ಆಹಾರ ಉಚಿತವಾಗಿ ನೀಡಲಿಲ್ಲ ಎಂದು ಡೆಲಿವರಿ ಬಾಯ್ ಮೇಲೆ ಹಲ್ಲೆ; ಎರಡು ತಿಂಗಳಲ್ಲಿ ಮತ್ತೊಂದು ಪ್ರಕರಣ
ಬೆಂಗಳೂರು, ಜೂನ್ 07: ನಗರದಲ್ಲಿ ಆಹಾರ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿರುವ ಸಂಗತಿ ಬೆಳಕಿಗೆ ಬಂದಿದೆ. ಮಾರ್ಚ್ ತಿಂಗಳಿನಲ್ಲಷ್ಟೇ ಜೊಮ್ಯಾಟೊ ಡೆಲಿವರಿ ಸಂಸ್ಥೆಯಲ್ಲಿ ಇಂಥದ್ದೇ ಪ್ರಕರಣ ನಡೆದಿತ್ತು. ಆಹಾರ ಡೆಲಿವರಿ ವಿಳಂಬವಾಗಿದ್ದನ್ನು ಪ್ರಶ್ನಿಸಿದ್ದಕ್ಕೆ, ಡೆಲಿವರಿ ಬಾಯ್ ತಮ್ಮ ಮೇಲೆ ಹಲ್ಲೆ ನಡೆಸಿದ್ದಾಗಿ ಮಹಿಳೆಯೊಬ್ಬರು ದೂರಿದ್ದರು. ಆದರೆ ಮಹಿಳೆಯೇ ತನ್ನ ಮೇಲೆ ಹಲ್ಲೆ ನಡೆಸಿದ್ದಾಗಿ ಡೆಲಿವರಿ ಬಾಯ್ ಕಾಮರಾಜ್ ಪ್ರತಿ ದೂರು ನೀಡಿದ್ದರು. ಇದೀಗ ಡೆಲಿವರಿ ಬಾಯ್ ಮೇಲೆ ಹಲ್ಲೆ ನಡೆಸಿರುವ ಮತ್ತೊಂದು ಸಂಗತಿ ನಡೆದಿದೆ.
ಸ್ವಿಗ್ಗಿಯಲ್ಲಿ ಕೆಲಸ ಮಾಡುತ್ತಿರುವ 25 ವರ್ಷದ ಕಾರ್ತಿಕ್ ಹರಿಪ್ರಸಾದ್ ಎಂಬ ಡೆಲಿವರಿ ಬಾಯ್ ಮೇಲೆ ನಾಲ್ವರು ಯುವಕರು ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಆರ್ಡರ್ ಮಾಡಿದ್ದ ಆಹಾರವನ್ನು ಉಚಿತವಾಗಿ ನೀಡಲಿಲ್ಲ ಎಂಬ ಕಾರಣಕ್ಕೆ ಹಲ್ಲೆ ನಡೆಸಿರುವುದಾಗಿ ತಿಳಿದುಬಂದಿದೆ. ಮುಂದೆ ಓದಿ...
ರಾಜಾಜಿನಗರದಲ್ಲಿ ನಡೆದ ಘಟನೆ
ಮೇ 28ರಂದು ರಾಜಾಜಿನಗರದಲ್ಲಿ ಸಂಜೆ ವೇಳೆ ಈ ಸಂಗತಿ ನಡೆದಿದೆ. ಸ್ವಿಗ್ಗಿಯಲ್ಲಿ ಆಹಾರ ಆರ್ಡರ್ ಮಾಡಿದ್ದ ನಂತರ ಗ್ರಾಹಕ ಅದನ್ನು ರದ್ದುಗೊಳಿಸಿದ್ದಾರೆ. ಆದರೆ ರದ್ದು ಮಾಡಲು ಸಾಧ್ಯವಾಗಿಲ್ಲ. ಅಷ್ಟೊತ್ತಿಗಾಗಲೇ ಡೆಲಿವರಿ ಬಾಯ್ ಕಾರ್ತಿಕ್ ಸ್ಥಳಕ್ಕೆ ಬಂದಿದ್ದಾರೆ. ಆಹಾರ ತೆಗೆದುಕೊಂಡು ಹಣ ನೀಡುವಂತೆ ಕಾರ್ತಿಕ್ ಕೇಳಿದ್ದಾರೆ. ಆದರೆ ಹಣ ನೀಡಲು ನಿರಾಕರಿಸಿದ್ದು, ಉಚಿತವಾಗಿ ನೀಡುವಂತೆ ಕೇಳಿದ್ದಾರೆ.
