್ದ ಅಲೋಕ್ ಕುಮಾರ್ ತಮ್ಮೊಂದಿಗೆ ಬರಲು ನಿರಾಕರಿಸಿದ್ದಲ್ಲದೆ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆತನ ಸ್ನೇಹಿತ ಪ್ರಿಯಾಂಶು ಕುಮಾರ್ ನನ್ನ ಮೇಲೆ ಹಲ್ಲೆನಡೆಸಿದ್ದ ಎಂದು ದೂರಿದ್ದರು.
ಸ್ಥಳದಲ್ಲಿದ್ದ ಸಾರ್ವಜನಿಕರ ನೆರವಿನಿಂದ ಆರೋಪಿಗಳನ್ನು ವಶಕ್ಕೆ ಪಡೆದು, ವಾಹನವನ್ನು ಸೀಜ್ ಮಾಡಲಾಗಿತ್ತು ಎಂದು ಹೇಳಿದ್ದರು. ಹಲ್ಲೆ ನಡೆಸಿದ ಹಾಗೂ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ ಆರೋಪದಲ್ಲಿ ಇನ್ಸ್ಪೆಕ್ಟರ್ ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಿಸಿದ್ದ ಮಹದೇವಪುರ ಪೊಲೀಸರು, ತನಿಖೆ ನಡೆಸಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದಿಂದ ಮುಕ್ತಗೊಳಿಸುವಂತೆ ಕೋರಿ ಆರೋಪಿಗಳು ಸಲ್ಲಿಸಿದ್ದ ಅರ್ಜಿಯನ್ನು 43ನೇ ಎಸಿಎಂಎಂ ನ್ಯಾಯಾಲಯ 2018ರ ಅ.26ರಂದು ವಜಾಗೊಳಿಸಿತ್ತು. ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿತ್ತು.