ಜೊಮ್ಯಾಟೋ ಪ್ರಕರಣ: ಆರೋಪ ಮಾಡಿದ್ದ ಯುವತಿ ಮೇಲೆ ಬಿತ್ತು ಕೇಸ್
ಡೆಲಿವರಿ ಬಾಯ್ ಮೇಲೆ ಕಲ್ಲು ತೂರಿದ ಯುವಕರು
ಈ ವಾಗ್ವಾದದಲ್ಲಿ ನಾಲ್ವರು ಯುವಕರು ಕಾರ್ತಿಕ್ ಮೇಲೆ ಏಕಾಏಕಿ ಹಲ್ಲೆ ನಡೆಸಿರುವುದಾಗಿ ತಿಳಿಸಿದ್ದಾರೆ. ಕಾರ್ತಿಕ್ ಅವರನ್ನು ಅವಾಚ್ಯವಾಗಿ ನಿಂದಿಸಿ ಕಲ್ಲು ತೂರಾಟ ನಡೆಸಿದ್ದು, ತಲೆಯ ಎಡಭಾಗಕ್ಕೆ ಗಾಯವಾಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಗಿ ತಿಳಿದುಬಂದಿದೆ. ಈ ಹಲ್ಲೆಯಲ್ಲಿ ಕಾರ್ತಿಕ್ ಫೋನ್, ಬೈಕ್, ಹೆಲ್ಮೆಟ್ ಗಳು ನಜ್ಜುಗುಜ್ಜಾಗಿವೆ. ಜೊತೆಗೆ ಡೆಲಿವರಿ ಬಾಯ್ ಇಟ್ಟುಕೊಂಡಿದ್ದ 1800 ರೂಪಾಯಿಯನ್ನೂ ಕಿತ್ತುಕೊಂಡು ಹೋಗಿರುವುದಾಗಿ ಆರೋಪಿಸಲಾಗಿದೆ.
ಅದೇ ಕಂಪನಿಯವರು ಗುರುತಿಸಿ ಆಸ್ಪತ್ರೆಗೆ ಸೇರಿಸಿದರು
ಪ್ರಜ್ಞೆ ತಪ್ಪಿ ಬಿದ್ದಿದ್ದ ಕಾರ್ತಿಕ್ ಅವರನ್ನು ಸ್ವಿಗ್ಗಿ ಕಂಪನಿಯವರೇ ಗುರುತಿಸಿ ಪೊಲೀಸರಿಗೆ ದೂರು ನೀಡಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆಗೆ ದಾಖಲಿಸಿರುವುದಾಗಿ ತಿಳಿದುಬಂದಿದೆ. ಕೆಲವೇ ದಿನಗಳಲ್ಲಿ ತಂಗಿ ಮದುವೆಯಿರುವ ಕಾರಣ ಆಂಧ್ರದ ಚಿತ್ತೂರು ಜಿಲ್ಲೆಗೆ ದೂರು ನೀಡದೆಯೇ ಕಾರ್ತಿಕ್ ಹೋಗಿದ್ದಾರೆ. ಬುಧವಾರ ಬೆಂಗಳೂರಿಗೆ ವಾಪಸ್ಸಾಗಿ ದೂರು ನೀಡುವುದಾಗಿ ಕಾರ್ತಿಕ್ ತಿಳಿಸಿದ್ದಾರೆ. ಈ ಸಂಬಂಧ ಪೊಲೀಸರೊಂದಿಗೆ ಸಂಪರ್ಕದಲ್ಲಿರುವುದಾಗಿಯೂ ಹೇಳಿದ್ದಾರೆ.
Recommended Video
ಬೆಂಗಳೂರಿಗೆ ವಾಪಸ್ಸಾಗುವ ಕಾರ್ತಿಕ್
ಈ ಸಂಗತಿ ಹಲ್ಲೆಗೊಳಗಾದ ಡೆಲಿವರಿ ಬಾಯ್ ಸ್ನೇಹಿತ ವಾಸಿಮ್ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ನಂತರ ಬೆಳಕಿಗೆ ಬಂದಿದೆ. ಕಾರ್ತಿಕ್ಗೆ ಆರ್ಥಿಕ ನೆರವೂ ದೊರೆತಿರುವುದಾಗಿ ತಿಳಿದುಬಂದಿದೆ. "ಪೊಲೀಸರು ನನಗೆ ಸಹಾಯ ಮಾಡಿದ್ದಾರೆ. ನನ್ನೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಸಾಮಾಜಿಕ ಜಾಲತಾಣದ ಮೂಲಕ ನನಗೆ ಹಣದ ನೆರವೂ ಸಿಕ್ಕಿದೆ. ಹೆಚ್ಚಿನ ಹಣವನ್ನೇ ಜನರು ನೀಡಿದ್ದು, ಅದನ್ನು ಅವಶ್ಯಕತೆಯಿರುವವರಿಗೆ ನೀಡುತ್ತೇನೆ" ಎಂದು ಕಾರ್ತಿಕ್ ತಿಳಿಸಿದ್ದಾರೆ. ಸ್ವಿಗ್ಗಿ ಕೂಡ ಪೊಲೀಸರಲ್ಲಿ ದೂರು ದಾಖಲಿಸಿದ್ದು, ಕಾರ್ತಿಕ್ಗೆ ಕಾನೂನು ನೆರವು ನೀಡುವುದಾಗಿ ತಿಳಿದುಬಂದಿದೆ.